ಸೈಕಲಿನಿಂದ ಕೆಳಗಿಳಿದು ಏಕಾಂಗಿ ಯುದ್ಧಕ್ಕೆ ಹೊರಟ 'ಆನೆ'
ಲಕ್ನೋ, ಜೂನ್ 03: ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಅನೇಕ ರಾಜ್ಯಗಳಲ್ಲಿ ಉಂಟಾಗಿರುವ ಪರಿಸ್ಥಿತಿ ಉತ್ತರಪ್ರದೇಶಕ್ಕೆ ಕೊಂಚ ತಡವಾಗಿ ಎದುರಾಗಿದೆ. ಸೋತ ಪಕ್ಷಗಳಲ್ಲಿನ ಹಿರಿಯ ನಾಯಕರ ರಾಜೀನಾಮೆ, ಆಡಳಿತ ಪಕ್ಷಕ್ಕೆ ವಲಸೆ ಹೋಗುವುದರ ಜೊತೆ ಮೈತ್ರಿ ಮುರಿಯುವ ಮಾತುಕತೆ ಹೆಚ್ಚಾಗಿದೆ. ಕಳೆದ ಬಾರಿ ಉಪ ಚುನಾವಣೆ ಮೂಲಕ ಮೊಳಕೆಯೊಡೆದ ಸಮಾಜವಾದಿಗಳ ಮೈತ್ರಿ ಮುಂದಿನ ಉಪ ಚುನಾವಣೆಯಲ್ಲಿ ಅಂತ್ಯ ಕಾಣುವ ಲಕ್ಷಣ ಕಂಡು ಬಂದಿದೆ.
ಎಸ್ಪಿಯೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದುಕೊಳ್ಳುವ ಸುಳಿವನ್ನು ಬಿಎಸ್ಪಿ ಅಧಿನಾಯಕಿ ಮಾಯಾವತಿ ನೀಡಿದ್ದಾರೆ. ಚುನಾವಣೋತ್ತರ ಚಿಂತನ-ಮಂಥನ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ 11 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಉಭಯ ಪಕ್ಷಗಳ ಮೈತ್ರಿಗೆ ಸಮ್ಮತಿ ನೀಡಿದ್ದರು. ಬಿಜೆಪಿ ವಿರುದ್ಧ ಗೆಲುವಿನ ರುಚಿಯನ್ನು ಕಾಣಲಾಯಿತು. ಇದೇ ಖುಷಿಯಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಎಸ್ಪಿ- ಎಸ್ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದವು, 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗಳಿಸಿದರೆ, ಬಿಎಸ್ಪಿ 10 ಹಾಗೂ ಎಸ್ಪಿ 5 ಸ್ಥಾನ ಮಾತ್ರ ಗಳಿಸಿತ್ತು.

'ಯಾದವರ ವೋಟುಗಳು ನಮಗೆ ಬಂದಿಲ್ಲ. ಸ್ವತಃ ಅಖಿಲೇಶ್ ಅವರ ಕುಟುಂಬವು ಕೂಡ ಯಾದವರ ಮತಗಳನ್ನು ಪಡೆಯುವಲ್ಲಿ ಸೋತಿದೆ' ಎಂದು ತಮ್ಮ ಆಪ್ತರ ಬಳಿ ಮಾಯಾವತಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪತ್ನಿ ಡಿಂಪಲ್ ಯಾದವ್ ಮತ್ತು ಇಬ್ಬರು ಸೋದರ ಸಂಬಂಧಿಗಳಾದ ಅಕ್ಷಯ್ ಮತ್ತು ಧರ್ಮೇಂದ್ರ ಯಾದವ್ ಅವರು ಸೋಲು ಕಂಡಿದ್ದಾರೆ.












Click it and Unblock the Notifications