ಮತದಾರರ ಪಟ್ಟಿಯಿಂದ ನಕಲಿ ಹೆಸರು ತೆಗೆದು ಹಾಕಿ: ಚು.ಆ. ಕ್ಕೆ ಎಸ್ಪಿ ಮನವಿ
ಲಕ್ನೋ, ನವೆಂಬರ್ 26: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳು ಮುಖ್ಯಮಂತ್ರಿ ಗದ್ದುಗೆ ಪಡೆಯಲು ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ನಡುವೆ, "ಮತದಾರರ ಪಟ್ಟಿಯಲ್ಲಿ ಇರುವ ನಕಲಿ ಹೆಸರುಗಳನ್ನು ತೆಗೆದು ಹಾಕಿ," ಎಂದು ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಹತ್ತಿರವಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳು ಇದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಸಮಾಜವಾದಿ ಪಕ್ಷವು ಭಾರತೀಯ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಈ ಬಗ್ಗೆ ಸಮಾಜವಾದಿ ಪಕ್ಷವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ನವೆಂಬರ್ 1 ರಂದು ಪ್ರಕಟಿಸಲಾದ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದ ಅಕ್ರಮಗಳು ಬೆಳಕಿಗೆ ಬಂದಿವೆ," ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದೆ.
ಉತ್ತರ ಪ್ರದೇಶ: ಟೈಮ್ಸ್ ನೌ ಚುನಾವಣಾಪೂರ್ವ ಸಮೀಕ್ಷೆ ಏನು ಹೇಳುತ್ತದೆ?
ಉ. ಪ್ರದೇಶ ಚುನಾವಣೆ; ಮೈತ್ರಿ ಮಾಡಿಕೊಂಡ ಆರ್ಎಲ್ಡಿ, ಸಮಾಜವಾದಿ ಪಕ್ಷ
"ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ರ ಸೂಚನೆಯ ಮೇರೆಗೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಕ್ ನಕಲಿ ಮತದಾನವನ್ನು ತಡೆಗಟ್ಟಲು ಮತದಾರರ ಪಟ್ಟಿಯಿಂದ ನಕಲಿ ಹೆಸರುಗಳನ್ನು ತೆಗೆದುಹಾಕುವ ಕುರಿತು ನವದೆಹಲಿಯ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ," ಎಂದು ಸಮಾಜವಾದಿ ಪಕ್ಷವು ಮಾಹಿತಿ ನೀಡಿದೆ.
ಕಳವಳ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷ
ಹಾಗೆಯೇ ಮತದಾರರ ಪಟ್ಟಿ ಪರಿಷ್ಕರಣೆಯ ಅವಧಿಯನ್ನು ನವೆಂಬರ್ 30 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಬೇಕು. ಇದರಿಂದಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿ ಮತಗಟ್ಟೆಯಲ್ಲಿ ಇರುವ ನಕಲಿ ಮತದಾರರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಕೂಡಾ ಸಮಾಜವಾದಿ ಪಕ್ಷ ಆಗ್ರಹ ಮಾಡಿದೆ. "ಚುನಾವಣಾ ಆಯೋಗವು ನಕಲಿ ಮತದಾರರನ್ನು ತೆಗೆದುಹಾಕಿದ್ದರೂ ಸಹ, ಇನ್ನೂ ಕೂಡಾ ಅಧಿಕ ಮಂದಿ ನಕಲಿ ಮತದಾರರು ಇದ್ದಾರೆ. ಇದು ಹೆಚ್ಚು ಆತಂಕಕಾರಿ ವಿಚಾರ," ಎಂದು ಸಮಾಜವಾದಿ ಪಕ್ಷ ಕಳವಳ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದಲ್ಲಿ ಎಸ್ಪಿ ಕಾರ್ಯತಂತ್ರ ಹೇಗಿದೆ?
ಈಗಾಗಲೇ ಆರ್ಎಲ್ಡಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆ. ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಅಧ್ಯಕ್ಷ ಜಯಂತ್ ಸಿಂಗ್ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ಚುನಾವಣೆ ಪೂರ್ವ ಮೈತ್ರಿ ದೃಢಪಟ್ಟಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಕುರಿತು ಶೀಘ್ರವೇ ಅಂತಿಮ ಘೋಷಣೆ ಮಾಡಲಾಗುತ್ತದೆ. ಸೀಟು ಹಂಚಿಕೆ ಕುರಿತು ಅಖಿಲೇಶ್ ಯಾಧವ್ ಜೊತೆ ಮಾತುಕತೆ ನಡೆದಿದೆ ಎಂದು ಆರ್ಎಲ್ಡಿ ಹೇಳಿದೆ. ಈ ನಡುವೆ ಟೈಮ್ಸ್ ನೌ ಸಮೀಕ್ಷೆ ಚುನಾವಣಾ ಪೂರ್ವ ಸಮೀಕ್ಷೆಯು ಬಿಜೆಪಿ ಮತ್ತೆ ಗದ್ದುಗೆಗೆ ಏರಲಿದೆ ಎಂದು ಉಲ್ಲೇಖಿಸಿದೆ. ಈ ಭಾರಿ ಸಮಾಜವಾದಿ ಪಕ್ಷವು (ಎಸ್ಪಿ) 119-125 ವಿಧಾನ ಸಭೆ ಕ್ಷೇತ್ರದಲ್ಲಿ ಜಯ ಸಾಧಿಸಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
ಈ ಮಧ್ಯೆ ಸಮಾಜವಾದಿ ಪಕ್ಷವು ಎಲ್ಲಾ ರೀತಿಯಲ್ಲಿ ಚುನಾವಣಾ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇನ್ನು ಎಸ್ಪಿ ಗೆ ಇನ್ನಷ್ಟು ಬಲ ನೀಡಲು ಸಣ್ಣ ಪಕ್ಷಗಳು ಮುಂದಾಗಿದೆ. ಈ ಹಿಂದೆ ಬಿಜೆಪಿಯ ಜೊತೆ ಎಂಟು ಸಣ್ಣ ಪಕ್ಷಗಳು ಮೈತ್ರಿಗೆ ಮುಂದಾಗಿದ್ದವು, ಈಗ ಇನ್ನೂ ಕೆಲವು ಪ್ರಮುಖ ಸಣ್ಣ ಪಕ್ಷಗಳು ಎಸ್ಪಿಯೊಂದಿಗೆ ಮೈತ್ರಿಗೆ ಮುಂದಾಗಿದೆ. ಎಎಪಿ, ಎಸ್ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ಅಸ್ಸಾದುದ್ದೀನ್ ಓವೈಸಿಯ ಪಕ್ಷ ಕೂಡಾ ಈ ಮೈತ್ರಿಯಲ್ಲಿ ಸೇರುವ ನಿರೀಕ್ಷೆ ಇದೆ. ಆದರೆ ಇದುವರೆಗೆ ಓವೈಸಿ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)