ಡಿ.11ರಂದು ಮತ್ತೆ ಪ್ರಧಾನಿ ಮೋದಿ ಉತ್ತರಪ್ರದೇಶಕ್ಕೆ ಭೇಟಿ; ಬೃಹತ್ ನೀರಾವರಿ ಯೋಜನೆ ಉದ್ಘಾಟನೆ
ಲಕ್ನೋ, ಡಿಸೆಂಬರ್ 9: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲು ಆಡಳಿತರೂಢ ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಒಂದಾದರ ಮೇಲೆ ಇನ್ನೊಂದರಂತೆ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಗೋರಖ್ಪುರ್ನಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸೇರಿ ಮೂರು ಬೃಹತ್ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದ ಪ್ರಧಾನಿ ಮೋದಿ, ಮತ್ತೆ ಡಿ.11ಕ್ಕೆ ಉತ್ತರಪ್ರದೇಶಕ್ಕೆ ತೆರಳಲಿದ್ದಾರೆ. ಅಂದು ಬಲರಾಂಪುರ ಜಿಲ್ಲೆಯಲ್ಲಿ 9802 ಕೋಟಿ ರೂಪಾಯಿ ವೆಚ್ಚದ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.

ಇದು ಉತ್ತರಪ್ರದೇಶದಲ್ಲಿಯೇ ಅತ್ಯಂತ ದೊಡ್ಡ ನಾಲಾ ಯೋಜನೆ ಎನಿಸಲಿದ್ದು, ಇಲ್ಲಿನ 9 ಜಿಲ್ಲೆಗಳಾದ ಬಹ್ರೈಚ್, ಗೊಂಡಾ, ಶ್ರಾವಸ್ತಿ, ಬಲರಾಮ್ಪುರ, ಬಸ್ತಿ, ಸಿದ್ಧಾರ್ಥನಗರ, ಸಂತ ಕಬೀರ್ ನಗರ, ಗೋರಖ್ಪುರ ಮತ್ತು ಮಹಾರಾಜ್ಗಂಜ್ಗಳ ಸುಮಾರು 25- 30 ಲಕ್ಷ ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡಲಿದೆ ಎಂದು ಜಲಶಕ್ತಿ ಸಚಿವ ಮಹೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಯೋಜನೆಯಡಿ ಘಾರ್ಗಾ, ಸರಯೂ, ರಾಫ್ತಿ, ಬಂಗಂಗಾ ಮತ್ತು ರೋಹಿನ್ ನದಿಗಳನ್ನು ಸಂಪರ್ಕಿಸಲಾಗಿದೆ. ಹಾಗೇ, 6600 ಕಿ.ಮೀ ದೂರದ ಹಲವು ಉಪ ಕಾಲುವೆಗಳು 318 ಕಿ.ಮೀ ಉದ್ದದ ಮುಖ್ಯ ನಾಲೆಯನ್ನು ಸಂಪರ್ಕಿಸುತ್ತವೆ. ಒಟ್ಟಾರೆ 14.04 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಾಗೆಯೇ ಮಳೆಗಾಲದಲ್ಲಿ ನೇಪಾಳದಿಂದ ಬರುವ ನೀರಿನ ಮಟ್ಟವನ್ನು ಕುಗ್ಗಿಸುವ ಮೂಲಕ, ಪ್ರವಾಹ ಭೀತಿಯನ್ನು ಕಡಿಮೆ ಮಾಡಲಿದೆ.
ಈ ಯೋಜನೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ 1978ರಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭ ಮಾಡಿತ್ತು. ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತೆ 78.68 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿತ್ತು. ಅದಾದ ನಾಲ್ಕು ವರ್ಷಗಳ ನಂತರ ಅಂದರೆ 1982ರಲ್ಲಿ 9 ಜಿಲ್ಲೆಗಳಿಗೆ ವಿಸ್ತರಿಸಲಾಯಿತು ಮತ್ತು ಯೋಜನೆಯ ಹೆಸರನ್ನು ಸರಯೂ ಕಾಲುವೆ ಯೋಜನೆಯೆಂದು ಹೆಸರಿಡಲಾಯಿತು. ಇದೇ ವೇಳೆ 2021ರ ಹೊತ್ತಿಗೆ ಈ ಯೋಜನೆಗೆ 9802 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಲಾಯಿತು.

ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್
ಪ್ರಧಾನಿ ನರೇಂದ್ರ ಮೋದಿಯವರು ಡಿ.11ರಂದು ಬಲರಾಂಪುರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಬಹ್ರೈಚ್ನಿಂದ ಗೋರಖ್ಪುರದ 9 ಜಿಲ್ಲೆಗಳನ್ನು ಸಂಪರ್ಕಿಸುವ ಸರಯೂ ನಹರ್ ರಾಷ್ಟ್ರೀಯ ಪರಿಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸರಯೂ ನಹರ್ ರಾಷ್ಟ್ರೀಯ ಯೋಜನೆಯಲ್ಲಿ ಶೇ.52ರಷ್ಟು ಕೆಲಸವನ್ನು ಪೂರ್ಣಗೊಳಿಸಲು 40 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ನಾವು ಉಳಿದ ಶೇ.48ರಷ್ಟು ಕೆಲಸವನ್ನು ಕೇವಲ 4 ವರ್ಷಗಳಲ್ಲಿ ಮಾಡಿದ್ದೇವೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.












Click it and Unblock the Notifications