ಲಖಿಂಪುರ ಖೇರಿ ಗಲಭೆ; ಬಿಜೆಪಿ ನಾಯಕನ ಸ್ಫೋಟಕ ಹೇಳಿಕೆ!
ಲಕ್ನೋ, ಅಕ್ಟೋಬರ್ 14; "ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಕೇಂದ್ರ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಕೈವಾಡವಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪುಟದಿಂದ ಕೈಬಿಡಬೇಕು" ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕ ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಗಲಭೆಯಲ್ಲಿ 4 ರೈತರು ಸೇರಿ 8 ಜನರು ಮೃತಪಟ್ಟಿದ್ದರು. ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯರು ಆಗಿರುವ ರಾಮ್ ಇಕ್ಬಾಲ್ ಸಿಂಗ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿರುವ ಘಟನೆಗೆ ಮತ್ತೊಂದು ತಿರುವು ನೀಡಿದೆ.
"ಸಚಿವ ಅಜಯ್ ಕುಮಾರ ಮಿಶ್ರಾ ರೈತರ ಕ್ಷಮೆ ಕೇಳಬೇಕಿತ್ತು. ಆದರೆ ಅವರು ತಮ್ಮ ಪುತ್ರನ ಪರವಾಗಿ ಸಮರ್ಥನೆ ನೀಡುತ್ತಿದ್ದಾರೆ. ಘಟನೆ ಬಗ್ಗೆ ಅವರಿಗೆ ವಿಷಾದವೇ ಇಲ್ಲ. ಈ ಘಟನೆ ಮಾನವೀಯತೆ ಕಗ್ಗೊಲೆ ಮಾಡಿದೆ" ಎಂದು ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

"ಅವರ ಪುತ್ರ ರೈತರ ಮೇಲೆ ಕಾರು ಹತ್ತಿಸಿ ಸಾವಿಗೆ ಕಾರಣನಾಗಿದ್ದಾನೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಬಳಿಕ ಸಚಿವರ ಪುತ್ರನ ಬಂಧನವಾಗಿದೆ. ಇಂದಿಗೂ ಅವರು ಸಚಿವ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕಿತ್ತು" ಎಂದರು.
"ಲಖಿಂಪುರ ಖೇರಿ ಹಿಂಸಚಾರ, ಗೋರಖ್ಪುರ ಉದ್ಯಮಿಯ ಹತ್ಯೆ ಪ್ರಕರಣದಿಂದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಲಖಿಂಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಹತ್ಯೆಯಾಗಿದ್ದಾರೆ. ಬಿಜೆಪಿ ಅವರ ಬಗ್ಗೆಯೂ ಕಾಳಜಿ ವಹಿಸಬೇಕು" ಎಂದು ರಾಮ್ ಇಕ್ಬಾಲ್ ಸಿಂಗ್ ತಿಳಿಸಿದ್ದಾರೆ.
"ಲಖಿಂಪುರ ಖೇರಿ ಗಲಭೆ ಬಳಿಕ ರಾಜ್ಯದ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ರೈತರ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ಮಾಡಬೇಕು. ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು. ಬಿಜೆಪಿಯ ಕಟ್ಟಾ ಬೆಂಬಲಿಗರ ಪರಿಸ್ಥಿತಿ ಜೀತ ಕಾರ್ಮಿಕರಂತೆ ಆಗಿದೆ" ಎಂದು ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಹೇಳಿದರು.
ಬಿಜೆಪಿ ನಾಯಕ, ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಇಂತಹ ಹೇಳಿಕೆಗಳನ್ನು ಸದಾ ನೀಡುತ್ತಾ ಬಿಜೆಪಿ ನಾಯಕರನ್ನು ಟೀಕಿಸುತ್ತಾರೆ. ಹಿಂದೆ ಅಧಿಕಾರಿಗಳೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೋವಿಡ್ 2ನೇ ಅಲೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ವಹಣೆ ಮಾಡಿದ ರೀತಿಯನ್ನು ಸಹ ಪ್ರಶ್ನೆ ಮಾಡಿದ್ದರು.
ಲಖಿಂಪುರ ಖೇರಿ ಗಲಭೆ; ಅಕ್ಟೋಬರ್ 3ರಂದು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕಾರು ಹರಿದಿತ್ತು, ನಾಲ್ವರು ಮೃತಪಟ್ಟಿದ್ದರು. ಈ ಘಟನೆ ಬಳಿಕ ರೈತರು ಕಾರನ್ನು ಅಡ್ಡಗಟ್ಟಿ ಬೆಂಕಿ ಹಚ್ಚಿದ್ದರು ಆಗ ನಾಲ್ವರು ಮೃತಪಟ್ಟಿದ್ದರು.
ರೈತರ ಮೇಲೆ ಹರಿದ ಕಾರಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಇದ್ದರು ಎಂಬುದು ಆರೋಪ. ಘಟನೆಯ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅಶಿಶ್ ಮಿಶ್ರಾರನ್ನು ಪೊಲೀಸರ ಬಂಧಿಸಿದ್ದು, ಪೊಲೀಸರ ವಶದಲ್ಲಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಅಶಿಶ್ ಮಿಶ್ರಾ ಅಕ್ಟೋಬರ್ 9ರಂದು ಎಸ್ಐಟಿ ಮುಂದೆ ಹಾಜರಾಗಿದ್ದರು. 12 ಗಂಟೆಯ ವಿಚಾರಣೆ ಬಳಿಕ ಪೊಲೀಸರು ಬಂಧಿಸಿದ್ದರು. ಅಕ್ಟೋಬರ್ 12 ರಿಂದ 15ರ ತನಕ ಅಶಿಶ್ ಮಿಶ್ರಾ ಪೊಲೀಸರ ವಶದಲ್ಲಿ ಇರಲಿದ್ದು, ಗುರುವಾರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ.
ಉತ್ತರ ಪ್ರದೇಶದ ಇಬ್ಬರು ವಕೀಲರು ಲಖಿಂಪುರ ಖೇರಿ ಗಲಭೆ ಕುರಿತು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಪತ್ರ ಬರೆದಿದ್ದರು. ಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಪೀಠ ಗಲಭೆಯ ತನಿಖೆ ಕುರಿತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ ಎಂದು ಹೇಳಿತ್ತು.












Click it and Unblock the Notifications