ಭಾರತದ ಅಭಿವೃದ್ಧಿಗಾಗಿ ಮೂರು ಸಂಕಲ್ಪ: ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶ
ವಾರಣಾಸಿ, ಡಿಸೆಂಬರ್ 13: ಕಾಶಿಯ ಪ್ರತಿಯೊಂದು ಕಲ್ಲೂ ಈಶ್ವರನ ಪ್ರತಿರೂಪವಾಗಿದೆ. ಕಾಶಿಯ ಪ್ರತಿಯೊಂದು ಜೀವಿಗಳಲ್ಲೂ ಈಶ್ವರನ ದರ್ಶನವಾಗುತ್ತದೆ. ಆ ಶಿವನ ಆಶೀರ್ವಾದವಿಲ್ಲದೇ ಯಾವುದೂ ಸಾಧ್ಯವಿಲ್ಲ. ಪುಣ್ಯಭೂಮಿ ಕಾಶಿಯು ಅಹಿಂಸೆಯ ಸಂಕೇತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪಾಲಿಗೆ ಭಾರತದ ಪ್ರತಿಯೊಬ್ಬ ಪ್ರಜೆಯು ದೇವರ ಸ್ವರೂಪವೇ ಆಗಿದ್ದಾರೆ. ಜನತೆಯಲ್ಲೇ ನಾವು ಜನಾರ್ಧನನನ್ನು ನೋಡುತ್ತಿದ್ದೇವೆ. ನಾವು ಜನರನ್ನೇ ದೇವರು ಎಂದು ಭಾವಿಸುತ್ತೇವೆ. ದೇಶಕ್ಕಾಗಿ ನಾವು ಮೂರು ಸಂಕಲ್ಪವನ್ನು ಮಾಡುತ್ತಿದ್ದೇವೆ. ಒಂದು ಸ್ವಚ್ಛತೆ, ಸೃಜನಶೀಲನೆ ಮತ್ತು ಆತ್ಮ ನಿರ್ಭರ್ ಭಾರತಕ್ಕಾಗಿ ಸಂಕಲ್ಪವನ್ನು ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 339 ಕೋಟಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು. ಕೋವಿಡ್ 19 ಸಮಯದಲ್ಲಿಯೂ ಕೆಲಸ ಇಲ್ಲಿಗೆ ನಿಂತಿಲ್ಲ. ಇಂದು, ಈ ಭವ್ಯ ಸಂಕೀರ್ಣದ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಮಿಕರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಅವರ ಭಾಷಣದ ಪ್ರಮುಖ ಅಂಶಗಳನ್ನು ಮುಂದೆ ಓದಿ ತಿಳಿಯಿರಿ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು:
* ಭಾರತದ ಅಭಿವೃದ್ಧಿಗೆ ನಾವು ಮೂರು ಸಂಕಲ್ಪಗಳನ್ನು ಮಾಡಬೇಕಾಗಿದ್ದು, ಸ್ವಚ್ಛತೆ, ಸೃಜಲಶೀಲತೆ ಮತ್ತು ಆತ್ಮನಿರ್ಭರ್ ಭಾರತ ಎಂಬ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ ನೀಡಿದರು.
* ಸ್ವಚ್ಛತೆಯು ಜೀವನಶೈಲಿ ಆಗಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೆ ನಾವು ಮುಂದುವರಿಯುವುದು ನಮಗೆ ಕಷ್ಟಸಾಧ್ಯವಾಗುತ್ತದೆ. ಇಂದು ಬನಾರಸ್ ನಲ್ಲೂ ಕೂಡಾ ಸ್ವಚ್ಛತೆಗಾಗಿ ನಾವು ಹೆಚ್ಚು ಒತ್ತು ನೀಡಬೇಕಾಗಿದೆ.
* ಕಾಶಿ ವಿಶ್ವನಾಥನ ಸನ್ನಿಧಿಯು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಗತಿಯ ಪ್ರತಿಬಿಂಬವಾಗಿದೆ. ನೀವು ಇಲ್ಲಿಗೆ ಬಂದಾಗ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದು ಮಾತ್ರವಲ್ಲ, ಗತಕಾಲದ ಬಗ್ಗೆ ಹೆಮ್ಮೆ ಪಡುವಂತಹ ಸ್ಥಳವಾಗಿದೆ. ಪ್ರಾಚೀನ ಮತ್ತು ವರ್ತಮಾನವು ಇಲ್ಲಿ ಹೇಗೆ ಬೆರೆಯುತ್ತಿದೆ ಎಂಬುದನ್ನು ನೋಡಬಹುದಾಗಿದೆ.
