ಹೆಂಡತಿ ಬಿಟ್ಟ ಮೋದಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ: ಮಾಯಾವತಿ
ಲಕ್ನೋ, ಮೇ 13: ಅಲ್ವಾರ್ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಆದರೆ, ಮಾಯಾವತಿ ರಾಜಕೀಯ ಕೆಸರೆರಚಾಟಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಾಲಿಗೆ ಹರಿಬಿಟ್ಟಿದ್ದಾರೆ.
ಬಿಜೆಪಿಯ ನಾಯಕಿಯರು ತಮ್ಮ ಗಂಡಂದಿರನ್ನು ಪ್ರಧಾನಿ ಮೋದಿ ಅವರಿಗೆ ಭೇಟಿ ಮಾಡಲು ಭಯಪಡುತ್ತಿದ್ದಾರೆ. ಏಕೆಂದರೆ ಮೋದಿ ಅವರಂತೆಯೇ ತಮ್ಮ ಪತಿಯರು ಕೂಡ ತಮ್ಮನ್ನು ತೊರೆದರೆ ಕಷ್ಟ ಎಂಬ ಆತಂಕ ಅವರಲ್ಲಿದೆ ಎಂದು ಮಾಯಾವತಿ ವ್ಯಂಗ್ಯವಾಡಿದ್ದಾರೆ.
'ಬಿಜೆಪಿಯಲ್ಲಿ ವಿವಾಹಿತ ಮಹಿಳಾ ಮುಖಂಡರು ಪ್ರಧಾನಿ ಮೋದಿ ಅವರ ಸುತ್ತ ತಮ್ಮ ಪತಿ ಇದ್ದರೆ ಹೆದರುತ್ತಾರೆ. ಮೋದಿ ತಮ್ಮ ಗಂಡಂದಿರನ್ನು ತಮ್ಮಿಂದ ಬೇರ್ಪಡುವಂತೆ ಮಾಡುತ್ತಾರೆ ಎಂದು ಅವರು ಭಯಪಡುತ್ತಾರೆ' ಎಂದು ಮಾಯಾವತಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಉಂಟಾಗಿರುವ ರಾಜಕೀಯ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮೋದಿ ಅವರು ತಮ್ಮ ಹೆಂಡತಿಯನ್ನೇ ತ್ಯಜಿಸಿದ್ದಾರೆ. ಅವರಿಗೆ ಮಹಿಳೆಯರ ಕುರಿತು ಗೌರವವಿಲ್ಲ ಎಂದು ಮಾಯಾವತಿ ಟೀಕಿಸಿದ್ದಾರೆ.

ಸೋದರಿ, ಪತ್ನಿಯರನ್ನು ಹೇಗೆ ಗೌರವಿಸುತ್ತಾರೆ?
'ಆಲ್ವಾರ್ ಸಾಮೂಹಿಕ ಅತ್ಯಾಚಾರದ ವಿಚಾರದಲ್ಲಿ ಮೋದಿ ಮೌನವಹಿಸಿದ್ದರು. ಅದರ ವಿಚಾರದಲ್ಲಿ ಅವರು ಹೊಲಸು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದರ ಮೂಲಕ ಈ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳಲು ಬಯಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ರಾಜಕೀಯ ಹಿತಾಸಕ್ತಿಗಾಗಿ ತಮ್ಮ ಪತ್ನಿಯನ್ನು ಬಿಟ್ಟವರು, ಉಳಿದವರ ಸಹೋದರಿಯರು, ಪತ್ನಿಯರನ್ನು ಹೇಗೆ ಗೌರವಿಸುತ್ತಾರೆ?' ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ದಲಿತರ ಮೇಲೆ ನಕಲಿ ಪ್ರೀತಿ
ದಲಿತರ ಮತಗಳಿಗಾಗಿ ಪ್ರಧಾನಿ ಮೋದಿ ಈ ವಿಚಾರವನ್ನು ಕೆದಕಿದ್ದಾರೆ ಎಂದು ಮಾಯಾವತಿ ಆರೋಪಿಸಿದರು. 'ಪ್ರಧಾನಿ ದಲಿತರ ಮತಗಳನ್ನು ಸೆಳೆಯಲು ಬಯಸಿದ್ದಾರೆ. ಅದಕ್ಕೆ ತಮ್ಮ ಸಮಾವೇಶಗಳಲ್ಲಿ ದಲಿತರ ಕುರಿತು ನಕಲಿ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಸಹರಾನ್ಪುರದ ಶಬ್ಬೀರ್ಪುರ ಘಟನೆಯನ್ನು ದಲಿತರು ಮರೆತಿಲ್ಲ. ರೋಹಿತ್ ವೆಮುಲಾ ಮತ್ತು ಊನಾ ಘಟನೆಗಳನ್ನು ದಲಿತರು ಮರೆತಿಲ್ಲ' ಎಂದು ಹೇಳಿದ್ದಾರೆ.

