'ಕ್ರಿಮಿನಲ್ ಇಮೇಜ್ ಹೊಂದಿರುವ 99 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ' ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ
ಲಕ್ನೋ ಜನವರಿ 30: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ನಡೆಯಲಿದೆ. ಮತದಾನಕ್ಕೂ ಮುನ್ನ ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ರಾಜಕಾರಣಿಗಳು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಭಾರತೀಯ ಜನತಾ ಪಕ್ಷ ಮತ್ತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಇಮೇಜ್ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಜನವರಿ 30 ರಂದು ಭಾನುವಾರ ಟ್ವೀಟ್ ಮಾಡಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅಖಿಲೇಶ್ ಯಾದವ್, "ಮುಂಬರುವ ಚುನಾವಣೆಯಲ್ಲಿ ಈ 'ಲಾಲ್ ಟೋಪಿ' ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ. ರೈತರು ಬಿಜೆಪಿಯನ್ನು ಬೀಳಿಸಲು ಮತ್ತು ಬಿಜೆಪಿಯನ್ನು ಯುಪಿಯಿಂದ ಓಡಿಸಲು ಸಿದ್ಧರಾಗಿದ್ದಾರೆ. ಈ ಚುನಾವಣೆಯಲ್ಲಿ ಯುಪಿ ಜನರು ಬಿಜೆಪಿಯನ್ನು ಸೀಟು ಸಿಗದಂತೆ ಸೋಲಿಸಿ, ಸೂರ್ಯನನ್ನು(ಎಸ್ಪಿ) ಶಾಶ್ವತ ಮಾಡುತ್ತಾರೆ" ಎಂದು ಹೇಳಿದರು.
ಕುಸ್ತಿಪಟು ಸೋಲಲು ಆರಂಭಿಸಿದಾಗ ಕೈಕಾಲುಗಳನ್ನು ಬಗ್ಗಿಸುತ್ತಾನೆ, ಕೆಲವೊಮ್ಮೆ ಕಚ್ಚುತ್ತಾನೆ, ಪರಚುತ್ತಾನೆ ಅಥವಾ ಕತ್ತು ಹಿಸುಕುತ್ತಾನೆ.. ಅದನ್ನೇ ಬಿಜೆಪಿ ಮಾಡುತ್ತಿದೆ. ಸಮಾಜವಾದಿ ಪಕ್ಷವು ಐತಿಹಾಸಿಕ ಗೆಲುವಿನತ್ತ ಸಾಗುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಕಳೆದ ತಿಂಗಳು ಗೋರಖ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು 'ಲಾಲ್ ಟೋಪಿ' ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಎಂದು ಹೇಳಿದ್ದರು. ಈ ಹೇಳಿಕೆ ಬಿಜೆಪಿಗೆ ಎಸ್ಪಿ ವಿರುದ್ಧ ಹರಿಹಾಯಲು ಮತ್ತೊಂದು ಕಾರಣ ಸಿಕ್ಕಂತಾಗಿದೆ.

ಎಸ್ಪಿ ಗೆದ್ದರೆ ಗೂಂಡಾ ಸಾಮ್ರಾಜ್ಯ ನಿರ್ಮಾಣ: ಬಿಜೆಪಿ
ಈಗಾಗಲೇ ಬಿಜೆಪಿ ಸಮಾಜವಾದಿ ಪಕ್ಷಕ್ಕೆ ಉತ್ತರಪ್ರದೇಶ ಸಿಕ್ಕರೆ ಅದು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತದೆ ಎನ್ನುವ ಮೂಲಕ ಹರಿಹಾಯ್ದಿದೆ. ಜೊತೆಗೆ ಎಸ್ಪಿ ಗುಂಡಾಗಳಿಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎಸ್ಪಿ ಗೆದ್ದರೆ ಗೂಂಡಾ ಸಾಮ್ರಾಜ್ಯ ನಿರ್ಮಾಣವಾಗುತ್ತದೆ ಎಂದು ಆರೋಪಿಸಿದೆ. ಮಾತ್ರವಲ್ಲದೇ 2022ರ ವಿಧಾನಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಮುಲಾಯಂಗೆ ನಿಕಟವಾಗಿದ್ದ ಮತ್ತು ಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗಾಯತ್ರಿ ಪ್ರಜಾಪತಿ ಅವರ ಪತ್ನಿ ಮಹಾರಾಣಿ ದೇವಿಗೆ ಎಸ್ಪಿ ಟಿಕೆಟ್ ನೀಡಿದೆ. ಗಾಯತ್ರಿ ಅವರನ್ನು ಮುಲಾಯಂ ಸಿಂಗ್ ಯಾದವ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಈತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅತ್ಯಾಚಾರ ಆರೋಪಿಯ ಪತ್ನಿಗೆ ಟಿಕೆಟ್ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ.
ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋದಲ್ಲಿ ಅವರು "ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ. ನಾವು ಅವರನ್ನು ಬಿಡುವುದಿಲ್ಲ" ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಹೇಳಿಕೆ ಬಿಜೆಪಿಗೆ ಎಸ್ಪಿ ವಿರುದ್ಧ ಹರಿಹಾಯಲು ಮತ್ತೊಂದು ಕಾರಣ ಸಿಕ್ಕಂತಾಗಿತ್ತು. ಆದರೆ ಎಸ್ಪಿ ಗುಂಡಾರಾಜ್ಯ ನಿರ್ಮಾಣ ಮಾಡುತ್ತದೆ ಎಂದು ಬಿಜೆಪಿ ಹೇಳಿಕೆಗೆ ಪ್ರತಿಯಾಗಿ ಅಖಿಲೇಶ್ ಇಂದು ವಾಗ್ದಾಳಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆಯ ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, 5 ನೇ ಹಂತ ಫೆಬ್ರವರಿ 27 ರಂದು, ಮಾರ್ಚ್ 3 ಮತ್ತು 7 ರಂದು 6 ನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತವನ್ನು ನಡೆಸಲಾಗುವುದು.












Click it and Unblock the Notifications