ಕನ್ಹಯ್ಯಾ ಯಾದವ್ ಪುತ್ರಿ ಶವ ಪತ್ತೆ: ಯುಪಿ SHO ಅಮಾನತು
ವಾರಣಾಸಿ, ಮೇ 02: ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಭಾನುವಾರ (ಮೇ 01) ದರೋಡೆಕೋರ ಕನ್ಹಯ್ಯಾ ಯಾದವ್ ಅವರ ಮಗಳು ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸ್ ಅಧಿಕಾರಿಯೊಬ್ಬರು ದರೋಡೆಕೋರ ಕನ್ಹಯ್ಯಾ ಯಾದವ್ ಮನೆಗೆ ನುಗ್ಗಿ ಅವರ ಪುತ್ರಿ ನಿಶಾಳಿಗೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ನಿಶಾ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಜನ ಪೊಲೀಸ್ ವರ್ತನೆಗೆ ವಿರೋಧವನ್ನು ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.
ಈ ಬಗ್ಗೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜೀವ್ ಸಿಂಗ್ ಸುದ್ದಿಗಾರರ ಮುಂದೆ ಮಾತನಾಡಿ, 'ದರೋಡೆಕೋರ ಕನ್ಹಯ್ಯಾ ಯಾದವ್ ಅವರ ಪುತ್ರಿ ನಿಶಾಳನ್ನು ಸಯ್ಯದರಾಜ ಪೊಲೀಸ್ ಠಾಣೆಯ ಎಸ್ಎಚ್ಒ ಥಳಿಸಿದ ನಂತರ ಅವಳು ಸಾವನ್ನಪ್ಪಿದ್ದಾಳೆ' ಎಂದು ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ ದರೋಡೆಕೋರನ ಕಿರಿಯ ಮಗಳು ಕೂಡ ಥಳಿಸಲ್ಪಟ್ಟಿದ್ದಾಳೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾಳೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ನಿಶಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಡಿಎಂ ತಿಳಿಸಿದ್ದಾರೆ.
ಯುಪಿ: ಕಾಲುವೆ ನಿರ್ಮಾಣ ವಿರೋಧಿಸಿ ನೆಲದ ಮೇಲೆ ಮಲಗಿದ ನ್ಯಾಯಾಧೀಶ
SHO ಅಮಾನತು
ಮೃತರ ಕುಟುಂಬದಿಂದ ಬಂದ ದೂರಿನ ಮೇರೆಗೆ ಎಸ್ಎಚ್ಒ ಅವರನ್ನು ಅಮಾನತುಗೊಳಿಸಲಾಗಿದ್ದು, ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರು ಕನ್ಹಯ್ಯಾ ಯಾದವ್ ನಿವಾಸದ ಬಳಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕನ್ಹಯ್ಯಾ ಯಾದವ್ ಪುತ್ರಿಗೆ ಥಳಿಸಿದ್ದಕ್ಕೆ ವಿರೋಧ
ಘಟನೆ ತಿಳಿದ ಬಳಿಕ ಸಮಾಜವಾದಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೂಡ ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು. ಎಸ್ಪಿ ನಾಯಕ ಪ್ರಭು ನಾರಾಯಣ ಸಿಂಗ್ ಯಾದವ್, "ಪೊಲೀಸರು ಕನ್ಹಯ್ಯಾ ಯಾದವ್ ಮನೆಗೆ ಹೋಗಿ ಅಮಾನವೀಯತೆ ಮೆರೆದಿದ್ದಾರೆ. ಕನ್ಹಯ್ಯಾ ಮನೆಯಲ್ಲಿಲ್ಲದ ವೇಳೆ ಅವರ ಹೆಣ್ಣುಮಕ್ಕಳನ್ನು ಥಳಿಸಿದ್ದಾರೆ. ತೀವ್ರ ಗಾಯಗೊಂಡ ಕಿರಿಯ ಮಗಳು ಆಸ್ಪತ್ರೆಗೆ ದಾಖಲಾಗಿದ್ದರೆ ಹಿರಿಯ ಮಗಳು ನಿಶಾ ಸಾವನ್ನಪ್ಪಿದ್ದಾಳೆ, ಪೊಲೀಸರ ಈ ವರ್ತನೆಯನ್ನು ಖಂಡಿಸುತ್ತೇನೆ" ಎಂದಿದ್ದಾರೆ.
ಚಂದೌಲಿ ಎಸ್ಪಿ ಹೇಳಿದ್ದೇನು?
