'ಪೊಲೀಸರ ಎದುರೇ ಒತ್ತೆಹಣ ಹೊತ್ತೊಯ್ದರೂ ಏನೂ ಮಾಡಲಾಗಲಿಲ್ಲ'
ಕಾನ್ಪುರ, ಜುಲೈ 15: ವ್ಯಕ್ತಿಯನ್ನು ಅಪಹರಿಸಿ ಹಣಕ್ಕಾಗಿ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಪೊಲೀಸರ ಕಣ್ಣೆದುರೇ ಹಣವನ್ನು ಹೊತ್ತೊಯ್ದರೂ ಏನೂ ಮಾಡಲಾಗಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದುಷ್ಕರ್ಮಿಗಳು ತಮ್ಮ ಕಣ್ಣೆದುರೇ ಒತ್ತೆಹಣವನ್ನು ಕೊಂಡೊಯ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಹಣ ಕೊಂಡೊಯ್ದರೂ ಅಪಹರಣಕಾರರು ಒತ್ತೆಯಾಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಆತನನ್ನು ಪತ್ತೆ ಮಾಡಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಪಹರಣಕ್ಕೆ ಒಳಗಾಗಿರುವ ವ್ಯಕ್ತಿಯ ಮನೆಯವರು ದೂರಿದ್ದಾರೆ.

ಅಪಹೃತನ ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಒತ್ತೆಯಾಳಿನ ಪತ್ತೆಗೆ ಪ್ರಯತ್ನ ಮಾಡುತ್ತಿದ್ದರು. ಒತ್ತೆಹಣ ಕೊಂಡೊಯ್ಯಲು ಬಂದಾಗ ದುಷ್ಕರ್ಮಿಗಳನ್ನು ಹಿಡಿಯಲು ಯೋಜಿಸಿದ್ದರು. ಆದರೆ ಅವರ ಈ ಯೋಜನೆ ಕೈಕೊಟ್ಟಿತು. ಅವರ ಕಣ್ಣೆದುರೇ ದುಷ್ಕರ್ಮಿಗಳು ಒತ್ತೆಹಣವನ್ನು ಕೊಂಡೊಯ್ದಿದ್ದಾರೆ.
ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಸ್. ಯಾದವ್ ಎಂಬಾತನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಆತನ ಸುರಕ್ಷಿತ ಬಿಡುಗಡೆಗೆ 30 ಲಕ್ಷ ರೂಪಾಯಿ ಒತ್ತೆಹಣಕ್ಕೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಹಣವನ್ನು ರೈಲ್ವೆ ಹಳಿಯ ಮೇಲೆ ಎಸೆಯಬೇಕು ಎಂದು ಸೂಚಿಸಿದ್ದರು.
ದುಷ್ಕರ್ಮಿಗಳನ್ನು ಹಿಡಿಯಲು ಅವರಿಗೆ ಸಾಧ್ಯವಾಗಿಲ್ಲ. ಒತ್ತೆಯಾಳು ಕೂಡ ಬಿಡುಗಡೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಅಪಹೃತನ ಕುಟುಂಬದವರು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ದುಷ್ಕರ್ಮಿಗಳು ಹಣ ಕೊಂಡೊಯ್ಯುವಾಗ ಪೊಲೀಸರು ಬೇಕೆಂದೇ ಅಸಹಾಯಕರಾಗಿ ನಿಂತಿದ್ದರು ಎಂದು ಆರೋಪಿಸಿದ್ದಾರೆ.
ಆದರೆ ಅಪಹೃತನ ಕುಟುಂಬದವರ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಅದರಲ್ಲಿ ಸತ್ಯ ಇಲ್ಲ. ನಾವು ಕೂಡ ಅಪಹೃತನ ಪತ್ತೆಗಾಗಿ ಶ್ರಮಿಸುತ್ತಿದ್ದೇವೆ. ಆದರೂ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ಹೇಳಿದ್ದಕ್ಕೆ ಕಷ್ಟಪಟ್ಟು 30 ಲಕ್ಷ ರೂ. ಹಣ ಹೊಂದಿಸಿ, ರೈಲು ಹಳಿ ಮೇಲೆ ಹಾಕಿದ್ದೆವು. ಅದನ್ನು ಕೊಂಡೊಯ್ಯಲು ಬಂದರೂ ಪೊಲೀಸರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಲಿಲ್ಲ ಎಂದು ದೂರಿದ್ದಾರೆ.












Click it and Unblock the Notifications