ಲಖಿಂಪುರ ಹಿಂಸಾಚಾರ: ಮೃತರ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕ
ಲಕ್ನೋ, ಅಕ್ಟೋಬರ್ 07: ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಉತ್ತರಪ್ರದೇಶ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬವನ್ನು ಭೇಟಿಯಾಗಿದ್ದಾರೆ. ಮೃತರಿಬ್ಬರು ಕೂಡಾ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಇದ್ದ ಕಾರು ಹರಿದು ಹೋಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪವಿದೆ.
ಉತ್ತರ ಪ್ರದೇಶದ ಲಖಿಂಪುರದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ರಾಹುಲ್ ಗಾಂಧಿಯ ಜೊತೆಗೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಜೊತೆಯಲ್ಲಿ ಇದ್ದರು.
"ಸಂತ್ರಸ್ತರ ಕುಟುಂಬಕ್ಕೆ ಖಂಡಿತವಾಗಿ ನ್ಯಾಯ ದೊರೆಯಬೇಕು. ನಾವು ಇಲ್ಲಿ ಮೃತ ರೈತರ ಕುಟುಂಬಕ್ಕೆ ಸಹಾಯ ಮಾಡಲು ಬಂದಿದ್ದೇವೆ. ಈ ಮೂಲಕ ಆಡಳಿತದ ಮೇಲೆ ಒತ್ತಡವನ್ನು ಹೇರಲು ಬಂದಿದ್ದೇವೆ," ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸೋಮವಾರ ಉತ್ತರಪ್ರದೇಶ ಲಖಿಂಪುರ ಖೇರಿಗೆ ತೆರಳುತ್ತಿದ್ದ ವೇಳೆ ಬಂಧನಕ್ಕೆ ಒಳಗಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಬುಧವಾರ ಸೀತಾಪುರ ಗೆಸ್ಟ್ ಹೌಸ್ನಿಂದ ಬಿಡುಗಡೆ ಮಾಡಲಾಗಿದ್ದು, ಪ್ರಿಯಾಂಕ ಗಾಂಧಿ ಕೂಟಾ ರೈತರ ಕುಟುಂಬವನ್ನು ಭೇಟಿಯಾದ ಈ ಕಾಂಗ್ರೆಸ್ ನಿಯೋಗದಲ್ಲಿ ಜೊತೆಯಾದರು. ಈ ನಿಯೋಗವು ಮೃತಪಟ್ಟ 19 ವರ್ಷದ ಲವ್ಪ್ರೀತ್ ಸಿಂಗ್ ಹಾಗೂ 30 ವರ್ಷದ ಸ್ಥಳೀಯ ಪತ್ರಕರ್ತ ರಮನ್ ಕಶ್ಯಪ್ರ ಕುಟುಂಬವನ್ನು ಭೇಟಿಯಾಗಿದೆ.
ಈ ನಡುವೆ ಸುಪ್ರೀಂ ಕೋರ್ಟ್ ಈ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಹಿಂಸಾಚಾರ ಪ್ರಕರಣವನ್ನು ಗುರುವಾರ ಕೈಗೆತ್ತಿಕೊಳ್ಳಲಿದೆ. ಈ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ನಡೆಸಲಿದೆ.
ಏತನ್ಮಧ್ಯೆ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಈ ಹಿಂಸಾಚಾರ ಪ್ರಕರಣದಲ್ಲಿ ಅಜಯ್ ಮಿಶ್ರಾರ ಮಗನ ಕೈವಾಡವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಹಾಗೂ ರೈತರು ಅಜಯ್ ಮಿಶ್ರಾರ ರಾಜೀನಾಮೆಗೆ ಅಥವಾ ಅಮಾನತಿಗೆ ಆಗ್ರಹ ಮಾಡುತ್ತಿದ್ದಾರೆ. ಈ ನಡುವೆ ಅಮಿತ್ ಶಾ, ಅಜಯ್ ಮಿಶ್ರಾರನ್ನು ಭೇಟಿಯಾಗಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಅಜಯ್ ಮಿಶ್ರಾರ ರಾಜೀನಾಮೆ ಸಾಧ್ಯತೆಯನ್ನು ಅಲ್ಲಗಳೆದಿದೆ. ಅಜಯ್ ಮಿಶ್ರಾ ಆಗಲಿ ಅವರ ಪುತ್ರ ಆಶೀಶ್ ಮಿಶ್ರಾ ಆಗಲಿ ಆ ಸ್ಥಳದಲ್ಲಿ ಇರಲಿಲ್ಲ ಎಂದು ಈಗಾಗಲೇ ಅಜಯ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ರಾಜೀನಾಮೆಯ ಸಾಧ್ಯತೆಯನ್ನು ನಿರಾಕರಿಸುವ ವೇಳೆ ಹೇಳಿದೆ. ಈ ಬಗ್ಗೆ ಸಂಪೂರ್ಣವಾದ ತನಿಖೆ ನಡೆಯಲಿ ಎಂದು ಕೂಡಾ ತಿಳಿಸಿದೆ.
ರಾಹುಲ್ ಗಾಂಧಿ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಸಂಚಾರದ ವಿಚಾರದಲ್ಲಿ ಉತ್ತರ ಪ್ರದೇಶ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರು ಹೇಳಿದ ದಾರಿಯಲ್ಲಿ ಹೋಗಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. "ನನಗೆ ಸಂಚಾರ ವ್ಯವಸ್ಥೆ ಮಾಡಿಕೊಡಲು ನೀವ್ಯಾರು," ಎಂದು ಪೊಲೀಸರನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. "ನಾನು ನನ್ನ ಕಾರಿನಲ್ಲೇ ಹೋಗುತ್ತೇನೆ," ಎಂದು ಕೂಡಾ ಹೇಳಿದ್ದಾರೆ.
Smt. @priyankagandhi and Shri @RahulGandhi meet the family of lovepreet who was moved down at #lakimpurkheri pic.twitter.com/nTbeGIMqCr
— Lavanya Ballal (@LavanyaBallal) October 6, 2021
ಇನ್ನು ಈ ಕಾಂಗ್ರೆಸ್ ನಿಯೋಗ ಹೊರತು ಪಡಿಸಿ ಆಪ್ ನಾಯಕ ಹರ್ಪಾಲ್ ಚೀಮಾ ಹಾಗೂ ರಾಘವ್ ಚದಾ ಹಾಗೂ ಇತರರು ಮೃತ ನಚ್ಚತ್ತಾರ್ ಸಿಂಗ್ರ ಕುಟುಂಬವನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೃತರ ಕುಟುಂಬದೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಎಲ್ಲಾ ಪಕ್ಷಗಳಿಗೆ ಲಖಿಂಪುರಕ್ಕೆ ಭೇಟಿಯಾಗಲು ಅವಕಾಶ ನೀಡಲಾಗಿದೆ. ಆದರೆ ಕೆಲವೇ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಕಳೆದ ಭಾನುವಾರದಿಂದ ಈ ಪ್ರದೇಶದಲ್ಲಿನ ಮೃತರ ಕುಟುಂಬವನ್ನು ಭೇಟಿಯಾಗುವ ಪ್ರಯತ್ನವನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದಾರೆ.
ಭಾನುವಾರ ಸಾವನ್ನಪ್ಪಿದ ಮೂವರು ರೈತರುಗಳ ಶವ ಸಂಸ್ಕಾರವನ್ನು ಮಂಗಳವಾರ ಮಾಡಲಾಗಿದೆ. ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುವ ಗುರುವಿಂದರ್ ಸಿಂಗ್ರ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಬುಧವಾರ ನಡೆಸಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications