ಎಲ್ಲೆಲ್ಲೂ ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!
ಎಲ್ಲೆಲ್ಲೂ ಜನಜಂಗುಳಿ, ಯಾವುದೋ ರಾಜನ ಪಟ್ಟಾಭಿಷೇಕಕ್ಕೆ ಎಂಬಂತೆ ಸಿಂಗರಿಸಿಕೊಂಡ ಪ್ರಯಾಗರಾಜ್(ಅಲಹಾಬಾದ್), ತಪ್ಪಸ್ಸು, ಸಿದ್ಧಿ ಎನ್ನುತ್ತ ಹಿಮಾಲಯಕ್ಕೋ, ಇನ್ನೆಲ್ಲಿಗೂ ತೆರಳಿದ್ದ ಸಾಧುಗಳು, ಸನ್ಯಾಸಿಗಳು, ನಾಗಾಸಾಧುಗಳು ಪವಿತ್ರ ತರಂಗಿಣಿಯಲ್ಲಿ ಮಿಂದೇಳುವುದಕ್ಕೆಂದು ಆಗಮಿಸಿದ ಘಳಿಗೆ... ಕಣ್ಣು ಹಾಯಿಸಿದಷ್ಟು ದೂರವೂ ಕೇಸರಿಯ ಜಾತ್ರೆ.. ಎಲ್ಲೆಲ್ಲೂ ಕಾಷಾಯ ಧರಿಸಿದ ಸಾಧುಗಳದ್ದೇ ಸಂತೆ...
ಅದು ವಿಶ್ವ ಪ್ರಸಿದ್ಧ ಕುಂಬಮೇಳ! ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ಈಗಾಗಲೇ ಸಿದ್ಧಗೊಂಡಿದೆ. ಜನವರಿ 15 ರಿಂದ ಮಾರ್ಚ್ 04 ರವರೆಗೆ ನಡೆಯಲಿರುವ ಈ ಕುಂಬಮೇಳಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಹರಿದುಬರುತ್ತಿದ್ದಾರೆ.
ಪ್ರಯಾಗರಾಜ್ ನಲ್ಲಿ ಮದುವೆಗೆ ನಿರ್ಬಂಧ, ಆಕ್ರೋಶ ಹುಟ್ಟಿಸಿದ ಯೋಗಿ ನಡೆ
"ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು"
ಎನ್ನುತ್ತ ಸಪ್ತ ತರಂಗಿಣಿಯರನ್ನು ನೆನಪಿಸಿಕೊಂಡು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಎಲ್ಲಾ ಪಾಪಗಳೂ ನಾಶವಾಗುತ್ತವೆ ಎಂಬ ನಂಬಿಕೆ ಜನರದ್ದು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಕುಂಭಮೇಳ ಇದಾಗಿರುವುದರಿಂದ ಯೋಗಿಯವರೇ ವಿಶೇಷ ಆಸ್ಥೆ ತೋರಿಸುತ್ತಿದ್ದಾರೆ. ಈ ಬಾರಿಯ ಕುಂಭಮೇಳ ಇದುವರೆಗಿನ ಅತ್ಯಂತ ಅದ್ಧೂರಿ, ಯಶಸ್ವೀ ಕುಂಭಮೇಳವಾಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.
ಕುಂಭಮೇಳದ ಹಿನ್ನೆಲೆಯೇನು?
ಕುಂಭ ಮೇಳ ಸುಮಾರು ಆರನೇ ಶತಮಾನದಿಂದ ಆರಂಭವಾಗಿರಬಹುದು ಎಂದು ಕೆಲವು ಉಲ್ಲೇಖಗಳು ಹೇಳುತ್ತವೆ. ಸಮುದ್ರಮಥನದ ಸಮಯದಲ್ಲಿ ದೇವತೆಗಳು ಅಮೃತವನ್ನು ಕುಂಭ(ಮಡಿಕೆ)ದಲ್ಲಿ ಹೊತ್ತೊಯ್ಯುವ ಸಂದರ್ಭದಲ್ಲಿ ಅದರ ನಾಲ್ಕು ಹನಿಗಳು ಗಂಗಾನದಿ, ಸಂಗಮ(ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಸ್ಥಳ), ಮಧ್ಯಪ್ರದೇಶದ ಉಜ್ಜೈನಿಯ ಕ್ಷಿಪ್ರ ನದಿ ಮತ್ತು ನಾಸಿಕದಲ್ಲಿರುವ ಗೋದಾವರಿ ನದಿಯಲ್ಲಿ ಬಿದ್ದವು. ಆ ನಂತರ ಈ ನಾಲ್ಕು ನದಿಗಳು ತೀರ್ಥ ಕ್ಷೇತ್ರಗಳಾದವು. ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಎಲ್ಲಾ ಪಾಪಗಳೂ ತೊಳೆದು ಹೋಗುತ್ತವೆ ಎಂಬುದು ಪ್ರತೀತಿ. ಆದ್ದರಿಂದಲೇ ದೇಶ-ವಿದೇಶಗಳಿಂದ ಬರುವ ಜನರು, ಸಾಧು-ಸಂತರು ಈ ಪುಣ್ಯ ಸ್ಥಳದಲ್ಲಿ ಸ್ನಾನ ಮಾಡುತ್ತಾರೆ.
ಕುಂಭಮೇಳ ನಡೆಯುವುದು ಯಾವಾಗ?
