15 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮೆ ಆಗಿದೆಯಾ?: ಪ್ರಿಯಾಂಕಾ ಪ್ರಶ್ನೆ
ಲಕ್ನೋ, ಮಾರ್ಚ್ 29: "ನಿಮ್ಮೆಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಆಗಿದೆಯಾ?" ಹಾಗಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಜನರನ್ನು ಪ್ರಶ್ನಿಸಿದರು. ಈ ಮೂಲಕ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಮಾತನ್ನು ಮುರಿದಿದ್ದಾರೆ ಎಂದು ಮತದಾರರಿಗೆ ನೆನಪಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇಂದಿನ ಮೋದಿ ಸರ್ಕಾರ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ಹರಿಹಾಯ್ದರು.
"ವಾಸ್ತವವನ್ನು ಅರಿಯಬೇಕಾದರೆ ಹಳ್ಳಿಗಳನ್ನು ಸಸುತ್ತಬೇಕು, ಹಳ್ಳಿಗಳಲ್ಲಿ ಸತ್ಯ ಅಡಗಿರುತ್ತವೆ. ಆದರೆ ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ವಾರಣಾಸಿ ಕ್ಷೇತ್ರದ ಒಂದೇ ಹಳ್ಳಿಗೂ ಭೇಟಿ ನೀಡಿಲ್ಲ, ಒಂದೇ ಒಂದು ಬಡ ಕುಟುಂಬದೊಂದಿಗೂ ಮಾತುಕತೆ ನಡೆಸಿಲ್ಲ" ಎಂದು ಪ್ರಿಯಾಂಕಾ ಗಾಂಧಿ ದೂರಿದರು.

"2014 ರ ಚುನಾವಣೆಗೂ ಮುನ್ನ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿ ಬಡವನ ಖಾತೆಗಗೂ 15 ಲಕ್ಷ ರೂಪಾಯಿಯನ್ನು ಜಮಾ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ಅವರು ರೈತರ ಸಾಲಮನ್ನಾ ಕೂಡ ಮಾಡಲಿಲ್ಲ. ಉದ್ಯಮಿಗಳಿಗೆ ಕೊಡುವುದಕ್ಕೆ ಮಾತ್ರ ಮೋದಿ ಬಳಿ ಹಣವಿದೆ, ಬಡವರಿಗೆ ಕೊಡುವುದಕ್ಕೆ ಇಲ್ಲ" ಎಂದು ಅವರು ಲೇವಡಿ ಮಾಡಿದರು.
ನಿನ್ನೆ ರಾಯ್ಬರೇಲಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಕಾರ್ಯಕರ್ತರೊಬ್ಬರು ಮನವಿ ಮಾಡಿದ್ದಕ್ಕೆ, ರಾಯ್ಬರೇಲಿ ಯಾಕೆ? ವಾರಣಾಸಿಯಲ್ಲಿ ನಿಂತರಾಗದೆ ಎಂದು ಪ್ರಶ್ನಿಸುವ ಮೂಲಕ ಪ್ರಿಯಾಂಕಾ ಗಾಂಧಿ ಅಚ್ಚರಿ ಮೂಡಿಸಿದ್ದರು.












Click it and Unblock the Notifications