ಮೂರು ದಿನ 15 ಜಿಲ್ಲೆಗಳು ಸ್ತಬ್ಧ; ಉತ್ತರ ಪ್ರದೇಶಕ್ಕೆ ಎಂಥಾ ಸ್ಥಿತಿ?
ಲಕ್ನೋ, ಮಾರ್ಚ್.22: ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದು ಆಗಿದೆ. ಭಾನುವಾರ ಸಂಜೆ 5 ಗಂಟೆ 5 ನಿಮಿಷದಲ್ಲಿ ಹಲವೆಡೆ ಜನರು ಜಾಗಟೆ, ಗಂಟೆ ಹಿಡಿದು ಕಿಟಕಿ ಪಕ್ಕ ಮತ್ತು ಟೆರೆಸ್ ಮೇಲೆ ನಿಂತು ಬಾರಿಸಿದ್ದು ಆಗಿದೆ.
ಜನತಾ ಕರ್ಫ್ಯೂ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರವು ರಾಜ್ಯದ 15 ಜಿಲ್ಲೆಗಳನ್ನು ಮುಂದಿನ ಮೂರು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಮಾಡುವುದಕ್ಕೆ ತೀರ್ಮಾನಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಾರ್ಚ್.25ರವರೆಗೂ ಉತ್ತರ ಪ್ರದೇಶದ 15 ಜಿಲ್ಲೆಗಳು ಸಂಪೂರ್ಣ ಸ್ತಬ್ಧಗೊಳ್ಳಲಿವೆ. ಆಗ್ರಾ, ಲಕ್ನೋ, ಗೌತಮ್ ಬಂದ್ ನಗರ್, ಗಜಿಯಾಬಾದ್, ಮೊರದಾಬಾದ್, ವಾರಣಾಸಿ, ಲಕಿಂಪುರ್ ಖಿರಿ, ಬರೇಲಿ, ಅಜಂಘರ್, ಕಾನ್ಪುರ್, ಮೀರತ್, ಪ್ರಯಾಗ್ ರಾಜ್, ಅಲಿಘರ್, ಗೋರಖ್ ಪುರ್, ಮತ್ತು ಶಹರಾಂಪುರ್ ಜಿಲ್ಲೆಗಳ ಲಾಕ್ ಡೌನ್ ಗೆ ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.

ದೇಶದಲ್ಲಿ ಒಟ್ಟು 75 ಜಿಲ್ಲೆಗಳು ಕಂಪ್ಲೀಟ್ ಲಾಕ್ ಡೌನ್:
ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ಮತ್ತು ಶಂಕಿತರು ಕಾಣಿಸಿಕೊಂಡ ಹಿನ್ನೆಲೆ 75 ಜಿಲ್ಲೆಗಳನ್ನು ಮುಂದಿನ ಹತ್ತು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ, ಮೆಡಿಕಲ್ ಶಾಪ್, ಪೆಟ್ರೋಲ್-ಡೀಸೆಲ್, ಹೋಟೆಲ್ ಹಾಗೂ ಆಹಾರ ಸಾಮಗ್ರಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications