ಉತ್ತರಪ್ರದೇಶದಲ್ಲಿ ಶೋಭಾ ಕರಂದ್ಲಾಜೆಯಿಂದ ಭರ್ಜರಿ ಮತಬೇಟೆ
ಲಕ್ನೋ: ಪಂಚರಾಜ್ಯಗಳ ಚುನಾವಣಾ ಕದನ ದೇಶದ ಮಿನಿ ಮಹಾಸಮರ ಎಂದೇ ಪರಿಗಣಿಸಲ್ಪಟ್ಟಿದೆ. ಅದರಲ್ಲೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಬಿಜೆಪಿ, ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಸಹಿತ ರಾಜಕೀಯ ಮೇಧಾವಿಗಳ ಅಳಿವು-ಉಳಿವಿನ ಪ್ರಶ್ನೆಯಾಗಿ ಪರಿಣಮಿಸಿದೆ.
ಬಿಜೆಪಿ ಪಾಲಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಅನ್ನಿಸಿದೆ. ರಾಮ ಮಂದಿರ ನಿರ್ಮಾಣದ ಯಶಸ್ಸು ಬಿಜೆಪಿ ಪಾಲಿಗೆ ವರದಾನವಾಗಿದ್ದರೂ ಇನ್ನುಳಿದ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಪ್ರಯಾಸದ ಕೆಲಸ. ಈ ನಡುವೆ, ಮತದಾರರನ್ನು ಸೆಳೆಯಲು ಕಮಲ ಸೈನ್ಯ ಭರ್ಜರಿ ಕಸರತ್ತಿನಲ್ಲಿ ತೊಡಗಿದೆ. ಅದರಲ್ಲೂ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವಿರತ ಪ್ರಚಾರ ಕೈಗೊಂಡಿದ್ದಾರೆ. ಕಳೆದೊಂದು ತಿಂಗಳಲ್ಲಿ ಪಾದಯಾತ್ರೆ, ಸರಣಿ ಸಭೆ, ಮನೆ ಮನೆ ಭೇಟಿ ಕೈಗೊಳ್ಳುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಸ್ಥಳೀಯ ಮಹಿಳಾ ನಾಯಕಿಯರೂ ಸಾಥ್ ನೀಡಿದ್ದಾರೆ.
ರಾಷ್ಟ್ರ ಸೇವಿಕಾ ಸಮಿತಿ ಮೂಲಕ ಸಂಘದ ಪ್ರಚಾರಿಕಾ ಆಗಿ ರಾಷ್ಟ್ರ ಕೈಂಕರ್ಯ ಆರಂಭಿಸಿದ್ದ ಶೋಭಾ ಕರಂದ್ಲಾಜೆ ಅತ್ಯುತ್ತಮ ಸಂಘಟಕಿ. ನಿಷ್ಠೂರ ನಡೆ ಮೂಲಕ ಆಡಳಿತ ಕ್ಷೇತ್ರದಲ್ಲೂ ಅತ್ಯುತ್ತಮ ಸಂಸದೀಯ ಪಟುವಾಗಿಯೂ ಗುರುತಾದವರು. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಈ ಬಾರಿ ಯೋಗಿಯ ನಾಡಿನ ಚುನಾವಣಾ ಸಮರದಲ್ಲಿ ಬಿಜೆಪಿ ಸೈನ್ಯದ ನೊಗವನ್ನು ಶೋಭಾ ಅವರಿಗೆ ವಹಿಸಿದೆ.

ವಾರಾಂತ್ಯದ ರಜಾದಿನವಾದ ಇಂದು ಅವರು ಪವಿತ್ರ ಸರಾಯೂ ನದಿ ತೀರದ ಪ್ರದೇಶಗಳಲ್ಲಿ ಕೈಗೊಂಡ ಪ್ರಚಾರ ಕಾರ್ಯ ದೇಶದ ಗಮನಸೆಳೆಯಿತು. ಭಾನುವಾರದ ರಜಾ ದಿನದಂದು ವಿವಿಧ ಸಂಘಟನೆಗಳ ಯುವಕ-ಯುವತಿಯರನ್ನು ಸ್ವಚ್ಚ ಭಾರತ ಅಭಿಯಾನದಲ್ಲಿ ತೊಡಗಿಸಿ ಕುತೂಹಲದ ಕೇಂದ್ರಬಿಂದುವಾದರು. ಸರಾಯು ನದಿ ತೀರದ ತಾಂಡಾ, ಅಂಬೇಡ್ಕರ್ ನಗರಗಳಲ್ಲಿ ಕೈಗೊಂಡ ಈ ಅಭಿಯಾನ ಬಿಜೆಪಿ ಪಕ್ಷದತ್ತ ಯುವಕರ ಚಿತ್ತ ನೆಟ್ಟುವಲ್ಲಿ ವರದಾನವಾಯಿತು. ಪ್ರಚಾರದ ಸಂದರ್ಭದಲ್ಲಿ ಪಕ್ಷ ಸಂಘಟನೆ ಒಂದೆಡೆಯಾದರೆ, ಸಾಮಾಜಿಕ ಕೈಂಕರ್ಯ ಮೂಲಕ ಯುವಕರಲ್ಲಿ ಪರಿಸರ ಕಾಳಜಿಯ ಜಾಗೃತಿ ಮೂಡಿಸಿದ ಸಚಿವೆ ಶೋಭಾ ನಡೆ ಮೆಚ್ಚುಗೆಗೂ ಪಾತ್ರವಾಯಿತು.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಉತ್ತರಪ್ರದೇಶ ಪ್ರಚಾರದಲ್ಲಿ ಶೋಭಾ ತೊಡಗಿಕೊಂಡಿದ್ದಾರೆ. ಉತ್ತರಪ್ರದೇಶದ ಸಹ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಅಯೋಧ್ಯೆಯ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ಪ್ರಚಾರ ಕೈಗೊಂಡರು. ಅಯೋಧ್ಯೆ ಗ್ರಾಮಾಂತರ ಜಿಲ್ಲೆಯ ಬರೌಲಿ ಮತ್ತು ಕುನರ್ಗಂಜ್ ಮಂಡಲಗಳ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿದರು. ಉತ್ತರ ಪ್ರದೇಶದಲ್ಲಿ ಪ್ರಚಾರದ ಹಾದಿಯಲ್ಲಿ ನಿರಂತರವಾಗಿ ಹಲವಾರು ಮಹಿಳಾ ಸಂಘಟನೆಗಳು, ಸಂಸ್ಥೆಗಳು ಮತ್ತು ಸ್ವಸಹಾಯ ಸಂಘಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಅವರು ತಮ್ಮ ಪ್ರಚಾರದ ಮೂಲಕ ಮಹಿಳಾ ಮತದಾರರೊಂದಿಗೆ ಮಾತುಕತೆ ನಡೆಸಿ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
Recommended Video
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಮನೆ-ಮನೆ ಪ್ರಚಾರ ಮಾಡಿದರು. ಪ್ರಚಾರ ಮಾಡುವ ಮೂಲ ಬಿಜೆಪಿಗೆ ಬೆಂಬಲ ಕೋರಿದರು.












Click it and Unblock the Notifications