ಸ್ಫೋಟಕ ಮಾಹಿತಿ: ಜೆಇಎಂ ಹಿಟ್ ಲಿಸ್ಟ್ ನಲ್ಲಿ ಯೋಗಿ, ಕೇಜ್ರಿ, ಭಾಗವತ್!
ನವದೆಹಲಿ, ಏಪ್ರಿಲ್ 25: ಉತ್ತರ ಪ್ರದೇಶದ ಪೊಲೀಸರಿಗೆ ಸಿಕ್ಕ ಗುಪ್ತಚರ ಮಾಹಿತಿ ಪ್ರಕಾರ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ಮೂವರು ಪ್ರಮುಖ ವ್ಯಕ್ತಿಗಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಅಷ್ಟೇ ಅಲ್ಲ, ಉತ್ತರ ಪ್ರದೇಶದ ಶಮ್ಲಿ ಮತ್ತು ಉತ್ತರಾಖಂಡ್ ನ ರೂಕ್ರಿ ರೈಲ್ವೇ ನಿಲ್ದಾಣಗಳಲ್ಲೂ ಬಾಂಬ್ ಸ್ಫೋಟದ ಸಂಚು ರೂಪಿಸಿರುವ ಪತ್ರವೂ ಪೊಲೀಸರಿಗೆ ಲಭ್ಯವಾಗಿದೆ.

ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯಿಂದ ಎರಡು ಪತ್ರಗಳು ಉತ್ತರ ಪ್ರದೇಶ ಪೊಲೀಸರಿಗೆ ಲಭ್ಯವಾಗಿದ್ದು, ಈ ಪತ್ರ ಬಂದಕೂಡಲೆ ಹೈ ಅಲರ್ಟ್ ಘೋಷಿಸಲಾಗಿದೆ.
'ಕೈಬರಹದ ಎರಡು ಪತ್ರಗಳು ತಮಗೆ ಲಭ್ಯವಾಗಿವೆ' ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಓಪಿ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ. ಈ ಪತ್ರವನ್ನು ಏಪ್ರಿಲ್ 21 ರಂದು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಬರೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ವಾರಣಾಸಿ(ಕಾಶಿ)ಯ ವಿಶ್ವನಾಥ ಮಂದಿರ, ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಉತ್ತರ ಪ್ರದೇಶದ ಇತರೆಡೆ ಹಾಗೂ, ದೆಹಲಿ, ಹರ್ಯಾಣಾಗಳಲ್ಲೂ ಬಾಂಬ್ ಸ್ಫೋಟ ಮಾಡುವ ಬಗ್ಗೆ ಪತ್ರದಲ್ಲಿ ಉಲ್ಲೇಖವಿದೆ. ಈ ಪತ್ರವನ್ನು ತಾವು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವುದಿಲ್ಲ. ಸೂಕ್ತ ಮುನ್ನೆಚ್ಚರಿಕೆ, ಕಟ್ಟೆಚ್ಚರ ವಹಿಸಿದ್ದೇವೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications