ಅಖಿಲೇಶ್ ಯಾದವ್ ಮನೆ ಮುಂದೆ ಪೊಲೀಸ್ ಜಿಪ್ಗೆ ಬೆಂಕಿ
ಲಕ್ನೋ, ಅಕ್ಟೋಬರ್ 04; ಲಖಿಂಪುರದಲ್ಲಿ ಭಾನುವಾರ ನಡೆದ ಹಿಂಸಾಚಾರ ಖಂಡಿಸಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ನಿವಾಸದ ಮುಂದೆ ಧರಣಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಪೊಲೀಸರ ಜೀಪಿಗೆ ಬೆಂಕಿ ಹಚ್ಚಿದ್ದಾರೆ.
ಅಖಿಲೇಶ್ ಯಾದವ್ ತಮ್ಮ ನಿವಾಸದಿಂದ ಹಿಂಸಾಚಾರ ನಡೆದ ಲಖಿಂಪುರಕ್ಕೆ ಹೊರಟಿದ್ದರು. ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಪೊಲೀಸ್ ಜೀಪ್ಗೆ ಯಾರು ಬೆಂಕಿ ಹಚ್ಚಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಪೊಲೀಸರು ಅಖಿಲೇಶ್ ಯಾದವ್ ನಿವಾಸಕ್ಕೆ ತೆರಳಿದಾಗ ಹೊರಗಡೆ ಜೀಪಿಗೆ ಬೆಂಕಿ ಹಚ್ಚಲಾಗಿದೆ. ಒಬ್ಬ ಪೊಲೀಸ್ ಬೆಂಕಿ ಆರಿಸಲು ಪ್ರಯತ್ನ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಭಾನುವಾರ ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಈ ವಿಚಾರ ಈಗ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಭಾನುವಾರ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಕಾರು ಹರಿದು ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಲಖಿಂಪುರಕ್ಕೆ ಭೇಟಿ ನೀಡಿದ ಸಂದರ್ಭ ಹಿಂಸಾಚಾರ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಲಖಿಂಪುರ ಖೇರಿಗೆ ಭೇಟಿ ನೀಡಲು ಹೊರಟಿದ್ದರು. ಸೋಮವಾರ ಬೆಳಗ್ಗೆ ಅವರ ನಿವಾಸದ ಮುಂದೆಯೇ ಪೊಲೀಸರು ಅಖಿಲೇಶ್ ಯಾದವ್ ವಶಕ್ಕೆ ಪಡೆದುಕೊಂಡಿದ್ದಾರೆ.
ರೈತವಿರೋಧಿ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆಗೆ 10 ತಿಂಗಳು ಕಳೆದಿವೆ.
— Karnataka Congress (@INCKarnataka) October 4, 2021
ಇಷ್ಟು ದಿನಗಳಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು, ದಿಕ್ಕು ತಪ್ಪಿಸಲು, ಅಪರಾಧಿಗಳನ್ನಾಗಿಸಲು ಬಿಜೆಪಿ ಹಲವು ಕಸರತ್ತು ನಡೆಸಿತ್ತು.
ಈಗ ಸ್ವತಃ ಕೇಂದ್ರ ಸಚಿವರೇ ಕಾರು ಹರಿಸಿ ರೈತರನ್ನು ಕೊಲೆ ಮಾಡಲು ಮುಂದಾಗಿದ್ದಾರೆ.
ಬಿಜೆಪಿ ಕೊಲೆಗಡುಕರ ಪಕ್ಷ ಎಂದರೆ ತಪ್ಪಾಗದು.
ಮತ್ತೊಂದು ಕಡೆ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ.
ಭಾನುವಾರ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಕಾರ್ಯಕ್ರಮದ ಬಳಿಕ ರಾಜ್ಯ ಸಚಿವ ಅಜಯ್ ಮಿಶ್ರಾ ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದ ರೈತರು ಕಾರನ್ನು ಅಡ್ಡಗಟ್ಟಲು ಪ್ರಯತ್ನ ನಡೆಸಿದ್ದರು. ಆಗ ಕಾರು ಹರಿದು ನಾಲ್ವರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಡಿಜಿಪಿ ಮುಕುಲ್ ಗೋಯೆಲ್ ಘಟನೆ ಕುರಿತು ಮಾಹಿತಿ ನೀಡಿದ್ದು, "ಭಾನುವಾರ ನಡೆದ ಹಿಂಸಾಚಾರದಲ್ಲಿ 8 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ನಾಲ್ವರು ರೈತರು ಮತ್ತು ಉಳಿದ ನಾಲ್ವರು ಬೆಂಗಾವಲು ವಾಹನದಲ್ಲಿ ಇದ್ದವರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅವರು ಭರವಸೆ ನೀಡಿದ್ದಾರೆ.
ಲಖಿಂಪುರ ಖೇರಿ ಜಿಲ್ಲಾಧಿಕಾರಿ ಅರವಿಂದ ಕುಮಾರ್ ಚೌರಾಸಿಯಾ ಘಟನೆ ಕುರಿತು ಮಾಹಿತಿ ನೀಡಿದ್ದು, "ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಿತು. ಇದರಿಂದ ನಾಲ್ವರು ರೈತರು ಬಲಿಯಾದರು. ಆಕ್ರೋಶಗೊಂಡ ರೈತರು ಎಸ್ಯುವಿಗಳನ್ನು ತಡೆದು, ಬೆಂಕಿ ಹಚ್ಚಿದರು. ಇದರಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ನಾಯಕರು ಖಂಡಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸಹ ಘಟನೆ ಖಂಡಿಸಿ ಟ್ವೀಟ್ ಮಾಡಿದೆ. 'ರೈತವಿರೋಧಿ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆಗೆ 10 ತಿಂಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು, ದಿಕ್ಕು ತಪ್ಪಿಸಲು, ಅಪರಾಧಿಗಳನ್ನಾಗಿಸಲು ಬಿಜೆಪಿ ಹಲವು ಕಸರತ್ತು ನಡೆಸಿತ್ತು. ಈಗ ಸ್ವತಃ ಕೇಂದ್ರ ಸಚಿವರೇ ಕಾರು ಹರಿಸಿ ರೈತರನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕೊಲೆಗಡುಕರ ಪಕ್ಷ ಎಂದರೆ ತಪ್ಪಾಗದು' ಎಂದು ಪಕ್ಷ ಟ್ವೀಟ್ ಮಾಡಿದೆ.












Click it and Unblock the Notifications