"ಉತ್ತರ ಪ್ರದೇಶ ಮೊದಲ ಹಂತದಲ್ಲಿ ಎಸ್ಪಿ-ಆರ್ಎಲ್ಡಿ ಮೈತ್ರಿಕೂಟಕ್ಕೆ 50ಕ್ಕಿಂತ ಹೆಚ್ಚು ಸ್ಥಾನ"
ಲಕ್ನೋ, ಜನವರಿ 24: ಉತ್ತರ ಪ್ರದೇಶ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಕೂಟವು 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ 58 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 10ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟಕ್ಕೆ 50ಕ್ಕಿಂತ ಹೆಚ್ಚು ಸ್ಥಾನಗಳು ಸಿಗಲಿವೆ.
ಕೆಲವೇ ಗಂಟೆಗಳಲ್ಲಿ ಸಿಎಂ ಅಭ್ಯರ್ಥಿ ನಿಲುವು ಬದಲು: ಪ್ರಿಯಾಂಕಾರನ್ನು ಗೇಲಿ ಮಾಡಿದ ಮಾಯಾವತಿ
"ರಾಜ್ಯದ ಜನರು ಬದಲಾವಣೆ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಅವರು ಎಸ್ಪಿ-ಆರ್ಎಲ್ಡಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ಇದು ಸ್ಪಷ್ಟವಾಗಿದೆ - ಆದ್ದರಿಂದ ಹೆಲಿಕಾಪ್ಟರ್ಗಳಲ್ಲಿ ಪ್ರಯಾಣಿಸುವ ದೊಡ್ಡ ನಾಯಕರು ಪ್ರಚಾರಕ್ಕಾಗಿ ರಾಜ್ಯದ ಸಣ್ಣ ಸಣ್ಣ ಗಲ್ಲಿಗಳಿಗೆ ಬರಬೇಕಾಗುತ್ತದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ನಾವು ನೀಡಿದ ಎಲ್ಲಾ ಚುನಾವಣಾ ಭರವಸೆಗಳನ್ನು ಈಡೇರಿಸುತ್ತೇವೆ, ನಮ್ಮ ಚುನಾವಣಾ ದಾಖಲೆಯನ್ನು ಒಮ್ಮೆ ನೋಡಿ ಎಂದಿದ್ದಾರೆ.
ನಿರುದ್ಯೋಗ, ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ
ಉತ್ತರ ಪ್ರದೇಶದಲ್ಲಿನ ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ ಎಂಬ ಕಾರಣಕ್ಕಾಗಿ ಅಭಿವೃದ್ಧಿಗೆ ಸಂಬಂಧವಿಲ್ಲದ ವಿಷಯಗಳ ಮೇಲೆ ಬಿಜೆಪಿ ಚುನಾವಣೆಯಲ್ಲಿ ಹೋರಾಡಲು ಪ್ರಯತ್ನಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದರು. ಇದರ ಜೊತೆ ಲಖೀಂಪುರ ಖೇರಿ ಘಟನೆ ಮತ್ತು ಹತ್ರಾಸ್ ಅತ್ಯಾಚಾರ ಪ್ರಕರಣಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಸೂಚಿಸುತ್ತವೆ ಎನ್ನುವ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನನ್ನ ಮಾತು ಕೇಳಬೇಡಿ, ಎನ್ಸಿಆರ್ಬಿ ಡೇಟಾವನ್ನು ನೋಡಿ. ಇಂದು ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಮುಖ್ಯಮಂತ್ರಿಗಳು ಏನು ಪ್ರತಿಕ್ರಿಯೆ ನೀಡುತ್ತಾರೆ? ಅವರು ಮಹಿಳೆಯರ ಸುರಕ್ಷತೆಗಾಗಿ ಜಾರಿಗೊಳಿಸಿದ 1090 ಸಹಾಯವಾಣಿ ಸಂಖ್ಯೆಯನ್ನು ಸಹ ಸ್ಥಗಿತಗೊಳಿಸಿದ್ದಾರೆ, ಏಕೆ?," ಎಂದು ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದಾರೆ.
