ಯುಪಿ: ನಿಶಾದ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಲಕ್ನೋ ಜನವರಿ 31: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ನಿಶಾದ್ ಪಕ್ಷವು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ನಾಲ್ಕು ಅಭ್ಯರ್ಥಿಗಳ ಹೆಸರುಗಳಿವೆ. ಕಲ್ಪಿ, ಕತೇರಿ, ತಮ್ಕುಹಿರಾಜ್ ಮತ್ತು ಅತ್ರೌಲಿಯಾ ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಸಂಜಯ್ ಕುಮಾರ್ ನಿಶಾದ್ ಮಾಹಿತಿ ನೀಡಿದ್ದಾರೆ. ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮಿತ್ರ ಪಕ್ಷ ನಿಶಾದ್ ಪಕ್ಷ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದೆ. ಜಲೌನ್ ಜಿಲ್ಲೆಯ ಕಲ್ಪಿ ವಿಧಾನಸಭೆಯಿಂದ ಛೋಟೆ ಸಿಂಗ್, ಅಂಬೇಡ್ಕರ್ನಗರದ ಕತೇರಿ ಕ್ಷೇತ್ರದಿಂದ ಅವಧೇಶ್ ದ್ವಿವೇದಿ, ಕುಶಿನಗರ ಜಿಲ್ಲೆಯ ತಮ್ಕುಹಿರಾಜ್ ಕ್ಷೇತ್ರದಿಂದ ಡಾ. ಅಸಿಮ್ ಕುಮಾರ್, ಅಜಂಗಢದ ಅಟ್ರೌಲಿಯಾ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ.
ಬಿಜೆಪಿ ಯುಪಿಯಲ್ಲಿ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ (ಎಸ್) ಮತ್ತು ಸಂಜಯ್ ನಿಶಾದ್ ಅವರ ನಿಶಾದ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಕುರಿತು ಈಗಾಗಲೇ ಮೂರೂ ಪಕ್ಷಗಳ ನಡುವೆ ಮಾತುಕತೆ ನಡೆದಿದೆ. ಅಪ್ನಾ ದಳ (ಎಸ್) ತನ್ನ 6 ಅಭ್ಯರ್ಥಿಗಳನ್ನು ಘೋಷಿಸಿದೆ. ನಿಶಾದ್ ಪಕ್ಷವು ತನ್ನ ನಾಲ್ವರು ಅಭ್ಯರ್ಥಿಗಳನ್ನು ಭಾನುವಾರ ಘೋಷಿಸಿದೆ. ನಿಶಾದ್ ಸಮುದಾಯದ ಜನರನ್ನು ಮಲ್ಲಾಹ್, ಮಾಂಝಿ, ನಿಶಾದ್, ಮೀನುಗಾರ, ಬಿಂದ್, ಕಹಾರ್, ಕಶ್ಯಪ್ ಎಂದು ಕರೆಯಲಾಗುತ್ತದೆ. ನಿಶಾದ್ ಮತಗಳ ಸಮೀಕರಣ ಮತ್ತು ಸಮಾಜದ ರಾಜಕೀಯ ಶಕ್ತಿಯನ್ನು ನೋಡಿ, ಬಿಜೆಪಿ ಯುಪಿಯಲ್ಲಿ ನಿಶಾದ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಜನವರಿ 27ರಂದು ಮೂವರು ಅಭ್ಯರ್ಥಿಗಳನ್ನು ಘೋಷಿಸಿದೆ. ಕಾನ್ಪುರ ನಗರ, ಫರೂರ್ಕಾಬಾದ್ ಮತ್ತು ಬಹ್ರೈಚ್ನಿಂದ ತಲಾ ಒಬ್ಬ ಅಭ್ಯರ್ಥಿಯ ಹೆಸರನ್ನು ಪಕ್ಷ ಘೋಷಿಸಿದೆ. ಈ ಹಿಂದೆ ಅಪ್ನಾ ದಳದ ಮುಖ್ಯಸ್ಥೆ ಮತ್ತು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು ರಾಂಪುರ ಜಿಲ್ಲೆಯ ಸ್ವರ್ ವಿಧಾನಸಭಾ ಕ್ಷೇತ್ರದಿಂದ ಹೈದರ್ ಅಲಿ ಖಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದರು. ಇದರೊಂದಿಗೆ ಅಪ್ನಾ ದಳ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕಳೆದ ಬಾರಿ ಬಿಜೆಪಿ ಅಪ್ನಾ ದಳಕ್ಕೆ 11 ಸ್ಥಾನಗಳನ್ನು ನೀಡಿತ್ತು, ಅದರಲ್ಲಿ 9 ಸ್ಥಾನಗಳನ್ನು ಗೆದ್ದಿತ್ತು. ಮೂಲಗಳ ಪ್ರಕಾರ ಮುಂಬರುವ ಚುನಾವಣೆಗೆ ಬಿಜೆಪಿಯಿಂದ 19 ಸ್ಥಾನಗಳನ್ನು ಪಡೆಯುವ ಒಪ್ಪಂದಕ್ಕೆ ಅಪ್ನಾ ದಳ ಸಹಿ ಹಾಕಿದೆ.
ಅಪ್ನಾ ದಳ ಕಾಂಗ್ರೆಸ್ನಿಂದ ಬಂದ 36 ವರ್ಷದ ಹೈದರ್ ಅಲಿ ಖಾನ್ ಅವರನ್ನು ರಾಂಪುರದ ಸ್ವರ್ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಕಣಕ್ಕಿಳಿಸಿದೆ. ಜನವರಿ 13 ರಂದು 2022 ರ ಯುಪಿ ವಿಧಾನಸಭಾ ಚುನಾವಣೆಗೆ ಹೈದರ್ ಅಲಿ ಖಾನ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಇದಾದ ನಂತರ ಅವರು ಪಕ್ಷಗಳನ್ನು ಬದಲಾಯಿಸಿದರು ಮತ್ತು ಅಪ್ನಾ ದಳ (ಎಸ್) ಗೆ ಸೇರಿದರು. ಹೈದರ್ ಅಲಿ ಖಾನ್ ಅವರು ಹಿರಿಯ ಕಾಂಗ್ರೆಸ್ ನಾಯಕ ನೂರ್ ಬಾನೋ ಅವರ ಮೊಮ್ಮಗ. ಹೈದರ್ನ ತಂದೆ ನವಾಬ್ ಕಾಜಿಮ್ ಅಲಿ ಮತ್ತು ಎಸ್ಪಿ ಸಂಸದ ಅಜಂ ಖಾನ್ ನಡುವೆ ಬಹಳ ಹಿಂದಿನಿಂದಲೂ ವೈಷಮ್ಯವಿದೆ. ಅಷ್ಟೇ ಅಲ್ಲ ಇವರು ಬಿಲಾಸ್ಪುರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರಾಥಮಿಕವಾಗಿ ಹಿಂದುಳಿದ ಜಾತಿಗಳ ವಿಭಾಗಗಳಿಂದ ತಮ್ಮ ಬೆಂಬಲವನ್ನು ಪಡೆಯಲು ಎರಡು ಪಕ್ಷಗಳಾದ ಅಪ್ನಾ ದಳ ಮತ್ತು ನಿಶಾದ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿನ ಮೂರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಾಲುದಾರರು 403 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದ್ದಾರೆ.
Recommended Video
ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ಸಾಮಾಜದಲ್ಲಿ ಸುಧಾರಣೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು. ಅಪ್ನಾ ದಳದ ಮುಖ್ಯಸ್ಥೆ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಅವರು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.












Click it and Unblock the Notifications