ಚಂದೌಲಿ ಎಸ್ಪಿ ಅಂಕುರ್ ಅಗರ್ವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯೊಬ್ಬರು ಸಾವನ್ನಪ್ಪಿದ ವಿಡಿಯೊ ವೈರಲ್ ಆಗಿದೆ. ಶಂಕಿತ ಪೊಲೀಸರು ಕನ್ಹಯ್ಯಾ ಯಾದವ್ ಮನೆಗೆ ತಲುಪಿದ್ದರು. ಅವರಿಗೆ ಕನ್ಹಯ್ಯಾ ಸಿಗಲಿಲ್ಲ. ಅಲ್ಲಿ ಏನಾಗಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಸ್ಥಳದಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈ ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರು ಕನ್ಹಯ್ಯಾ ಯಾದವ್ ನಿವಾಸದ ಬಳಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಅವರು ಹೇಳಿದ್ದಾರೆ.
ಕನ್ಹಯ್ಯಾ ಕುಟುಂಬದ ಮೇಲೆ ಹಲವಾರು ಕೇಸ್
ಸಯ್ಯದರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಮನರಾಜಪುರ ಗ್ರಾಮದ ನಿವಾಸಿ ಕನ್ಹಯ್ಯಾ ಯಾದವ್ ಮರಳು ವ್ಯಾಪಾರಿ. ಕನ್ಹಯ್ಯಾ ಯಾದವ್ ಗಣಿ ಮಾಫಿಯಾ ಜತೆ ಶಾಮೀಲಾಗಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದರು ಎಂಬ ಚರ್ಚೆಯೂ ನಡೆಯುತ್ತಿದೆ. ಕನ್ಹಯ್ಯಾ ಯಾದವ್ಗೆ ಸುದೀರ್ಘ ಅಪರಾಧ ಇತಿಹಾಸವಿದೆ. ಕನ್ಹಯ್ಯಾ ಯಾದವ್ ಮಾತ್ರವಲ್ಲದೆ ಅವರ ಕುಟುಂಬದ ಎಲ್ಲ ಸದಸ್ಯರ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಕನ್ಹಯ್ಯ ಯಾದವ್, ಅವರ ಮಗ ವಿಜಯ್ ಯಾದವ್, ಎರಡನೇ ಮಗ ದೀಪ್ನಾರಾಯಣ್ ಯಾದವ್ ಮತ್ತು ಇಬ್ಬರು ಪುತ್ರಿಯರಾದ ಗುಂಜಾ ಮತ್ತು ನಿಶಾ ಯಾದವ್ ಅಲಿಯಾಸ್ ಗುಡಿಯಾ ಯಾದವ್ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕನ್ಹಯ್ಯ ಯಾದವ್ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಗೂಂಡಾ ಕಾಯ್ದೆಯ ಜೊತೆಗೆ ಹಲವು ಗಂಭೀರ ಸೆಕ್ಷನ್ಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2013 ರಿಂದ 2021 ರವರೆಗೆ, ಸಯ್ಯದರಾಜ ಪೊಲೀಸ್ ಠಾಣೆಯ ಮನರಾಜಪುರ ನಿವಾಸಿ ವಿಜಯ್ ಯಾದವ್ ವಿರುದ್ಧ ವಿದ್ಯುತ್ ಕಳ್ಳತನ ಮತ್ತು ಗೂಂಡಾ ಕಾಯ್ದೆ ಸೇರಿದಂತೆ ಅರ್ಧ ಡಜನ್ ಪ್ರಕರಣಗಳು ದಾಖಲಾಗಿವೆ.
2013 ರಲ್ಲಿ ಈತನ ವಿರುದ್ಧ ಸೈಯದ್ ರಾಜಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2013 ಕಲಂ 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2014 ರಲ್ಲಿ, ಅಪರಾಧ ಸಂಖ್ಯೆ 63/2014 ರ ಪ್ರಕರಣದಲ್ಲಿ ಕಲಂ 10 ಜಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 2020ರಲ್ಲಿ ಕನ್ಹಯ್ಯಾ ಯಾದವ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಜನವರಿ 2021 ರಲ್ಲಿ, ಅದರ ವಿರುದ್ಧ ಯುಪಿ ಗೂಂಡಾ ಕಾಯ್ದೆಯ ಕ್ರಮವನ್ನೂ ತೆಗೆದುಕೊಳ್ಳಲಾಯಿತು.