ಬಿಜೆಪಿ, ಎಸ್ಪಿಗೆ ತಲಾಖ್ ಎನ್ನುವ ಸಮಯವಿದು: ಓವೈಸಿ
ನವದೆಹಲಿ, ಫೆಬ್ರವರಿ 19: ಬಿಜೆಪಿ ಹಾಗೂ ಎಸ್ಪಿಗೆ ತಲಾಖ್ ಎನ್ನುವ ಸಮಯ ಬಂದಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನಕ್ಕೂ ಮುನ್ನ ಪ್ರಚಾರ ನಡೆಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಮತದಾರರಿಗೆ ತಲಾಕ್, ತಲಾಖ್, ತಲಾಖ್ ಎಂದು ಹೇಳುವಂತೆ ಮನವಿ ಮಾಡಿದರು.
ತಮ್ಮ ಚುನಾವಣಾ ಪ್ರಚಾರಗಳಲ್ಲಿ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಮಾತನಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ,'ಮೋದಿ ತ್ರಿವಳಿ ತಲಾಖ್ ಬಗ್ಗೆ ಮಾತನಾಡುತ್ತಾರೆ.ಆದರೆ ಈ ಬಾರಿ ಜನರು ಬಿಜೆಪಿ ಮತ್ತು ಎಸ್ಪಿ ಎರಡಕ್ಕೂ ತಲಾಖ್, ತಲಾಖ್, ತಲಾಖ್ ಹೇಳಬೇಕು, ಅವರ ಕಥೆಯನ್ನು ಉತ್ತರ ಪ್ರದೇಶದಲ್ಲಿ ಕೊನೆಗೊಳಿಸಲಾಗುವುದು.

ಜಲೌನ್ ಜಿಲ್ಲೆಯ ಮಧೋಗಢ ವಿಧಾನಸಭಾ ಕ್ಷೇತ್ರದಲ್ಲಿ ಎಐಎಂಐಎಂ ಭಾಗವಾಗಿರುವ ಮೈತ್ರಿಕೂಟದ ಭಗೀದರಿ ಪರಿವರ್ತನ್ ಮೋರ್ಚಾದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಓವೈಸಿ ಈ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ.ಆದಿತ್ಯನಾಥ್ ಮತ್ತು ಯಾದವ್ ಇಬ್ಬರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ ಓವೈಸಿ 'ಅವರು ಸಂವಿಧಾನಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ, ಅವರು ತಾವೇ ಅಧಿಕಾರ ಪಡೆಯಲು ಬಯಸುತ್ತಾರೆ" ಎಂದು ಹೇಳಿದರು.
ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅಸಾದುದ್ದೀನ್ ಓವೈಸಿ, 'ಎಸ್ಪಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಯೋಗಿ-ಅಖಿಲೇಶ್ ಬೇರ್ಪಟ್ಟ ಸಹೋದರರು ಎಂದು ತೋರುತ್ತದೆ.
ಇಬ್ಬರ ಮನಸ್ಥಿತಿಯೂ ಒಂದೇ. ಇಬ್ಬರೂ ಕ್ರೂರ ಮತ್ತು ದುರಹಂಕಾರಿಗಳು. ಅವರು ತಮ್ಮನ್ನು ತಾವು ನಾಯಕರೆಂದು ಪರಿಗಣಿಸುವುದಿಲ್ಲ, ಚಕ್ರವರ್ತಿಗಳೆಂದು ಪರಿಗಣಿಸಿದ್ದಾರೆ" ಎಂದು ಓವೈಸಿ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.












Click it and Unblock the Notifications