ಹಿಂದು ಪುರಾಣ + ಅತ್ಯಾಚಾರದ ಬಗ್ಗೆ ಬೋಧನೆ; ಉಪನ್ಯಾಸಕ ಅಮಾನತು!
ಅಲಿಘರ್, ಏಪ್ರಿಲ್ 6: ಉತ್ತರ ಪ್ರದೇಶದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಲಿಘರ್ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಧಿವಿಜ್ಞಾನ ಶಾಸ್ತ್ರದ ಕುರಿತು ಬೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜೀತೇಂದ್ರ ಕುಮಾರ್ ಅತ್ಯಾಚಾರಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದ್ದರು. ಹಿಂದು ಪುರಾಣಗಳಲ್ಲಿನ ಅತ್ಯಾಚಾರದ ಕುರಿತು ಉದಾಹರಣೆಗಳನ್ನು ನೀಡಿದ್ದರು ಎಂದು ಅಲಿಘರ್ ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸುತ್ತಿದ್ದಂತೆ ಕ್ಷಮೆಯಾಚಿಸಿರುವ ಉಪನ್ಯಾಸಕ ಡಾ. ಜೀತೇಂದ್ರ ಕುಮಾರ್, ಅಲಿಘರ್ ವಿವಿ ಉಪ ಕುಲಪತಿ ತಾರಿಕ್ ಮನ್ಸೂರ್ ಅವರಿಗೆ ಬುಧವಾರ ಪತ್ರವೊಂದನ್ನು ಬರೆದಿದ್ದಾರೆ. ''ನಮ್ಮ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಬಹಳ ಹಿಂದಿನಿಂದಲೂ ನಡೆಯುತ್ತಿದ್ದವು ಎಂಬುದನ್ನು ಉಲ್ಲೇಖಿಸುವುದಷ್ಟೇ ನನ್ನ ಉದ್ದೇಶವಾಗಿತ್ತೇ ವಿನಃ, ಯಾವುದೇ ಧರ್ಮದವರಿಗೆ ನೋವುಂಟು ಮಾಡುವುದು ಆಗಿರಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ತಪ್ಪಲ್ಲ. ಭವಿಷ್ಯದಲ್ಲಿ ಮತ್ತೊಮ್ಮೆ ಇಂಥ ತಪ್ಪನ್ನು ಮಾಡುವುದಿಲ್ಲ," ಎಂದು ಉಪನ್ಯಾಸಕ ಜೀತೇಂದ್ರ ಕುಮಾರ್ ಹೇಳಿದ್ದಾರೆ.

ಉಪನ್ಯಾಸಕರ ವಿರುದ್ಧ ತನಿಖೆಗೆ ಸಮಿತಿ ರಚನೆ:
ಅತ್ಯಾಚಾರದ ಬಗ್ಗೆ ವಿವರಿಸುವುದಕ್ಕೆ ಹಿಂದೂ ಪುರಾಣವನ್ನು ಉಲ್ಲೇಖಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡಿರುವ ಉಪನ್ಯಾಸಕ ಡಾ. ಜೀತೇಂದ್ರ ಕುಮಾರ್ ವಿರುದ್ಧ ತನಿಖೆ ನಡೆಸುವುದಕ್ಕೆ ಅಲಿಘರ್ ವಿಶ್ವವಿದ್ಯಾಲಯವೇ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ. ಇಡೀ ಪ್ರಕರಣದ ಗಂಭೀರತೆ ಮತ್ತು ಪ್ರಾಥಮಿಕ ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡು ಜೀತೇಂದ್ರ ಕುಮಾರ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ. ಅವರ ವಿಚಾರಣೆಗೂ ಮೊದಲೇ ಅಮಾನತುಗೊಳಿಸಲಾಗಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದ ಹುಟ್ಟಿಕೊಂಡಿದ್ದು ಹೇಗೆ?:
ಉಪನ್ಯಾಸಕ ಜೀತೇಂದ್ರ ಕುಮಾರ್ ಬೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಪುರಾಣ ಹಾಗೂ ಅತ್ಯಾಚಾರದ ಬಗ್ಗೆ ಉಲ್ಲೇಖಿಸಿದ್ದು, ಸ್ಲೈಡ್ ಶೋ ಅನ್ನು ತೋರಿಸಿದ್ದಾರೆ. ಹೀಗೆ ಉಪನ್ಯಾಸಕರು ಮಾಡುತ್ತಿದ್ದ ಬೋಧನೆಯ ವಿಡಿಯೋವನ್ನು ಮಾಡಿಕೊಂಡಿರುವ ಕೆಲವು ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬುದು ತೀವ್ರ ವಿವಾದಕ್ಕೆ ಕಾರಣವಾಯಿತು.
ಶೋಕಾಸ್ ನೋಟಿಸ್ ನಲ್ಲಿ ಇರುವುದೇನು?:
ಅಲಿಘರ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡೀನ್ ಆಗಿರುವ ರಾಕೇಶ್ ಭಾರ್ಗವ್ ಸೂಚನೆ ಮೇರೆಗೆ ಸಹಾಯಕ ಉಪನ್ಯಾಸಕ ಜೀತೇಂದ್ರ ಕುಮಾರ್ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. "ತರಗತಿಯಲ್ಲಿ ದುರುದ್ದೇಶವನ್ನು ಇಟ್ಟುಕೊಂಡೇ ಉದ್ದೇಶಪೂರ್ವಕವಾಗಿ ಪಿಪಿಟಿ ಮೂಲಕ ಬೋಧನೆ ಮಾಡಲಾಗಿದೆ. ಈ ವೇಳೆಯಲ್ಲಿ ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದ್ದೀರಿ. ಹೀಗಾಗಿ ಶಿಸ್ತುಕ್ರಮ ಜರುಗಿಸಲಾಗುವುದು," ಎಂದು ವಿವಿ ಕುಲಸಚಿವ ಅಬ್ದುಲ್ ಹಮೀದ್ ನೀಡಿರುವ ನೋಟಿಸ್ನಲ್ಲಿ ಹೇಳಲಾಗಿದೆ.












Click it and Unblock the Notifications