ಸಂತ್ರಸ್ತರನ್ನು ಭೇಟಿಯಾಗದೇ ಹೋಗೊಲ್ಲ: ಪ್ರಿಯಾಂಕಾ ಗಾಂಧಿ ಪಟ್ಟು
ಮಿರ್ಜಾಪುರ್, ಜುಲೈ 20: ಉತ್ತರ ಪ್ರದೇಶದ ಸೋನ್ಭದ್ರಾ ಶೂಟೌಟ್ ಪ್ರಕರಣದ ಸಂತ್ರಸ್ತರನ್ನು ಭೇಟಿಯಾಗಲು ಹೊರಟಿದ್ದಾಗ ಪೊಲೀಸರು ತಡೆಯೊಡ್ಡಿದ್ದರಿಂದ ಸಿಟ್ಟಿಗೆದ್ದಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿಂದ ಹೊರಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅವರು ಶುಕ್ರವಾರ ರಾತ್ರಿಯನ್ನು ಮಿರ್ಜಾಪುರದ ಅತಿಥಿ ಗೃಹವೊಂದರಲ್ಲಿ ಕಳೆದಿದ್ದಾರೆ.
ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಅವರನ್ನು ಶುಕ್ರವಾರ ತಡರಾತ್ರಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ಘಟನೆಯಿಂದ ತೊಂದರೆಗೊಳಗಾದ ಕುಟುಂಬದವರನ್ನು ಭೇಟಿಯಾಗದೆಯೇ ತಾವು ನಿರ್ಗಮಿಸುವುದಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ರಾತ್ರಿ ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಚುನಾರ್ ಫೋರ್ಟ್ನಲ್ಲಿ ವಾರಣಾಸಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬ್ರಿಶ್ ಭೂಷಣ್ ಮತ್ತು ಸರ್ಕಾರದ ಇತರೆ ಕೆಲವು ಹಿರಿಯ ಅಧಿಕಾರಿಗಳು ತಮ್ಮೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

'ಉತ್ತರ ಪ್ರದೇಶ ಸರ್ಕಾರವು ವಾರಣಾಸಿ ಎಡಿಜಿ ಬ್ರಿಶ್ ಭೂಷಣ್, ವಾರಣಾಸಿ ಆಯುಕ್ತ ದೀಪಕ್ ಅಗರವಾಲ್, ಮಿರ್ಜಾಪುರ ಡಿಐಜಿ ಅವರನ್ನು ಕಳುಹಿಸಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗದೆಯೇ ವಾಪಸ್ ಹೋಗುವಂತೆ ತಿಳಿಸಿದೆ. ಕಳೆದ ಒಂದು ಗಂಟೆಯಿಂದ ಅವರು ಇಲ್ಲಿಯೇ ಕುಳಿತಿದ್ದಾರೆ. ನನ್ನನ್ನು ಏಕೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂಬುದರ ಬಗ್ಗೆ ಅವರು ವಿವರಿಸುತ್ತಿಲ್ಲ. ಅವರು ನನಗೆ ಯಾವ ಕಾಗದಪತ್ರಗಳನ್ನೂ ನೀಡಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
'ನನ್ನ ವಕೀಲರ ಪ್ರಕಾರ ನನ್ನ ಬಂಧನವು ಎಲ್ಲ ರೀತಿಯಿಂದಲೂ ಅಕ್ರಮವಾಗಿದೆ. ನಾನು ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡುವಂತಿಲ್ಲ ಎಂದು ಅವರು ನನಗೆ ಸರ್ಕಾರದ ಸಂದೇಶವನ್ನು ತಲುಪಿಸಿದ್ದಾರೆ' ಎಂದಿದ್ದಾರೆ.
'ನಾನು ಇಲ್ಲಿಗೆ ಬಂದಿರುವುದು ಯಾವುದೇ ಕಾನೂನನ್ನು ಮುರಿಯುವ ಸಲುವಾಗಿ ಅಲ್ಲ. ಆದರೆ, ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ಬಂದಿರುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಅಲ್ಲದೆ, ಅವರನ್ನು ಭೇಟಿಯಾಗದೆ ಮರಳುವುದೂ ಇಲ್ಲ ಎಂದೂ ಹೇಳಿದ್ದೇನೆ' ಎಂಬುದಾಗಿ ತಿಳಿಸಿದ್ದಾರೆ.












Click it and Unblock the Notifications