ಉದ್ದೇಶಪೂರ್ವಕವಾಗಿ ಚುನಾವಣಾ ಕಾರ್ಯಕ್ರಮಗಳಿಗೆ ನಿರ್ಬಂಧ
ಕೊವಿಡ್ -19 ಉಲ್ಬಣದಿಂದಾಗಿ ಭೌತಿಕ ರ್ಯಾಲಿಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಔಪಚಾರಿಕವಾಗಿ ಘೋಷಿಸುವ ಮೊದಲೇ ಈ ಬಾರಿ ಚುನಾವಣಾ ಪ್ರಚಾರ ಡಿಜಿಟಲ್ ಆಗಲಿದೆ ಎಂದು ಬಿಜೆಪಿಗೆ ತಿಳಿದಿತ್ತು. "ತಮ್ಮ ಪ್ರಚಾರದ ಸಂದೇಶವನ್ನು ವಿವಿಧ ಭಾಗಗಳಿಗೆ ತಲುಪಿಸಲು ಅವರು ಈ ವಾಹನಗಳನ್ನು ಹೊಂದಿದ್ದಾರೆ. ಆ ಡಿಜಿಟಲ್ ಮೂಲಸೌಕರ್ಯದೊಂದಿಗೆ ಅವರು ಎಷ್ಟು ಬೇಗನೆ ಸಿದ್ಧರಾಗಿದ್ದರು? ಹತ್ತು ದಿನಗಳಲ್ಲಿ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ. ಪ್ರಚಾರ ಡಿಜಿಟಲ್ ಆಗಲಿದೆ ಎಂದು ಅವರಿಗೆ ಮೊದಲೇ ತಿಳಿದಿತ್ತು. ಬಿಜೆಪಿ ಉದ್ದೇಶಪೂರ್ವಕವಾಗಿ ಸಾರ್ವಜನಿಕ ಮೆರವಣಿಗೆ ಮತ್ತು ರೋಡ್ ಶೋ ಹಾಗೂ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಏಕೆಂದರೆ ಅವರ ಕಾರ್ಯಕ್ರಮಗಳಲ್ಲಿ ಖಾಲಿ ಕುರ್ಚಿಗಳೇ ರಾರಾಜಿಸುತ್ತವೆ," ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
ಜನರ ದಾರಿ ತಪ್ಪಿಸುವುದಕ್ಕೆ ಸಮೀಕ್ಷೆಗಳು ಕೆಲಸ ಮಾಡಲ್ಲ
"ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯುವ ಬಿಜೆಪಿ ನಾಯಕರ ವಿರುದ್ಧ ಘೇರಾವ್ ಹಾಕಲಾಗುತ್ತಿದೆ. ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಜನರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ, ಏಕೆಂದರೆ ಕಳೆದ 4.5 ವರ್ಷಗಳಿಂದ ಜನರಿಗೆ ದ್ರೋಹ ಮಾಡಲಾಗುತ್ತಿದೆ. ಅದಾಗ್ಯೂ, ಸಮೀಕ್ಷೆಗಳು ಬಿಜೆಪಿಯ ಪರವಾಗಿ ಬರುತ್ತಿವೆ. ಆದರೆ ಇಂಥ ಸಮೀಕ್ಷೆಗಳು ಜನರ ಕೋಪ ಮತ್ತು ಮನಸ್ಥಿತಿಯನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ಸೇರುವ ಮೂಲಕ ಅಲ್ಲಿದ್ದುಕೊಂಡೇ ಸಂವಿಧಾನ ರಕ್ಷಣೆ
ತಮ್ಮ ಅತ್ತಿಗೆ ಅಪರ್ಣಾ ಯಾದವ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಿರುವ ಬಗ್ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದರು. ಸಮಾಜವಾದಿ ಪಕ್ಷದವರು ಬಿಜೆಪಿ ಸೇರುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಅವರು ಸಂವಿಧಾನವನ್ನು ಉಳಿಸುವುದಕ್ಕಾಗಿ ಬಿಜೆಪಿಯಲ್ಲಿದ್ದುಕೊಂಡೇ ಹೋರಾಟವನ್ನು ಮುಂದುವರಿಸುತ್ತಾರೆ. ಈಗ ಆ ಪಕ್ಷದಲ್ಲಿಯೂ ಇದೇ ಚರ್ಚೆ ನಡೆಸುತ್ತಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಯುಪಿಯ ಹಿಂದಿನ ಚುನಾವಣೆಯಲ್ಲಿ ಹೇಗಿತ್ತು ತೀರ್ಪು?
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.