ಠಾಣೆಯೊಳಗೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇನ್ಸ್ಪೆಕ್ಟರ್ ಅರೆಸ್ಟ್
ಪ್ರಯಾಗರಾಜ್ ಮೇ 05: ಲಲಿತ್ಪುರದ ಪೊಲೀಸ್ ಠಾಣೆಯೊಳಗೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇನ್ಸ್ಪೆಕ್ಟರ್ ತಿಲಕಧಾರಿ ಸರೋಜ್ ಅವರನ್ನು ಪ್ರಯಾಗ್ರಾಜ್ನಿಂದ ಬಂಧಿಸಲಾಗಿದೆ. ಇದನ್ನು ಎಡಿಜಿ ಪ್ರಯಾಗ್ರಾಜ್ ಪ್ರೇಮ್ ಪ್ರಕಾಶ್ ಖಚಿತಪಡಿಸಿದ್ದಾರೆ. ಪ್ರಕರಣ ಬಹಿರಂಗಗೊಂಡ ನಂತರ ಇನ್ಸ್ಪೆಕ್ಟರ್ ಪರಾರಿಯಾಗಿದ್ದರು. ಪ್ರಯಾಗ್ರಾಜ್ನಲ್ಲಿರುವ ಇನ್ಸ್ಪೆಕ್ಟರ್ ಅವರ ಮೊಬೈಲ್ ಫೋನ್ ಟ್ರ್ಯಾಕ್ ಮಾಡುವ ಮೂಲಕ ಸ್ಥಳ ವಿಳಾಸವನ್ನು ಪಡೆದು ಅವರನ್ನು ಸೆರೆಹಿಡಿಯಲಾಗಿದೆ. ಬಂಧನವನ್ನು ತಪ್ಪಿಸಲು ಕಾನೂನು ಸಲಹೆಗಾಗಿ ಇನ್ಸ್ಪೆಕ್ಟರ್ ಪ್ರಯಾಗ್ರಾಜ್ಗೆ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಆರೋಪಿ ಇನ್ಸ್ ಪೆಕ್ಟರ್ ಬಂಧನಕ್ಕೂ ಮುನ್ನ ಸಂತ್ರಸ್ತೆಯ ಚಿಕ್ಕಮ್ಮ ಸೇರಿದಂತೆ ಮೂವರು ಆರೋಪಿಗಳನ್ನು ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎನ್ಎಚ್ಆರ್ಸಿ ಕೂಡ ಈ ವಿಷಯದ ಬಗ್ಗೆ ಗಮನಹರಿಸಿದೆ. ಎನ್ಎಚ್ಆರ್ಸಿ ಯುಪಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ಲಲಿತ್ಪುರ ಜಿಲ್ಲೆಯ ಎಸ್ಎಚ್ಒ 13 ವರ್ಷದ ಬಾಲಕಿಯ ಅತ್ಯಾಚಾರದ ಮಾಧ್ಯಮ ವರದಿಗೆ ಸಂಬಂಧಿಸಿದಂತೆ 4 ವಾರಗಳಲ್ಲಿ ವರದಿ ಕೇಳಿದೆ.
ಯುಪಿ ಅಪ್ರಾಪ್ತಳ ಮೇಲೆ ಗ್ಯಾಂಗ್ರೇಪ್: 6 ಮಂದಿ ಪೊಲೀಸರ ವಿರುದ್ಧ ಕೇಸ್
ಬಿಜೆಪಿ ಮೇಲೆ ಆಕ್ರೋಶ
ಲಲಿತ್ಪುರ ಜಿಲ್ಲೆಯ ಪಾಲಿ ಪೊಲೀಸ್ ಠಾಣೆಯ ಸರ್ಕಾರಿ ಕ್ವಾರ್ಟರ್ಸ್ನಲ್ಲಿ ಬಾಲಕಿಯ ಮೇಲೆ ಠಾಣಾಧಿಕಾರಿ ಅತ್ಯಾಚಾರವೆಸಗಿದ ನಂತರ ಈ ಘಟನೆಯಲ್ಲಿ ರಾಜಕೀಯ ಕೆಸರೆರೆಚಾಟ ತೀವ್ರಗೊಂಡಿದೆ. ಯೋಗಿ ಆಡಳಿತದಲ್ಲಿ ವಿಶೇಷವಾಗಿ ಮಹಿಳೆಯರ ಬಗ್ಗೆ ಕಾಳಜಿಯ ಯೋಜನೆಗಳನ್ನು ಹೊರತರುತ್ತಿರುವ ವೇಳೆ ಇಂತಹ ಪ್ರಕರಣ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಎಡೆಮಾಡಿಕೊಟ್ಟಂತಾಗಿದೆ. ಹೀಗಾಗಿ ಯೋಗಿ ಸರ್ಕಾರ ಈ ವಿಚಾರದಲ್ಲಿ ದೊಡ್ಡ ಕ್ರಮ ಕೈಗೊಂಡಿದೆ. ಪಾಲಿ ಪೊಲೀಸ್ ಠಾಣೆಯ 6 ಎಸ್ಐಗಳು, 6 ಹೆಡ್ ಕಾನ್ಸ್ಟೆಬಲ್ಗಳು, 10 ಕಾನ್ಸ್ಟೆಬಲ್ಗಳು, 5 ಮಹಿಳಾ ಕಾನ್ಸ್ಟೆಬಲ್ಗಳು, ಒಬ್ಬ ಚಾಲಕ ಮತ್ತು ಒಬ್ಬ ಅನುಯಾಯಿ ಸೇರಿದಂತೆ 29 ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದೆ.
