ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕಿಗೆ ನೋಟಿಸ್
ಲಕ್ನೋ, ಜನವರಿ 20: ಬಿಎಸ್ಪಿ ವರಿಷ್ಠೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ನೋಟಿಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ನಡುವೆ ಮೈತ್ರಿಯಾದ ಬಳಿಕ, ಬಿಜೆಪಿಯ ಶಾಸಕಿ ಸಾಧನಾ ಸಿಂಗ್ ಅವರು ಬಹಿರಂಗ ಸಮಾವೇಶವೊಂದರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಮಾಯಾವತಿ ಬಗ್ಗೆ ಹುಷಾರು! ಅಖಿಲೇಶ್ ಯಾದವ್ಗೆ ಚಿಕ್ಕಪ್ಪನ ಎಚ್ಚರಿಕೆ
"ನನ್ನ ಪ್ರಕಾರ ಮಾಯಾವತಿ ಅತ್ತ ಹೆಂಗಸೂ ಅಲ್ಲ, ಇತ್ತ ಗಂಡಸೂ ಅಲ್ಲ. ಕೇವಲ ಅಧಿಕಾರಕ್ಕಾಗಿ ಆಕೆ ತಮ್ಮ ಪ್ರತಿಷ್ಠೆ ಮಾರಿಕೊಂಡಿದ್ದಾರೆ," ಎಂದು ಚಂದೌಲಿ ಎಂಬಲ್ಲಿ ಶನಿವಾರದಂದು ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಗಲ್ಸರಾಯ್ ಕ್ಷೇತ್ರದ ಬಿಜೆಪಿ ಶಾಸಕಿ ಸಾಧನ ಸಿಂಗ್ ಅವರು ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಮಾಯಾವತಿಗೆ ಪ್ರತಿಷ್ಠೆ, ಘನತೆ ಎಂಬುದೇ ಗೊತ್ತಿಲ್ಲ
"ಮಾಯಾವತಿಗೆ ಪ್ರತಿಷ್ಠೆ, ಘನತೆ ಎಂಬುದೇ ಗೊತ್ತಿಲ್ಲ. ಆಕೆ ಅತ್ತ ಗಂಡಸೂ ಅಲ್ಲ, ಇತ್ತ ಹೆಂಗಸೂ ಅಲ್ಲ. ನಪುಂಸಕರಿಗಿಂತಲೂ ಕಡೆ. ದ್ರೌಪದಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಳು. ಅದು ಮಹಿಳೆಯ ಆತ್ಮಾಭಿಮಾನದ ಸಂಕೇತವೂ ಹೌದು. ಆದರೆ, ಈಕೆಯನ್ನು (ಮಾಯಾವತಿ) ನೋಡಿ. ಈಕೆಯಿಂದ ಎಲ್ಲವನ್ನೂ ದೋಚಲಾಯಿತು. ಆದರೂ, ಈಗ ಅಧಿಕಾರಕ್ಕಾಗಿ ಮರ್ಯಾದೆ ಮರೆತು ಮೈತ್ರಿ ಮಾಡಿಕೊಂಡಿದ್ದಾರೆ," ಎಂದು ಕಟು ಶಬ್ಧಗಳಿಂದ ಟೀಕೆ ಮಾಡಿದ್ದಾರೆ.
|
ನಿರಂತರವಾಗಿ ಟೀಕೆ ಮಾಡಿದ ಶಾಸಕಿ
ಶಾಸಕಿ ಸಾಧನಾ ಸಿಂಗ್ ಮಾತನಾಡಿ, "ನನಗೆ ಇಂದು ಸಿಕ್ಕಿರುವ ಈ ಅವಕಾಶವನ್ನು ಮಾಯಾವತಿಯ ನಡೆಯನ್ನು ಖಂಡಿಸಲು ಬಳಸುತ್ತೇನೆ. ಆಕೆ ಮಹಿಳಾ ಕುಲಕ್ಕೇ ಅಪಮಾನ. ಲಕ್ನೋ ಗೆಸ್ಟ್ ಹೌಸ್ ಪ್ರಕರಣದಲ್ಲಿ ಬಿಜೆಪಿ ನಾಯಕರು ಆಕೆಯನ್ನು ರಕ್ಷಿಸಿದ್ದರು. ಆದರೆ ಆಕೆ ತನ್ನ ಸುಖಕ್ಕಾಗಿ ಮತ್ತು ಅಧಿಕಾರಕ್ಕಾಗಿ ಎಲ್ಲವನ್ನೂ ಮಾರಿಕೊಂಡಿದ್ದಾರೆ. ಈ ದೇಶದ ಮಹಿಳೆಯರೆಲ್ಲರೂ ಮಾಯಾವತಿ ನಡೆಯನ್ನು ಖಂಡಿಸಬೇಕು," ಎಂದೂ ಸಾಧನಾ ಒತ್ತಾಯಿಸಿದ್ದರು.
|
ಸಾಧನಾ ಸಿಂಗ್ ಅವರ ವಿರುದ್ಧ ನೋಟಿಸ್
ಬಿಎಸ್ಪಿ ವರಿಷ್ಠೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ನೋಟಿಸ್ ಜಾರಿ ಮಾಡಿದೆ.
ಬಿಜೆಪಿಗೆ ಭಯ ಶುರುವಾಗಿದೆ : ಬಿಎಸ್ಪಿ
ಶಾಸಕಿ ಸಾಧನಾ ಸಿಂಗ್ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ಕಿಡಿ ಕಾರಿದ್ದರು. ಉತ್ತರ ಪ್ರದೇಶದ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಆಗಬಹುದಾದ ಅಪಾಯಕ್ಕೆ ಹೆದರಿ ಬಿಜೆಪಿ ಚಡಪಡಿಸುತ್ತಿದೆ. ಅದರ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಮಿಶ್ರಾ ಪ್ರತಿಕ್ರಿಯಿಸಿದ್ದರು.