ಇಟಲಿ ಅಜ್ಜಿಯನ್ನು ನೋಡಿ ವರ್ಷಗಳೇ ಆದವು : ಬಿಜೆಪಿಗೆ ಪ್ರಿಯಾಂಕಾ ಮಾತಿನೇಟು
ಬದೋಹಿ (ಉತ್ತರಪ್ರದೇಶ), ಮಾರ್ಚ್ 19: ಬಿಜೆಪಿ ಸರಕಾರವು ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯನ್ನು ಟೀಕಿಸುವುದು ನಿಲ್ಲಿಸಿ, ಕಳೆದ ಐದು ವರ್ಷದಿಂದ ಅವರೇನು (ಬಿಜೆಪಿ) ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಮಾತನಾಡಲಿ. ಕೇಸರಿ ಪಕ್ಷ ಯಾವಾಗಲೂ ಹೇಳುವ, ಅವರು 70 ವರ್ಷದಿಂದ ಏನು ಮಾಡಿದ್ದಾರೆ? ಎಂಬ ವಾದ ಈಗ ಹಳಸಲಾಗಿದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಛೇಡಿಸಿದ್ದಾರೆ.
"ಅವರು ಮಂಡಿಸುವ ವಾದ, 70 ವರ್ಷದಿಂದ ಏನು ಮಾಡಿದ್ದಾರೆ? ಎಂಬುದಕ್ಕೂ ಎಕ್ಸ್ ಪೈರ್ ದಿನಾಂಕ ಇದೆ. ಈಗ ಅವರು (ಬಿಜೆಪಿ) ಕಳೆದ ಐದು ವರ್ಷದಿಂದ ಅಧಿಕಾರದಲ್ಲಿ ಇದ್ದು ಏನು ಮಾಡಿದ್ದಾರೆ ಎಂದು ಹೇಳಬೇಕಿದೆ" ಎಂದು ಪ್ರಿಯಾಂಕಾ ಗಾಂಧಿ ಎಎನ್ ಐ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ ಹೇಳಿದ್ದಾರೆ.
"ರಾಹುಲ್ ಗಾಂಧಿ ಸೋದರಿ ಪಿಕ್ನಿಕ್ ನಲ್ಲಿ ಇದ್ದಾರೆ" ಎಂಬ ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಇಟಲಿಗೆ ಹೋಗಿಲ್ಲ. ನನ್ನ ಅಜ್ಜಿಯನ್ನು ನೋಡಲು ಅಲ್ಲಿಗೆ ಹೋಗಬೇಕಿತ್ತು ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ಚುನಾವಣೆ ಪ್ರಚಾರದ ಭಾಗವಾಗಿ ಸೋಮವಾರದಿಂದ ಮೂರು ದಿನಗಳ ಗಂಗಾ ಯಾತ್ರಾ ಆರಂಭಿಸಿದ್ದಾರೆ ಪ್ರಿಯಾಂಕಾ ಗಾಂಧಿ. ಅದರ ಮರು ದಿನ ಬದೋಹಿಯಲ್ಲಿ ಪಕ್ಷದ ಕಾರ್ಯಕರ್ತರ ಜತೆ ಭೇಟಿ ಮಾಡಿದ್ದಾರೆ. ಈ ಅಭಿಯಾನ ಮೂರನೇ ದಿನ ವಾರಾಣಸಿಯಲ್ಲಿ ಅಂತ್ಯವಾಗಲಿದೆ.
ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಯು ಏಪ್ರಿಲ್ ಹನ್ನೊಂದರಿಂದ ಮೇ ಹತ್ತೊಂಬತ್ತರ ತನಕ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.












Click it and Unblock the Notifications