ಸಮೋಸಾ ಆರ್ಡರ್ ಮಾಡಿದ್ದಕ್ಕೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ!
ಲಕ್ನೋ, ಮಾರ್ಚ್.31: ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅನ್ನುತ್ತಾರಲ್ವಾ. ಅದೇ ರೀತಿ ನಿರ್ಗತಿಕರು, ನಿರಾಶ್ರಿತರು ಹೊತ್ತಿನ ಊಟ, ನೆತ್ತಿಯ ಮೇಲಿನ ಸೂರಿಗಾಗಿ ಹಪಹಪಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಭಾರತ ಲಾಕ್ ಡೌನ್ ನಿಂದ ಸಾವಿರಾರು ಮಂದಿ ಬೀದಿಗೆ ಬಂದು ನಿಂತಿದ್ದಾರೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಹೀಗೆ ನಿರಾಶ್ರಿತರ ನೆರವಿಗಾಗಿ ಸರ್ಕಾರವು ಸಹಾಯವಾಣಿಯನ್ನು ತೆರೆದಿದೆ. ಹಸಿವಿನಿಂದ ನರಳುತ್ತಿರುವವರಿಗೆ ಸಹಾಯವಾಗಲೆಂದು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇದನ್ನೇ ಕೆಲವು ಕಿಡಿಗೇಡಿಗಳು ಕೀಟಲೆ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ರಾಮಪುರ್ ನಲ್ಲಿ ಹೀಗೆ ಸಹಾಯವಾಣಿಗೆ ಕರೆ ಮಾಡಿ ತಮಾಷೆ ಮಾಡಿದ ಯುವಕನಿಗೆ ಅಧಿಕಾರಿಗಳು ಕಠಿಣ ಶಿಕ್ಷೆಗೆ ಗುರಿಪಡಿಸಿದ್ದಾರೆ. ಆ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಸಮೋಸಾ ಕೇಳಿದವನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ:
ಸಾರ್ವಜನಿಕ ಸೇವೆಗಾಗಿ ತೆರೆದ ಸಹಾಯವಾಣಿಗೆ ಕರೆ ಮಾಡಿ ಸಮೋಸಾ ಬೇಕು ಎಂದು ಬೇಡಿಕೆಯಿಟ್ಟ ವ್ಯಕ್ತಿಯನ್ನು ಗುರುತಿಸಿ ನಗರದಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವ ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಡಿಎಂ ಆಂಜನೇಯ ಸಿಂಗ್ ತಿಳಿಸಿದ್ದಾರೆ. ಅಸಹಾಯ ಸ್ಥಿತಿಯಲ್ಲಿ ಇರುವವರಿಗೆ ನೆರವು ನೀಡುವುದಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಇದನ್ನು ದುರುಪಯೋಗಪಡಿಸಿ ಕೊಂಡು ಅಪಹಾಸ್ಯ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆ ಆಗಬೇಕು. ಇಂಥ ಜನರಿಗೆ ತಮ್ಮ ಕೆಲಸದ ಬಗ್ಗೆ ಅಸಹ್ಯ ಹುಟ್ಟಿಸುವಂತಾ ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.












Click it and Unblock the Notifications