ಕುಂಭಮೇಳವು ಪ್ರಯಾಗ, ಹರಿದ್ವಾರ, ನಾಸಿಕ ಮತ್ತು ಉಜ್ಜೈನಿಗಳಲ್ಲಿ ನಡೆಯುತ್ತದೆ. ಬೇರೆ ಬೇರೆ ಸಮಯದಲ್ಲಿ ಈ ಸ್ಥಳಗಳಲ್ಲಿ ನಡೆಯುವ ಕುಂಭಮೇಳಗಳಲ್ಲಿ 12 ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ನಡೆಯುವ ಪೂರ್ಣ ಕುಂಭಮೇಳ ಪ್ರಸಿದ್ಧಿ ಪಡೆದಿದೆ. ಆರು ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭಮೇಳ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ಒಂದೇ ವರ್ಷ ಅಥವಾ ಒಂದು ವರ್ಷದ ಅಂತರದಲ್ಲಿ ನಡೆಯುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಾಸಿಕ ಮತ್ತು ಉಜ್ಜೈಯನಿಗಳಲ್ಲಿ ಕ್ರಮವಾಗಿ ಕುಂಭಮೇಳಗಳು ನಡೆಯುತ್ತವೆ. ಗುರುಗ್ರಹವು ಕುಂಭ ರಾಶಿ ಪ್ರವೇಶಿಸಿದಾಗ ಅಥವಾ ರವಿ ಗ್ರಹವು ಮೇಷ ರಾಶಿ ಪ್ರವೇಶಿಸಿದಾಗ ಕುಂಭ ಮೇಳ ಆರಂಭವಾಗುತ್ತದೆ.ಗುರುಗ್ರಹವು ಹನ್ನೆರಡು ರಾಶಿಯನ್ನೂ ಪೂರ್ತಿ ಪರಿಕ್ರಮಣ ಮಾಡಿದ ನಂತರ ಅಂದರೆ ಹನ್ನೆರಡು ವರ್ಷದ ನಂತರ ಪೂರ್ಣಕುಂಭ ಮೇಳ ನಡೆಯುವುದು.
ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ
ಎಲ್ಲೆಲ್ಲಿ ನಡೆಯುತ್ತದೆ?
ಪ್ರಯಾಗದಲ್ಲಿ ಗಂಗಾ, ಯಮುನಾ ಮತ್ತು ಗುಪ್ತಗಾಮಿಸಿ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮ ಸ್ಥಳದಲ್ಲಿ ಪೂರ್ಣಕುಂಭಮೇಳ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಆರು ವರ್ಷಕ್ಕೊಮ್ಮೆ ಅರ್ಧನದಿಯ ತಟದಲ್ಲಿ, ಹರಿದ್ವಾರದಲ್ಲಿ ಗಂಗಾ ನದಿಯ ತಟದಲ್ಲಿ, ನಾಸಿಕದಲ್ಲಿ ಗೋದಾವರಿ ನದಿ ತಟದಲ್ಲಿ, ಉಜ್ಜೈನಿಯಲ್ಲಿ ಕ್ಷಿಪ್ರಾ ನದಿ ತಟದಲ್ಲಿ ಕುಂಭಮೇಳಗಳು ನಡೆಯುತ್ತವೆ.
ವಿಶ್ವದಲ್ಲೇ ದೊಡ್ಡ ಮೇಳ!
ಪ್ರಯಾಗದಲ್ಲಿ ನಡೆಯುವ ಮಹಾಕುಂಭ ಮೇಳ ವಿಶ್ವದಲ್ಲೇ ದೊಡ್ಡ ಮೇಳ ಎಂಬ ಖ್ಯಾತಿ ಗಳಿಸಿದೆ. 2019 ರ ಅರ್ಧ ಕುಂಭಮೇಳದ ತಯಾರಿಗಾಗಿಯೇ ಸುಮಾರು 42 ದಶಲಕ್ಷ ಕೋಟಿ ರೂ.ವೆಚ್ಚವಾಗಿದೆ. 2500 ಹೆಕ್ಟೇರ್ ಪ್ರದೇಶದಲ್ಲಿ ಮೇಳಕ್ಕೆ ಸಿದ್ಧತೆ ನಡೆದಿದೆ. 122000 ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ಭಾರತೀಯ ರೈಲ್ವೇ ಇಲಾಖೆಯು ಕುಂಭಮೇಳಕ್ಕೆಂದೇ 800 ರೈಲುಗಳ ವ್ಯವಸ್ಥೆ ಮಾಡಿದೆ. ಎಲ್ಲೆಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ರಕ್ಷಣಾ ದಳ, ಹಡಗುಗಳ ವ್ಯವಸ್ಥೆ, ಮೇಳಕ್ಕೆ ಬರುವವರಿಗೆ ತಂಗಲು ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ.
ಕುಂಭಮೇಳ: ಉಜ್ಜಯಿನಿ ಕಾಲ್ತುಳಿತದ ದಾರುಣ ಚಿತ್ರಗಳು
ಕುಂಭಮೇಳವೆಂಬ ಮಹಾಜಾತ್ರೆ
ಕುಂಭಮೇಳವನ್ನು ಮಹಾಜಾತ್ರೆಯೆಂದೇ ಕರೆಯಬಹುದಾಗಿದೆ. 1903 ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳದಲ್ಲಿ 4,00,000 ಭಕ್ತರು ಭಾಗವಹಿಸಿದ್ದರು. 1998 ಏಪ್ರಿಲ್ 14 ರಂದು ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 10 ದಶಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. 2001 ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳ 55 ದಿನ ನಡೆದಿತ್ತು. ಇದರಲ್ಲಿ ಒಟ್ಟು 70 ದಶಲಕ್ಷ ಜನ ಭಾಗಿಯಾಗಿದ್ದರು! 2013 ರಲ್ಲಿ ಪ್ರಯಾಗದಲ್ಲಿ ನಡೆದ ಪೂರ್ಣ ಕುಂಭ ಮೇಳದಲ್ಲಿ 120 ದಶಲಕ್ಷ ಜನ ಭಾಗವಹಿಸಿದ್ದರು.