'ಮೋದಿಜಿ ಅವರಿಗೆ ದೇಶವೇ ದೊಡ್ಡದು'
ಮಾಯಾವತಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, 'ನಾನು ಟಿವಿಯಲ್ಲಿ ಮಾಯಾವತಿ ಅವರ ಮಾತನ್ನು ಆಲಿಸಿದ್ದೇನೆ. ಅವರು ಮೋದಿ ಅವರ ಕುರಿತು ಬಳಸಿದ ಪದಗಳು ತೀವ್ರ ನೋವುಂಟುಮಾಡುವಂತಿವೆ. ಇದು ಯಾವ ರೀತಿಯ ಮನಸ್ಥಿತಿ? ಮೋದಿ ಅವರ ವಿರುದ್ಧ ಇಷ್ಟು ದ್ವೇಷವೇ? ಏಕೆ? ಏಕೆಂದರೆ ಮೋದಿಜಿ ತಮ್ಮ ನೈಜ ಕುಟುಂಬಕ್ಕಿಂತಲೂ ದೇಶವನ್ನು ತಮ್ಮ ಕುಟುಂಬ ಎಂದು ಪರಿಗಣಿಸಿದ್ದಾರೆ. ಮಾಯಾವತಿಜಿ ನಿಮಗೆ ನಿಮ್ಮ ಸಹೋದರ ದೊಡ್ಡವರು. ಆದರೆ, ಮೋದಿಜಿ ಅವರಿಗೆ ದೇಶವೇ ದೊಡ್ಡದು' ಎಂದಿದ್ದಾರೆ.

ಬೆಂಬಲ ಹಿಂಪಡೆಯಲಿ
ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರದಲ್ಲಿ ಮಾಯಾವತಿ ಅವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಮೋದಿ ಅವರು ಟೀಕಿಸಿದ್ದರು. ಉತ್ತರ ಪ್ರದೇಶದ ಕುಶಿನಗರ್ ಮತ್ತು ದಿಯೊರಿಯಾಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಅವರು, ಈ ಘಟನೆ ಬಗ್ಗೆ ನಿಜಕ್ಕೂ ಅವರು ಗಂಭೀರರಾಗಿದ್ದರೆ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದುಕೊಳ್ಳಲಿ ಎಂದು ಮಾಯಾವತಿಗೆ ಮೋದಿ ಸವಾಲು ಹಾಕಿದ್ದರು.

ಮೋದಿ ಏಕೆ ರಾಜೀನಾಮೆ ನೀಡಿಲ್ಲ?
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ, 'ತಮ್ಮ ಆಡಳಿತಾವಧಿಯಲ್ಲಿ ದೇಶದ ಎಲ್ಲೆಡೆ ನಡೆದ ದಲಿತರ ಮೇಲಿನ ದೌರ್ಜನ್ಯ ಘಟನೆಗಳ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಮೋದಿ ನಿರಾಕರಿಸಿದ್ದಾರೆ. ಊನಾ ಘಟನೆ ಮತ್ತು ರೋಹಿತ್ ವೆಮುಲ ಪ್ರಕರಣಗಳು ಬಿಜೆಪಿ ಆಡಳಿತದಲ್ಲಿ ದಲಿತರು ಹೇಗೆ ನರಳಿದ್ದಾರೆ ಎನ್ನುವುದಕ್ಕೆ ಉದಾಹರಣೆಗಳಾಗಿವೆ. ಮೋದಿ ಅವರು ಏಕೆ ರಾಜೀನಾಮೆ ನೀಡುತ್ತಿಲ್ಲ?' ಎಂದು ಪ್ರಶ್ನಿಸಿದ್ದರು.












Click it and Unblock the Notifications