ಕೃಷ್ಣನ ನೋಡುವ ಬಯಕೆ; ಮಥುರಾದಲ್ಲಿ ರಷ್ಯಾ ಮಹಿಳೆ ಆತ್ಮಹತ್ಯೆ
ಲಖ್ನೊ, ಜನವರ 25: ತನ್ನ ಇಷ್ಟದೈವ ಕೃಷ್ಣನನ್ನು ನೋಡಬೇಕೆಂಬ ಬಯಕೆಯಿಂದ ರಷ್ಯಾ ಮೂಲದ 41 ವರ್ಷದ ಮಹಿಳೆ ಅಪಾರ್ಟ್ ಮೆಂಟ್ ನ ಆರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬೃಂದಾವನದಲ್ಲಿ ನಡೆದಿದೆ.
ಕೃಷ್ಣನ ಊರಾದ ಮಥುರಾದ ಬೃಂದಾವನದಲ್ಲಿ, ರಷಿಯನ್ ಕಟ್ಟಡ ಎಂದೇ ಪ್ರಸಿದ್ಧಿಯಾಗಿದ್ದ ಬೃಂದಾವನಧಾಮ ಅಪಾರ್ಟ್ ಮೆಂಟ್ ನಲ್ಲಿ ರಷ್ಯಾ ಮೂಲದ ತತ್ಯಾನ ಮೆಲಾವ್ಕಯಾ ಎಂಬ ಮಹಿಳೆ ವಾಸಿಸುತ್ತಿದ್ದು, ಭಾನುವಾರ ಅಪಾರ್ಟ್ ಮೆಂಟ್ ನ ಆರನೇ ಅಂತಸ್ತಿನಿಂದ ಜಿಗಿದು ಸಾವನ್ನಪ್ಪಿದ್ದಾರೆ.
ಫೆಬ್ರುವರಿ 2020ರಿಂದಲೂ ಫ್ಲಾಟ್ ನಲ್ಲಿ ಅವರೊಬ್ಬರೇ ವಾಸಿಸುತ್ತಿದ್ದು, ರಷ್ಯಾದ ರಾಸ್ತೋವ್ ನಗರದಿಂದ ಟೂರಿಸ್ಟ್ ವೀಸಾ ಮೇಲೆ ಇಲ್ಲಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ತನ್ನ ಇಷ್ಟದೈವ ಕೃಷ್ಣನನ್ನು ನಾನು ನೋಡಬೇಕು. ಆದಷ್ಟು ಬೇಗ ಆತನನ್ನು ಭೇಟಿಯಾಗಬೇಕು ಎಂದು ಅವರು ಹೇಳುತ್ತಿದ್ದುದಾಗಿ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ತತ್ಯಾನ ಸ್ನೇಹಿತೆ ಮಾಹಿತಿ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳಿಂದ ಆಕೆ ತುಂಬಾ ಗೊಂದಲದಲ್ಲಿದ್ದರು ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಏಳರ ಸಮಯದಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಷ್ಯಾದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.












Click it and Unblock the Notifications