* ವಿಶ್ವನಾಥ ಧಾಮವು ಇಂದು ಶಕ್ತಿ ಕೇಂದ್ರವಾಗಿದ್ದು, ಅದರ ಮಹತ್ವ ಸ್ಪಷ್ಟವಾಗಿದೆ. ಆಸುಪಾಸಿನಲ್ಲಿ ಕಳೆದು ಹೋಗಿದ್ದ ಹಲವು ಪುರಾತನ ದೇವಾಲಯಗಳನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ಬಾಬಾರವರು ತಮ್ಮ ಭಕ್ತರ ಸೇವೆಯಿಂದ ಸಂತೋಷಗೊಂಡಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಇಂದು ನಮ್ಮನ್ನು ಆಶೀರ್ವದಿಸಿದ್ದಾರೆ.
* ನಾನು ವಾರಣಾಸಿಗೆ ಬಂದಾಗ ವಾರಣಾಸಿಯ ಜನರ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಬಂದಿದ್ದೆನು. ಅಂದು ವಾರಣಾಸಿಯ ಜನರನ್ನು ಕೆಲವರು ಅನುಮಾನಿಸುತ್ತಿದ್ದದ್ದು ನನಗೆ ನೆನಪಿದೆ. ವಾರಣಾಸಿಯ ಬಗ್ಗೆ ಅಂತಹ ಅಭಿಪ್ರಾಯವಿದೆಯೇ ಎಂದು ನನಗೆ ಆಶ್ಚರ್ಯವಾಯಿತು. ಆದರೆ 'ಕಾಶಿ ಎಂದೆದಿಗೂ ಕಾಶಿಯೇ ಆಗಿರುತ್ತದೆ'.
* ಕಾಶಿಯು ಇತಿಹಾಸದಲ್ಲಿ ಅನೇಕ ಏರಿಳಿತಗಳನ್ನು ನೋಡಿದೆ. ಎಷ್ಟೋ ಸುಲ್ತಾನರು ಬಂದು ಹೋದರು, ಆದರೆ ಈ ಜಾಗ ಇಲ್ಲೇ ಇತ್ತು. ಆಮೂಲಾಗ್ರತೆಯಿಂದ ಸಂಸ್ಕೃತಿಯನ್ನು ಕೊಲ್ಲಲು ಪ್ರಯತ್ನಿಸಿದ ಔರಂಗಜೇಬನ ಚಿತ್ರಹಿಂಸೆಯನ್ನು ಇತಿಹಾಸ ನೋಡಿದೆ. ಆದರೆ ಈ ದೇಶದಲ್ಲಿ ಒಬ್ಬ ಔರಂಗಜೇಬನಿಗೆ ಶಿವಾಜಿ ಸಾಟಿಯಾಗಿದ್ದಾನೆ.
* ಕಾಲಚಕ್ರವನ್ನು ಒಮ್ಮೆ ನೋಡಿ, ಕಾಶಿ ಮುಂದೆ ಸಾಗುತ್ತಿರುವಾಗ ಭಯೋತ್ಪಾದನೆಯನ್ನು ಹುಟ್ಟುಹಾಕಿದ ಜನರು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತರಾಗಿದ್ದಾರೆ.
* ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಕಾಲದಲ್ಲೂ ದೇಶದ ಜನರು ಅನ್ನ ಆಹಾರಕ್ಕಾಗಿ ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿರಲಿಲ್ಲ. ತಾಯಿ ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ದೇಶದಲ್ಲಿ ಅನ್ನದ ಅಭಾವ ಸೃಷ್ಟಿಯಾಗಲಿಲ್ಲ. ಎಂತಹ ಸಂದಿಗ್ಧ ಸ್ಥಿತಿಯನ್ನೂ ಸಹ ನಾವು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು.












Click it and Unblock the Notifications