ಎಲ್ಲಿದೆ ಜಾತಿ ಧರ್ಮ: ಕೊರೊನಾ ಕಾಲದಲ್ಲಿ ಮುಸ್ಲಿಂ ತಂಡದಿಂದ ಮೃತದೇಹಗಳ ಅಂತ್ಯಕ್ರಿಯೆ!
ಲಕ್ನೋ, ಏಪ್ರಿಲ್ 27: ದೇಶಾದ್ಯಂತ ಕೊರೊನಾವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೇ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂಥ ಸಂದಿಗ್ಧತೆ ನಡುವೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವಕ ತಂಡವು ಎಲ್ಲರ ಮನಸ್ಸು ಗೆಲ್ಲುವಂತಾ ಕೆಲಸ ಮಾಡುತ್ತಿದೆ.
ಪವಿತ್ರ ರಂಜಾನ್ ಮಾಸದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಿಗೆ ಮುಕ್ತಿ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಲಕ್ನೋದಲ್ಲಿ ಕೊವಿಡ್ ಸೋಂಕಿಗೆ ಬಲಿಯಾದವರ ಮೃತದೇಹವನ್ನು ಮುಸ್ಲಿಂ ಯುವಕ ತಂಡವು ಯಾವುದೇ ಜಾತಿ-ಧರ್ಮದ ತಾರತಮ್ಯವಿಲ್ಲದೇ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತಿದೆ.
ಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಮಹಿಳೆ
ಪಿಪಿಇ ಕಿಟ್ ಧರಿಸಿದ ಯುವಕರ ತಂಡ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಿದೆ. ಇಡೀ ಜಗತ್ತು ಕೊವಿಡ್-19 ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಮಾನವೀಯತೆಯು ಎಲ್ಲ ಜಾತಿ, ಧರ್ಮವನ್ನು ಮೆಟ್ಟಿ ನಿಂತಿದೆ.
ರಾಜ್ಯದಲ್ಲಿ 37 ಶವಗಳ ಅಂತ್ಯಕ್ರಿಯೆ
ಉತ್ತರ ಪ್ರದೇಶ ಲಕ್ನೋದ ಮಕ್ಬಾರ್ ಗೊಲ್ಗಂಜ್ ನಗರದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ಏಳು ಹಿಂದೂ ಹಾಗೂ 30 ಮುಸ್ಲಿಂ ಮೃತದೇಹಗಳ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಈ ಮೃತರು ಯಾವುದೇ ಸಂಬಂಧಿಕರನ್ನು ಹೊಂದಿರಲ್ಲ. ಹೀಗಾಗಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ 37 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ನಡೆಸಲಾಯಿತು ಎಂದು ತಮ್ಮ ಸಮಾಜಮುಖಿ ಕಾರ್ಯದ ಬಗ್ಗೆ 33 ವರ್ಷ ಇಮ್ದಾದ್ ಇಮಾನ್ ಮಾಹಿತಿ ನೀಡಿದ್ದಾರೆ.
ಒಂದು ವರ್ಷದ ಹಿಂದೆ ಅಂತ್ಯಕ್ರಿಯೆ ಸಮಿತಿ
ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕಾಗಿ ಇಮ್ದಾದ್ ಇಮಾಮ್ ಅವರು ಕಳೆದ ವರ್ಷ ಶವಸಂಸ್ಕಾರ ಸಮಿತಿ ರಚಿಸಿದ್ದರು. ಏಪ್ರಿಲ್ 21ರಂದು ಸೀತಾಪುರದ ಭರತ್ ನಗರದಲ್ಲಿ ವಾಸವಿದ್ದ ಒಂಟಿ ಮಹಿಳೆ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕರೆ ಬಂದಿತ್ತು. ಅದೇ ಕಟ್ಟಡದಲ್ಲಿದ್ದ ಮಹಿಳೆಯು ಮೂರು ದಿನ ಕಾಣಿಸುತ್ತಿಲ್ಲ, ಯಾವುದೇ ಧ್ವನಿಯೂ ಕೇಳುತ್ತಿಲ್ಲ ಎಂಬ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ್ದರು ಎಂದು ಇಮಾಮ್ ತಿಳಿಸಿದ್ದಾರೆ.
ಗೆಳಯನ ಅಂತ್ಯಕ್ರಿಯೆಗೆ ತೆರಳಿದವನ ಅಂತ್ಯಸಂಸ್ಕಾರ ಆಗಿದ್ದು ಹೇಗೆ?
ಹಿಂದೂ ಗೆಳೆಯನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ 400 ಕಿಲೋ ಮೀಟರ್ ದೂರದಿಂದ ಹೇಮ್ ಸಿಂಗ್ ಎಂಬಾತ ಪ್ರಯಾಗ್ ರಾಜ್ ಪ್ರದೇಶಕ್ಕೆ ಬಂದಿದ್ದರು. ಕೊರೊನಾವೈರಸ್ ಸೋಂಕಿನ ಹರಡುವಿಕೆ ಹಿನ್ನೆಲೆ ಆತ ವಾಪಸ್ ಹೋಗುವುದಕ್ಕೆ ಆಗಿರಲಿಲ್ಲ. ತದನಂತರದ ಹೇಮ್ ಸಿಂಗ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು. ಯಾರೂ ಇಲ್ಲದ ಊರಿನಲ್ಲಿ ಮೃತಪಟ್ಟ ಹೇಮ್ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ ಎಂದು ಇಮಾಮ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊವಿಡ್-19 ಅಂಕಿ-ಸಂಖ್ಯೆಗಳ ವಿವರ
ಉತ್ತರ ಪ್ರದೇಶದಲ್ಲಿ ಒಂದೇ ದಿನ 33,551 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 11,20,176ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 249 ಮಂದಿ ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 11,414ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 26,719 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 8,04,563 ಜನರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 3,04,199 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.