Good News: ತಿಥಿಗೆ ವಿಪರೀತ ಖರ್ಚು, ಮದ್ಯ ಸೇವನೆ ನಿಷೇಧಿಸಿದ ಮಥುರಾದ ಹಳ್ಳಿಗಳು
ಮಥುರಾ (ಉತ್ತರಪ್ರದೇಶ), ಸೆಪ್ಟೆಂಬರ್ 3: ಉತ್ತರಪ್ರದೇಶದಲ್ಲಿರುವ ಮಥುರಾದ ಎಂಟು ಪಂಚಾಯಿತಿಗಳು ತೆಗೆದುಕೊಂಡಿರುವ ತೀರ್ಮಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವರದಕ್ಷಿಣೆ, ಮದ್ಯ ಸೇವನೆ, ವಿಪರೀತ ಖರ್ಚು ಮಾಡಿ ಶ್ರಾದ್ಧ ಮಾಡುವುದು ಹಾಗೂ ಅಂತ್ಯಕ್ರಿಯೆ ಮಾಡುವುದನ್ನು ನಿಷೇಧಿಸಲಾಗಿದೆ.
ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾಗಿರುವ ಚೌಧರಿ ಗೋವಿಂದ್ ಸಿಂಗ್ ಅವರು ಇಂಥ ಒಂದು ಪಂಚಾಯತ್ ನ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿ, ಇಂತಹ ನಿರ್ಧಾರಗಳಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಆಗುವುದಷ್ಟೇ ಅಲ್ಲ, ಹೆಚ್ಚುವರಿ ಆರ್ಥಿಕ ಹೊರೆ ತಗ್ಗುತ್ತದೆ ಮತ್ತು ಸಾಮಾಜಿಕ ಪರಿಸರ ಚೆನ್ನಾಗಿ ಆಗಲು ಸಹಕಾರಿ ಎಂದಿದ್ದಾರೆ.
ಸಾಮಾಜಿಕ ಒತ್ತಡದ ಕಾರಣಕ್ಕೆ ಜನರು ವರದಕ್ಷಿಣೆ ನೀಡಲು ಹಾಗೂ ದುಬಾರಿ ಮದುವೆ ಮಾಡುವ ಒತ್ತಡ ಬೀಳುತ್ತದೆ. ಅಂಥ ಖರ್ಚುಗಳಿಗೆ ಕಡಿವಾಣ ಬೀಳುವಂತಾಗಿ, ಮನೆಯ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ, ಸ್ವತಂತ್ರರಾಗುವಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಐಮಲ್ ಪತ್ತಿ, ಸಿಂಗ ಪತ್ತಿ, ಸೌಂಖ್ ದೇಹತ್, ಲೋರಿಹಾ ಪತ್ತಿ, ಬಚ್ ಗಾಂವ್ ಗಳಲಿ ತಕ್ಷಣದಿಂದಲೇ ಅನ್ವಯ ಆಗುವಂತೆ ಈ ನಿಯಮವನ್ನು ಜಾರಿಗೆ ತಂದಿವೆ. ಜಿಲ್ಲಾ ಪಂಚಾಯಿತಿ ಸದಸ್ಯ ಭರತ್ ಸಿಂಗ್ ಮಾತನಾಡಿ, ಐವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಪ್ರತಿ ಹಳ್ಳಿಯಲ್ಲಿ ರಚನೆ ಮಾಡಲಾಗುತ್ತದೆ. ಆ ಸಮಿತಿಯು ಸ್ಥಳೀಯರ ಜತೆ ಸಂವಾದ ನಡೆಸಿ, ಈ ವರೆಗಿನ ಸಾಮಾಜಿಕ ಪಿಡುಗಿನ ಮಿಥ್ಯೆಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದಿದ್ದಾರೆ.












Click it and Unblock the Notifications