ಇಂದಿರಾ ಗಾಂಧಿ ಪ್ರತಿಮೆಗೆ ಬುರ್ಖಾ ತೊಡಿಸಿದ ಕಿಡಿಗೇಡಿಗಳು: ಭಾರಿ ಆಕ್ರೋಶ
ಲಕ್ನೋ, ಜೂನ್ 3: ಉತ್ತರ ಪ್ರದೇಶದ ಗೋಲಾ ಪ್ರದೇಶದಲ್ಲಿ ಅಪರಿಚಿತ ಕಿಡಿಗೇಡಿಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರತಿಮೆಗೆ ಸೋಮವಾರ ಬುರ್ಖಾ ತೊಡಿಸಿದ ಘಟನೆ ನಡೆದಿದೆ. ಇದು ಪ್ರತಿಭಟನೆಗೆ ಕಾರಣವಾಗಿದೆ.
ಈ ಘಟನೆ ಕಾಂಗ್ರೆಸ್ ಮುಖಂಡರಲ್ಲಿ ಭಾರಿ ಆಕ್ರೋಶ ಮೂಡಿಸಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮುಖಂಡರು ರಸ್ತೆಗಿಳಿದು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯ ತನಿಖೆಗೆ ಆಗ್ರಹಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಪ್ರತಿಮೆಗೆ ಹೊದಿಸಿದ್ದ ಬುರ್ಖಾವನ್ನು ತೆರವುಗೊಳಿಸಿದರು. ತಪ್ಪಿಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸೋಮವಾರ ರಾತ್ರಿ ವೇಳೆಗೆ ಪ್ರತಿಮೆಗೆ ಬುರ್ಖಾ ಹಾಕಿರಬಹುದು ಎನ್ನಲಾಗಿದೆ. ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಕೆಲವರಿಗೆ ಇಂದಿರಾ ಗಾಂಧಿ ಅವರ ಪ್ರತಿಮೆಗೆ ಬುರ್ಖಾ ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಅವರು ತಮ್ಮ ಪರಿಚಿತರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದರು.
ಶಾಂತಿ ಕದಡುವ ಕಾರಣಕ್ಕಾಗಿ ಕೆಲವು ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ. ಅವರನ್ನು ಗುರುತಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.












Click it and Unblock the Notifications