ಹತ್ರಾಸ್ ಅತ್ಯಾಚಾರ ಪ್ರಕರಣ: SP ಸೇರಿದಂತೆ ನಾಲ್ವರು ಪೊಲೀಸರ ಅಮಾನತು
ಲಕ್ನೋ, ಅಕ್ಟೋಬರ್ 03: ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ರಾಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಾಂತ್ ವೀರ್ ಸೇರಿದಂತೆ ನಾಲ್ವರು ಪೊಲೀಸರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ.
ಹತ್ರಾಸ್ ಜಿಲ್ಲೆಯ ಹಳ್ಳಿಯಲ್ಲಿ 19 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ತನಿಖೆ ನಡೆಸುತ್ತಿರುವ ಹತ್ರಾಸ್ ಎಸ್ಪಿ ವಿಕ್ರಾಂತ್ ವೀರ್, ಸಿಒ ರಾಮ್ ಶಾಬ್, ಇನ್ಸ್ಪೆಕ್ಟರ್ ದಿನೇಶ್ ಮೀನಾ, ಎಸ್ಐ ಜಗವೀರ್ ಸಿಂಗ್ ಮತ್ತು ಮುಖ್ಯ ಪೇದೆ ಅವರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ಎಸ್ಪಿ ಅವರ ಆ ಜವಾಬ್ದಾರಿಯನ್ನು ಶಾಮ್ಲಿ ವಿನೀತ್ ಜೈಸ್ವಾಲ್ ಶೀಘ್ರದಲ್ಲೇ ವಹಿಸಿಕೊಳ್ಳಲಿದ್ದಾರೆ.
ಇನ್ನು ನಾಲ್ವರು ಪೊಲೀಸರ ಅಮಾನತು ಬಳಿಕ ಪ್ರತಿಕ್ರಿಯಿಸಿರುವ ಉಮಾಭಾರತಿ ಹತ್ರಾಸ್ ಘಟನೆಯಲ್ಲಿ ಉತ್ತರ ಪ್ರದೇಶ ಪೊಲೀಸರ "ಅನುಮಾನಾಸ್ಪದ" ಕ್ರಮವು ಬಿಜೆಪಿ ಮತ್ತು ರಾಜ್ಯ ಸರ್ಕಾರದ ಚಿತ್ರಣವನ್ನು "ಕೆರಳಿಸಿದೆ" ಎಂದು ಹೇಳಿದ್ದಾರೆ. ಹೀಗಾಗಿ ಮಾಧ್ಯಮಗಳು ಮತ್ತು ರಾಜಕಾರಣಿಗಳನ್ನು ದಲಿತ ಸಂತ್ರಸ್ತರ ಭೇಟಿಗೆ ಅವಕಾಶ ನೀಡುವಂತೆ ಹಿರಿಯ ಬಿಜೆಪಿ ಮುಖಂಡ ಉಮಾ ಭಾರತಿ ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿನಂತಿಸಿದ್ದಾರೆ.
ಹತ್ರಾಸ್ ಅತ್ಯಾಚಾರಕ್ಕೆ ವಿರೋಧಿಸಿ ದೆಹಲಿ ಸೇರಿದಂತೆ ದೇಶಾದ್ಯಂತ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.