35ವರ್ಷ ಮಾಯಾವತಿ ಜೊತೆಗಿದ್ದ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ
ಲಕ್ನೋ, ಮೇ 16: ನಾನು 35ವರ್ಷ ಬಿಎಸ್ಪಿ ನಾಯಕಿ ಮಾಯಾವತಿ ಜೊತೆಗಿದ್ದೆ, ಆ ಆಧಾರದ ಮೇಲೆ ಒಂದು ಮಾತನ್ನು ಹೇಳುತ್ತೇನೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ಎಂದು ಹಿಂದೆ ಬಿಎಸ್ಪಿ ಜೊತೆಗಿದ್ದ, ಈಗ ಕಾಂಗ್ರೆಸ್ ಪಕ್ಷದಲ್ಲಿರುವ ನಾಸಿಮುದ್ದೀನ್ ಸಿದ್ದಿಕಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಚುನಾವಣಾ ಫಲಿತಾಂಶ ಬಂದ ನಂತರ ಮಾಯಾವತಿ ತುಂಬಾ ಒತ್ತಡಗೊಳಗಾಗಲಿದ್ದಾರೆ ಇದು ನಿಶ್ಚಿತ ಎಂದಿರುವ ಸಿದ್ದಿಕಿ, ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಖಂಡಿತ ಎಂದಿದ್ದಾರೆ.
ಭಲಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದಿಕಿ, ಮಾಯಾವತಿ ಬಿಜೆಪಿ ಕಡೆ ವಾಲಿದ ನಂತರ, ಅಖಿಲೇಶ್ ಯಾದವ್ ಏಕಾಂಗಿಯಾಗಲಿದ್ದಾರೆ. ಹಾಗಾಗಿ, ಬೇರೆ ದಾರಿಯಿಲ್ಲದೇ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಈ ಹಿಂದೆಯೂ ಮಾಯಾವತಿ ಬಿಜೆಪಿ ಜೊತೆಗಿದ್ದರು. ಮೇ 23ರ ನಂತರ, ಅವರು ಬಿಜೆಪಿ ಸೇರುವ ಒತ್ತಡಕ್ಕೆ ಸಿಲುಕಲಿದ್ದಾರೆ. ಅವರ ಜೊತೆ ಇಷ್ಟು ವರ್ಷ ಇದ್ದಿದ್ದರಿಂದ ಅವರನ್ನು ಹತ್ತಿರದಿಂದ ನಾನು ಬಲ್ಲೆ ಎಂದು ಸಿದ್ದಿಕಿ ಹೇಳಿದ್ದಾರೆ.
ಮಾಯಾವತಿ ಸರಕಾರದಲ್ಲಿ ಹಿಂದೆ ಸಚಿವನಾಗಿದ್ದೆ, ನನಗೆ ಅವರ ಮೇಲೆ ತುಂಬಾ ಗೌರವವಿದೆ. ಆದರೆ, ಮತ್ತೆ ಬಿಎಸ್ಪಿಗೆ ಸೇರಲಾರೆ ಎಂದಿರುವ ಸಿದ್ದಿಕಿ, ಮಾಯಾವತಿ ಪ್ರಧಾನಿ ಅಭ್ಯರ್ಥಿ ಎಂದು ಎಲ್ಲೂ ಘೋಷಣೆಯಾಗಿಲ್ಲ ಎಂದಿದ್ದಾರೆ.
ಭಲಿಯಾ, ಗೋರಖಪುರ, ವಾರಣಾಸಿ ಸೇರಿದಂತೆ ಉತ್ತರಪ್ರದೇಶದ ಹದಿಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಕೊನೆಯ ಹಂತದಲ್ಲಿ (ಮೇ 19) ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications