ಲಖಿಂಪುರ ಖೇರಿ ಪ್ರಕರಣ: ಕೇಂದ್ರ ಸಚಿವರ ಪುತ್ರನಿಗೆ ಮತ್ತೆ ಪೊಲೀಸ್ ಕಸ್ಟಡಿ
ಲಕ್ನೋ, ಅಕ್ಟೋಬರ್ 22: ಉತ್ತರ ಪ್ರದೇಶದ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾರನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ರೈತರ ಮೇಲೆ ವಾಹನವೊಂದು ವೇಗವಾಗಿ ಹರಿದು ಹೋದ ಹಿನ್ನೆಲೆ ಈ ಸಾವು ಸಂಭವಿಸಿದೆ ಎಂದು ರೈತರು ಹೇಳಿದ್ದಾರೆ. ಈ ವಾಹನದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಕೂಡಾ ಇದ್ದರು ಎಂದು ರೈತರು ಆರೋಪ ಮಾಡಿದ್ದಾರೆ.
ಲಖಿಂಪುರ ಖೇರಿ ಗಲಭೆ: ಕಾರಿನಲ್ಲಿದ್ದ ಬಿಜೆಪಿ ನಾಯಕ ಸೇರಿ ನಾಲ್ವರ ಬಂಧನ
ರೈತರ ಆರೋಪದ ಆದಾರದಲ್ಲಿ ದೂರು ದಾಖಲು ಮಾಡಿದ್ದ ಆಶಿಶ್ ಮಿಶ್ರಾರನ್ನು ಪೊಲೀಸರು ಈ ಪ್ರಕರಣ ನಡೆದು ಹಲವು ದಿನಗಳ ಬಳಿಕ ಬಂಧನ ಮಾಡಿದ್ದರು. ಹಾಗೆಯೇ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಯನ್ನು ನಡೆಸಿದ್ದರು. ಈಗ ಪೊಲೀಸರು ಮತ್ತೆ ಆಶಿಶ್ ಮಿಶ್ರಾರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡಕ್ಕೆ ಹೊಸ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ ಈಗ ಮತ್ತೆ ಆಶಿಶ್ ಮಿಶ್ರಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದೆ ಎಂದು ವರದಿಯು ಹೇಳಿದೆ. ಆಶಿಶ್ ಮಿಶ್ರಾ ಮಾತ್ರವಲ್ಲದೇ ಉಳಿದ ಆರೋಪಿಗಳನ್ನು ಕೂಡಾ ಪೊಲೀಸರು ಕಸ್ಟಡಿಗೆ ಪಡೆಯಲು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಈ ಹಿನ್ನೆಲೆ ಆರೋಪಿಗಳಾದ ಅಕಿಂತ್ ದಾಸ್, ಶೇಖರ್ ಭಾರ್ತಿ ಹಾಗೂ ಲತೀಫ್ ಅನ್ನು ಕೂಡಾ ಪೊಲೀಸ್ ಕಸ್ಟಡಿಗೆ ನ್ಯಾಯಾಲಯವು ನೀಡಿದೆ.
ಲಖಿಂಪುರ ಗಲಭೆ, ಕೇಂದ್ರ ಸಚಿವರ ಪುತ್ರ ಪೊಲೀಸ್ ವಶಕ್ಕೆ
ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಸೇರಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೈತರ ಮೇಲೆ ಹರಿದ ಕಾರಿನಲ್ಲಿ ಆರೋಪಿಗಳು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಬಂಧಿತರನ್ನು ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಷ್ಟ್ ಹಾಗೂ ಸತ್ಯ ಪ್ರಕಾಶ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳನ್ನು ಲಖಿಂಪುರ ಖೇರಿ ಪೊಲೀಸರು ಹಾಗೂ ಎಸ್ಡಬ್ಲ್ಯೂಎಟಿ ತಂಡದ ಅಪರಾಧ ವಿಭಾಗವು ಬಂಧಿಸಿದೆ.
ಈ ಹಿಂದೆ ಆಶಿಶ್ ಮಿಶ್ರಾರನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು
ಆಶಿಶ್ ಮಿಶ್ರಾನ ಬಂಧನವಾದ ಬಳಿಕ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಆಶಿಶ್ ಮಿಶ್ರಾನನ್ನು ವಶಕ್ಕೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾನನ್ನು ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು.
ಇದಕ್ಕೂ ಮುನ್ನ ಆಶಿಶ್ ಮಿಶ್ರಾ ಎಸ್ಐಟಿ ಮುಂದೆ ಹಾಜರಾಗಿದ್ದರು. ಸುಮಾರು ಹನ್ನೊಂದು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ಆದರೆ ಆಶಿಶ್ ಮಿಶ್ರಾ ಸಹಕಾರ ನೀಡುತ್ತಿಲ್ಲ ಎಂಬ ಕಾರಣ ನೀಡಿ ಪೊಲೀಸರು ಬಂಧನ ಮಾಡಿದ್ದರು. ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಆಶಿಶ್ ಮಿಶ್ರಾ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದ ಸಂದರ್ಭದಲ್ಲಿ ತಾವು ಎಲ್ಲಿದ್ದರು ಎಂಬ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಆರೋಪ ಮಾಡಿದ್ದರು.
ಈ ಪ್ರಕರಣದಲ್ಲಿ ಆಶಿಶ್ ಮಿಶ್ರಾರ ಹೆಸರು ಕೇಳಿಬರುತ್ತಿದ್ದಂತೆ ತನ್ನ ಪುತ್ರನ ಪರವಾಗಿ ನಿಂತ ತಂದೆ ಅಜಯ್ ಮಿಶ್ರಾ, "ನನ್ನ ಮಗ ಆ ಸಂದರ್ಭದಲ್ಲಿ ಆ ಸ್ಥಳದಲ್ಲಿ ಇರಲಿಲ್ಲ. ಬೇರೆ ಕಡೆಯಲ್ಲಿ ಒಂದು ಸಮಾರಂಭದಲ್ಲಿ ಇದ್ದ," ಎಂದು ಹೇಳಿದ್ದರು. ಅದಕ್ಕೆ ನಮ್ಮಲ್ಲಿ ಬೇಕಾದಷ್ಟು ಸಾಕ್ಷಿ ಇದೆ ಎಂದು ಕೂಡಾ ಹೇಳಿದ್ದರು. ಆದರೆ ಆಶಿಶ್ ಮಿಶ್ರಾ ಮೊಬೈಲ್ ಲೋಕೇಶನ್ ಈ ಹಿಂಸಾಚಾರ ನಡೆದ ಪ್ರದೇಶದಲ್ಲೇ ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೇ ಆಶಿಶ್ ಮಿಶ್ರಾ ತಲೆಮರೆಸಿಕೊಂಡಿದ್ದರು.
(ಒನ್ಇಂಡಿಯಾ ಸುದ್ದಿ)