ಮಹಾಘಟಬಂಧನಕ್ಕೆ ಕೈಕೊಟ್ಟ ಜಾತಿ ಲೆಕ್ಕಾಚಾರ: ಬಿಜೆಪಿಗೆ ಜಾಟ್ ಬೆಂಬಲ
ಲಕ್ನೋ, ಮೇ 23: ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಮತಗಳು ಬಿಜೆಪಿಗೆ ವಿರುದ್ಧವಾಗಲಿದ್ದು, ಮೈತ್ರಿಕೂಟ ಇದರ ಲಾಭ ಪಡೆದುಕೊಳ್ಳಲಿದೆ ಎಂಬ ಊಹೆ ತಲೆಕೆಳಗಾಗಿದೆ.
ಉತ್ತರ ಪ್ರದೇಶದ ಆರಂಭದ ಟ್ರೆಂಡ್ ಪ್ರಕಾರ, ಜಾಟ್ ಸಮುದಾಯದ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಅಲಿಗಡ, ಹತ್ರಾಸ್, ಬಾಘಪಟ್, ಬುಲಂದ್ಶಹರ್ ಮತ್ತು ಮುಜಫ್ಫರ್ನಗರ ಲೋಕಸಭೆ ಕ್ಷೇತ್ರಗಳಲ್ಲಿ ಜಾಟ್ ಸಮುದಾಯದವರ ಪ್ರಾಬಲ್ಯವಿದೆ. ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಎಸ್ಪಿ ಮತ್ತು ಬಿಎಸ್ಪಿ ಬೆಂಬಲಿತ ಆರ್ಎಲ್ಡಿ ಅಭ್ಯರ್ಥಿಗಳಾದ ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರಿಗೆ ಜಾಟ್ ಮತಗಳು ಒಲಿದಿಲ್ಲ.
ಗೋರಖ್ಪುರ ಕ್ಷೇತ್ರದಲ್ಲಿ ಬಿಜೆಪಿಯ ರವಿಕಿಶನ್ ಮುನ್ನಡೆ ಪಡೆದುಕೊಂಡಿದ್ದಾರೆ. ಆರಂಭದ ಟ್ರೆಂಡ್ ಪ್ರಕಾರ ಉತ್ತರ ಮತ್ತು ಕೇಂದ್ರ ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಸೂಚನೆ ನೀಡಿದೆ. ಮುಸ್ಲಿಮರು, ಯಾದವರು ಮತ್ತು ದಲಿತರು ಶೇ 50ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲಿ ಮಾತ್ರ ಮಹಾಘಟಬಂಧನ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.