ಹತ್ರಾಸ್: ಯುವತಿಗೆ ಆರೋಪಿಯ ಜತೆ ಸಂಬಂಧವಿತ್ತು ಎಂದ ಬಿಜೆಪಿ ಮುಖಂಡ
ಲುಕ್ನೋ, ಅಕ್ಟೋಬರ್ 07: ಹತ್ರಾಸ್ ಅತ್ಯಾಚಾರ ಸಂತ್ರಸ್ತೆಗೆ ಆರೋಪಿ ಜತೆಯಲ್ಲಿ ಸಂಬಂಧವಿತ್ತು ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಹೊಸ ವಿವಾದ ಸೃಷ್ಟಿಸಿದ್ದಾರೆ.
ಬಿಜೆಪಿ ನಾಯಕ ರಣ್ಜೀತ್ ಬಹದ್ದೂರ್ ಶ್ರೀವಾಸ್ತವ ಹೇಳಿಕೆ ನೀಡಿದ್ದು, ಸಂತ್ರಸ್ತ ಯುವತಿ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದಾರೆ.
ಬಾರಾಬಂಕಿಯ ನಾಯಕ ರಣ್ ಜೀತ್ ಬಹದ್ದೂರ್ ಶ್ರೀವಾಸ್ತವ ಅವರ ವಿರುದ್ಧ 44 ಕ್ರಿಮಿನಲ್ ಮೊಕದ್ದಮೆಗಳಿದ್ದು, ಇವರು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಕುರಿತು ಮಾತನಾಡಿದ್ದಾರೆ.

ಸೆಪ್ಟೆಂಬರ್ 14 ರಂದು ತನ್ನ ತಾಯಿಯ ಜೊತೆ ಹೊಲಕ್ಕೆ ಹುಲ್ಲು ತರಲು ತೆರಳಿದ್ದಾಗ ನಾಲ್ವರು ಆರೋಪಿಗಳು ಯುವತಿಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಸಂತ್ರಸ್ತೆಯ ಮುಖವನ್ನು ನೋಡಲು ಪೋಷಕರಿಗೆ ಅವಕಾಶ ಮಾಡಿಕೊಡದೆ, ಮಧ್ಯರಾತ್ರಿ 2.30ರವೇಳೆಗೆ ಪೊಲೀಸರು ಅಂತ್ಯಸಂಸ್ಕಾರ ಮಾಡಿದ್ದರು. ಇದರಿಂದ ದೇಶಾದ್ಯಂತ ಪ್ರತಿಭಟನೆ ಆರಂಭವಾಗಿದೆ.
ಯುವತಿಯ ಮೇಲೆ ದೌರ್ಜನ್ಯ ಎಸಗಿದ ಮೇಲ್ವರ್ಗದ ಯುವಕರು ಮುಗ್ಧರು, ಇದರಲ್ಲಿ ಯುವತಿಯೇ ದಾರಿತಪ್ಪಿದ್ದಳು ಎಂದು ಹೇಳಿದ್ದಾರೆ. ವಿವಾದಾತ್ಮಕವಾಗಿಯೇ ಸುದ್ದಿಯಲ್ಲಿರುವ ರಣ್ ಜೀತ್ ಬಹದ್ದೂರ್ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಯುವಕರು ಮುಗ್ಧರು ಎಂದು ಸ್ಪಷ್ಟವಾಗಿ ಹೇಳಬಲ್ಲೆ, ಸಿಬಿಐ ಚಾರ್ಜ್ ಶೀಟ್ ದಾಖಲಿಸುವವರೆಗೆ ಅವರನ್ನು ಬಿಡುಗಡೆ ಮಾಡಬೇಕು ಅಲ್ಲಿಯವರೆಗೆ ಅವರನ್ನು ಜೈಲಿನಲ್ಲಿರಿಸಿದರೆ ಅವರ ಕಳೆದುಹೋದ ಯೌವನವನ್ನು ಯಾರು ಹಿಂತಿರುಗಿಸುತ್ತಾರೆ? ಸರ್ಕಾರ ಪರಿಹಾರ ನೀಡಲಿದೆಯೇ? ಎಂದು ರಣ್ ಜೀತ್ ಬಹದ್ದೂರ್ ಪ್ರಶ್ನಿಸಿದ್ದಾರೆ.
ಯುವತಿಗೆ ಆರೋಪಿಯೊಂದಿಗೇ ಸಂಬಂಧವಿತ್ತು, ಅದಕ್ಕಾಗಿಯೇ ಆಕೆ ಕೃಷಿ ಜಮೀನಿಗೆ ಬರಲು ಆರೋಪಿಯನ್ನು ಬರಲು ಹೇಳಿದ್ದರು. ಇಂತಹ ಹೆಣ್ಣುಮಕ್ಕಳೇ ಕಬ್ಬಿನ ಗದ್ದೆ ಹಾಗೂ ಅರಣ್ಯಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.












Click it and Unblock the Notifications