ಹೈದರಾಬಾದ್ ಪೊಲೀಸರಿಂದ ಕಲೀರಿ ಎಂದ ಮಾಯಾವತಿಗೆ, ಯೋಗಿ ಆದಿತ್ಯನಾಥ್ ಕೊಟ್ಟ ಮಾತಿನ ಎನ್ಕೌಂಟರ್
ಲಕ್ನೋ, ಡಿ 6: ತೆಲಂಗಾಣದ ಪಶುವೈದ್ಯೆಯನ್ನು ರೇಪ್ ಮಾಡಿ, ಸುಟ್ಟ ನಾಲ್ವರನ್ನು ಹೈದರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ ಸುದ್ದಿ, ದೇಶದೆಲ್ಲಡೆ ಸದ್ದು ಮಾಡುತ್ತಿದೆ.
ಈ ವಿಚಾರದ ಬಗ್ಗೆ ಹೇಳಿಕೆ ನೀಡಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, "ದೆಹಲಿ ಮತ್ತು ಉತ್ತರಪ್ರದೇಶದ ಪೊಲೀಸರು ಹೈದರಾಬಾದ್ ಪೊಲೀಸರಿಂದ ಕಲಿಯಬೇಕಿದೆ' ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
"ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿದೆ. ಇಲ್ಲಿನ ಪೊಲೀಸರಿಗೆ ನಾನು ಹೇಳುವುದಿಷ್ಟೇ, ಅವರೆಲ್ಲಾ, ಹೈದರಾಬಾದ್ ಪೊಲೀಸರನ್ನು ಪ್ರೇರಣೆಯಾಗಿ ತೆಗೆದುಕೊಂಡು ಕೆಲಸ ಮಾಡಬೇಕಿದೆ" ಎಂದು ಮಾಯಾವತಿ ಹೇಳಿದ್ದಾರೆ.

"ಹೈದಾರಾಬಾದ್ ಪೊಲೀಸರ ಕೆಲಸವನ್ನು ನಾನು ಶ್ಲಾಘಿಸುತ್ತೇನೆ. ದೆಹಲಿ ಮತ್ತು ಉತ್ತರಪ್ರದೇಶದ ಪೊಲೀಸರು, ಕ್ರಿಮಿನಲ್ ಗಳನ್ನು ಅತಿಥಿಯಂತೆ ನೋಡಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ" ಎಂದು ಮಾಯಾವತಿ, ಎರಡೂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಯಾವತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕ್ರಿಮಿನಲ್ ಗಳನ್ನು ಮಟ್ಟಹಾಕಲು ಸರಕಾರ ತೆಗೆದುಕೊಂಡಿರುವ ಕ್ರಮವನ್ನು ವಿವರಿಸಿದ್ದಾರೆ.
"ಇದುವರೆಗೆ 103 ಕ್ರಿಮಿನಲ್ ಗಳನ್ನು ಎನ್ಕೌಂಟರ್ ನಲ್ಲಿ ಸಾಯಿಸಲಾಗಿದೆ. 1,859 ಆರೋಪಿಗಳು ಗಾಯಗೊಂಡಿದ್ದಾರೆ, 5,100 ಪೊಲೀಸ್ ಎನ್ಕೌಂಟರ್ ಕಳೆದ ಎರಡು ವರ್ಷಗಳಲ್ಲಿ ನಡೆದಿದೆ. 18,000 ಆರೋಪಿಗಳು ಬೇಲ್ ರದ್ದುಪಡಿಸಿಕೊಂಡಿದ್ದಾರೆ" ಎಂದು ಸಿಎಂ ಯೋಗಿ ಆದಿತ್ಯನಾಥ್ ವಿವರಣೆ ನೀಡಿದ್ದಾರೆ.
"ಹೈದರಾಬಾದ್ ಪೊಲೀಸರ ಕ್ರಮವನ್ನು ಶ್ಲಾಘಿಸುವ ಮಾಯಾವತಿ, ಒಂದು ವರ್ಷದ ಹಿಂದೆ, ಇಲ್ಲಿನ, ಎನ್ಕೌಂಟರ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಯಾಕೆ" ಎಂದು ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.












Click it and Unblock the Notifications