ಶ್ರೀಕೃಷ್ಣ ಜನ್ಮಸ್ಥಳ ವಿವಾದ: ಮಸೀದಿ ತೆರವುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ
ಮಥುರಾ, ಸೆಪ್ಟೆಂಬರ್ 28: ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳನ್ನು ಉತ್ತರ ಪ್ರದೇಶದ ಎರಡು ನ್ಯಾಯಾಲಯಗಳು ಸೆ. 30ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿವೆ.
28 ವರ್ಷದ ಹಿಂದೆ ದ್ವಂಸಗೊಳಿಸಲಾದ ರಾಮ ಜನ್ಮಭೂಮಿಯ ವಿವಾದಾತ್ಮಕ ಸಂರಚನೆಯ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಲಕ್ನೋದ ನ್ಯಾಯಾಲಯವೊಂದು ನಡೆಸಲಿದೆ.
ಶ್ರೀಕೃಷ್ಣನ ಜನ್ಮಸ್ಥಾನದ ಭೂಮಿಯನ್ನು ಮರಳಿ ಪಡೆಯುವುದರ ವಿಚಾರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಮಥುರಾದ ಸಿವಿಲ್ ನ್ಯಾಯಾಲಯವೊಂದು ನಡೆಸಲಿದೆ. ಇದರ ಸಂಕ್ಷಿಪ್ತ ವಿಚಾರಣೆ ಸೆ. 28ರಂದು ನಡೆದಿದ್ದು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಛಾಯಾ ಶರ್ಮಾ ಅರ್ಜಿ ವಿಚಾರಣೆಗೆ ಅಂಗೀಕರಿಸಿದರು. ಅರ್ಜಿಯ ಕುರಿತಾದ ಎರಡೂ ಕಡೆಯ ವಾದ ವಿವಾದ ಸೆ. 30ರಿಂದ ನಡೆಯಲಿದೆ.
ಮಥುರಾದ ಕಾತ್ರಾ ಕೇಶವ ದೇವ ದೇವಸ್ಥಾನದ 13.37 ಎಕರೆ ಆವರಣದೊಳಗಿನ ಶ್ರೀಕೃಷ್ಣ ಜನ್ಮಸ್ಥಳ ಎನ್ನಲಾದ ಪ್ರದೇಶದಲ್ಲಿಯೇ 1669-70ರಲ್ಲಿ ಮೊಘಲ್ ದೊರೆ ಔರಂಗಜೇಬನ ಆದೇಶದಂತೆ ನಿರ್ಮಿಸಲಾದ ಮಸೀದಿಯನ್ನು ತೆರವುಗೊಳಿಸುವಂತೆ ಹಿಂದೂ ಭಕ್ತರ ಗುಂಪೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಮುಂದೆ ಓದಿ...

1968ರ ಒಪ್ಪಂದ ರದ್ದುಗೊಳಿಸಿ
ದೇವಸ್ಥಾನದ ಆವರಣದೊಳಗೇ ಮಸೀದಿ ಅಸ್ತಿತ್ವವನ್ನು ಮುಂದುವರಿಸುವಂತೆ 1968ರಲ್ಲಿ ಮಥುರಾದ ನ್ಯಾಯಾಲಯವೊಂದು ಶ್ರೀಕೃಷ್ಣ ಜನ್ಮಸ್ಥಳ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಮಾಡಿಸಿದ್ದ ಭೂ ಒಪ್ಪಂದವನ್ನು ರದ್ದುಗೊಳಿಸುವಂತೆ ಕೂಡ ಈ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಹೊರಗಿನವರ ಪ್ರಯತ್ನ
ಆದರೆ ಈ ಅರ್ಜಿಯನ್ನು ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ವಿರೋಧಿಸಿದ್ದಾರೆ. ದೇವಸ್ಥಾನ-ಮಸೀದಿ ವಿಚಾರದಲ್ಲಿ ವಿವಾದ ಕೆದಕುವ ಮೂಲಕ ಶಾಂತಿ ಹಾಗೂ ಸೌಹಾರ್ದತೆಯನ್ನು ಕದಡಲು ಕೆಲವು ಹೊರಗಿನವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿವಾದವೇ ಇಲ್ಲ
20ನೇ ಶತಮಾನದಲ್ಲಿ ಎರಡೂ ಗುಂಪುಗಳ ನಡುವೆ ರಾಜಿ ಒಪ್ಪಂದ ನಡೆದ ಬಳಿಕ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಯಾವುದೇ ಮಂದಿರ-ಮಸೀದಿ ವಿವಾದ ಉಳಿದಿಲ್ಲ. ಇಲ್ಲಿ ದೇವಸ್ಥಾನ ಹಾಗೂ ಮಸೀದಿಗಳು ಎರಡೂ ಜತೆಯಾಗಿ ಇರುವುದು ಭಾವನಾತ್ಮಕ ಸಮಗ್ರತೆಯ ಧ್ಯೋತಕವಾಗಿದ್ದು, ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಮಧ್ಯೆ ಸಂಪೂರ್ಣ ಸೌಹಾರ್ದತೆ ಇದೆ ಎಂದು ತಿಳಿಸಿದ್ದಾರೆ.

ಅರ್ಜಿದಾರರು ಯಾರು
ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ, ಶಿವಾಜಿ ಸಿಂಗ್, ತ್ರಿಪುರಾರಿ ತಿವಾರಿ, ಬಸ್ತಿಯ ಕರುಣೇಶ್ ಕುಮಾರ್ ಶುಕ್ಲಾ, ಸಿದ್ಧಾರ್ಥ ನಗರದ ರಾಜೇಶ್ ಮಣಿ ತ್ರಿಪಾಠಿ ಹಾಗೂ ದೆಹಲಿ ನಿವಾಸಿ ಪರ್ವೇಶ್ ಕುಮಾರ್ ಎಂಬುವವರು ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.












Click it and Unblock the Notifications