ವಿಚಾರಣೆ ತೀವ್ರಗೊಳಿಸಿದ ಸರ್ಕಾರ
ಈ ಕುರಿತು ಮಾಹಿತಿ ನೀಡಿದ ಕಾನ್ಪುರ ವಲಯ ಎಡಿಜಿ ಭಾನು ಭಾಸ್ಕರ್, ಪಾಲಿ ಪೊಲೀಸ್ ಠಾಣೆಯ ಎಲ್ಲ ಪೊಲೀಸರನ್ನು ಸರತಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಇದೇ ವೇಳೆ ತನಿಖೆಯನ್ನು ಡಿಐಜಿ ಝಾನ್ಸಿ ಜೋಗೇಂದ್ರ ಕುಮಾರ್ ಅವರಿಗೆ ವಹಿಸಲಾಗಿದ್ದು, ಅವರು 24 ಗಂಟೆಯೊಳಗೆ ತನಿಖಾ ವರದಿ ನೀಡಲಿದ್ದಾರೆ. ಅಷ್ಟೇ ಅಲ್ಲ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರು ನೀಡಲು ಬಂದ ಬಾಲಕಿ ಮೇಲೆ ಅತ್ಯಾಚಾರ
ಲಲಿತ್ಪುರದ ಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯನ್ನು ಅಪಹರಿಸಿ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ತನ್ನ ಹೇಳಿಕೆಯನ್ನು ದಾಖಲಿಸಲು ಪಾಲಿ ಪೊಲೀಸ್ ಠಾಣೆಗೆ ಹೋಗಿದ್ದಳು. ಅಲ್ಲಿ SHO ಅವಳನ್ನು ತನ್ನ ಕೋಣೆಗೆ ಕರೆದು ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆಯ ಸಂಪೂರ್ಣ ವಿಷಯವನ್ನು ಬಾಲಕಿ ಚೈಲ್ಡ್ ಲೈನ್ಗೆ ತಿಳಿಸಿದ್ದಾಳೆ. ಈ ಪ್ರಕರಣದಲ್ಲಿ ಠಾಣಾಧಿಕಾರಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಇಲಾಖಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾನ್ಪುರ ವಲಯದ ಎಡಿಜಿ ಭಾನು ಭಾಸ್ಕರ್ ತಿಳಿಸಿದ್ದರು. ತನಿಖೆಗೆ ತೊಂದರೆಯಾಗದಂತೆ ಎಲ್ಲ ಪೊಲೀಸರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಲಲಿತ್ಪುರ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಎಫ್ಐಆರ್ ದಾಖಲಿಸಲಾಗಿತ್ತು. ನಮಗೆ ಸಿಕ್ಕಿರುವ ಸತ್ಯಾಸತ್ಯತೆ ಆಧಾರದ ಮೇಲೆ ತನಿಖೆ ನಡೆಸಿ 4 ಮಂದಿಯನ್ನು ಬಂಧಿಸಲಾಗಿದೆ. ಉಳಿದ ನಾಮನಿರ್ದೇಶಿತ ವ್ಯಕ್ತಿಗಳನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಡಿಜಿ ಹೇಳಿದ್ದರು.
ಮೂರು ಪೊಲೀಸ್ ತಂಡಗಳ ರಚನೆ
ಇಲ್ಲಿ ಪ್ರಕರಣ ದಾಖಲಾದ ಸುದ್ದಿ ತಿಳಿದ ತಕ್ಷಣ ಆರೋಪಿ ಎಸ್ಎಚ್ಒ ತಿಲಕಧಾರಿ ಸರೋಜ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಡಿಐಜಿ ಜೋಗೇಂದ್ರ ಕುಮಾರ್ ಮೂರು ಪೊಲೀಸ್ ತಂಡಗಳನ್ನು ರಚಿಸಿತ್ತು. ತಂಡವೂ ಆರೋಪಿಗಳ ಹುಡುಕಾಟದಲ್ಲಿ ಪ್ರಯಾಗ್ರಾಜ್ನ ಗಂಗಾಪರ್ ಪ್ರದೇಶದಲ್ಲಿ ತಡರಾತ್ರಿ ದಾಳಿ ನಡೆಸಲಾಗಿತ್ತು. ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಲಾಗಿತ್ತು. ಮತ್ತೊಂದೆಡೆ, ವಿಷಯದ ಸೂಕ್ಷ್ಮತೆಯ ದೃಷ್ಟಿಯಿಂದ ಡಿಐಜಿ ಜೋಗೇಂದ್ರ ಕುಮಾರ್ ಲಲಿತ್ಪುರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೊನೆಗೂ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇನ್ಸ್ಪೆಕ್ಟರ್ ತಿಲಕಧಾರಿ ಸರೋಜ್ ಅವರನ್ನು ಪ್ರಯಾಗ್ರಾಜ್ನಿಂದ ಬಂಧಿಸಲಾಗಿದೆ.