ಇಂದಿರಾ ಗಾಂಧಿ ಪ್ರತಿಮೆಗೆ ಬುರ್ಖಾ ತೊಡಿಸಿದವರು ಯಾರು?
ಲಕ್ನೋ, ಜೂನ್ 3: ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಪ್ರತಿಮೆಗೆ ದುಷ್ಕರ್ಮಿಗಳು ಬುರ್ಖಾ ತೊಡಿಸಿದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಿದೆ.
ರಾಜ್ಯದ ಲಖೀಂಪುರ ಕೇರಿ ಜಿಲ್ಲೆಯ ಗೋಲಾ ಎನ್ನುವಲ್ಲಿ ಈ ಘಟನೆ ವರದಿಯಾಗಿದ್ದು, ಪ್ರತಿಮೆಗೆ ತೊಡಿಸಿದ್ದ ಬುರ್ಖಾವನ್ನು ತೆರವುಗೊಳಿಸಲಾಗಿದ್ದು, ತಪ್ಪಿತಸ್ಥರನ್ನು ಶೀಘ್ರವೇ ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.
ಸೋಮವಾರ ಮುಂಜಾನೆ ವಾಕಿಂಗ್ ಹೋಗುತ್ತಿದ್ದ ಕೆಲವರು ಪ್ರತಿಮೆಗೆ ಬುರ್ಖಾ ತೊಡಿಸಿರುವುದನ್ನು ನೋಡಿ, ಒಬ್ಬರಿಗೊಬ್ಬರು ವಿಷಯವನ್ನು ಹಂಚಿಕೊಂಡಿದ್ದಾರೆ. ಇದು, ಕಾಂಗ್ರೆಸ್ ಕಾರ್ಯಕರ್ತರ ಗಮನಕ್ಕೆ ಬಂದು, ದೊಡ್ಡ ಸಂಖ್ಯೆಯಲ್ಲಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಲು ಆರಂಭಿಸಿದ್ದರು.

ಕೂಡಲೇ ಕಾರ್ಯಪ್ರವತ್ತರಾದ ಜಿಲ್ಲಾ ಪೊಲೀಸರು, ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿ, ಪ್ರತಿಭಟನಾಕಾರರ ಮನವೊಲಿಸಿದ್ದಾರೆ.
ಪವಿತ್ರ ರಂಜಾನ್ ಮಾಸದ ವೇಳೆ, ಶಾಂತಿ ಕದಡುವ ಉದ್ದೇಶದಿಂದ ಕೃತ್ಯವನ್ನು ಎಸಗಿರುವುದು ಸ್ಪಷ್ಟ. ಇಂತವರನ್ನು ಗುರುತಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನೇಪಾಳದ ಗಡಿಯಲ್ಲಿ ಇರುವ ಲಖೀಂಪುರ ಕೇರಿ ಜಿಲ್ಲೆ, ವಿಸ್ತೀರ್ಣದಲ್ಲಿ ಉತ್ತರಪ್ರದೇಶದ ಅತಿದೊಡ್ಡ ಜಿಲ್ಲೆಯಾಗಿದ್ದು, ರಾಜಧಾನಿ ಲಕ್ನೋದಿಂದ 130 ಕಿ.ಮೀ ದೂರದಲ್ಲಿದೆ.












Click it and Unblock the Notifications