'ಮುಸ್ಲಿಮರ ಗೋರಿಗಳ ಮೇಲೆ ರಾಮ ಮಂದಿರ ಕಟ್ಟುತ್ತೀರಾ?'
ಲಕ್ನೋ, ಫೆಬ್ರವರಿ 19: ಮುಸ್ಲಿಮರ ಗೋರಿಗಳ ಮೇಲೆ ರಾಮ ಮಂದಿರ ನಿರ್ಮಿಸುವುದು 'ಸನಾತನ ಧರ್ಮ'ದ ಉಲ್ಲಂಘನೆಯಾಗುತ್ತದೆಯಲ್ಲವೇ ಎಂದು ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದ ವಕೀಲ ಎಂ.ಆರ್. ಶಮ್ಷದ್, ರಾಮಮಂದಿರ ಟ್ರಸ್ಟ್ಅನ್ನು ಪ್ರಶ್ನಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ಗೆ ಫೆ. 15ರಂದು ಪತ್ರ ಬರೆದಿರುವ ಶಮ್ಷದ್, ಧ್ವಂಸಗೊಳಿಸಲಾದ ಬಾಬ್ರಿ ಮಸೀದಿ ಸುತ್ತಲೂ ಮುಸ್ಲಿಮರ ಸ್ಮಶಾನವಿದೆ. 1885ರ ಅಯೋಧ್ಯಾ ಗಲಭೆಯಲ್ಲಿ ಜೀವಕಳೆದುಕೊಂಡ ಮುಸ್ಲಿಮರನ್ನು ಅಲ್ಲಿಯೇ ಮಣ್ಣುಮಾಡಲಾಗಿತ್ತು ಎಂದು ಹೇಳಿದ್ದಾರೆ.
ದಾಖಲೆಗಳ ಪ್ರಕಾರ 1885ರ ಗಲಭೆಯಲ್ಲಿ 75 ಮುಸ್ಲಿಮರು ಮೃತಪಟ್ಟಿದ್ದರು. ಅವರೆಲ್ಲರನ್ನೂ ಬಾಬ್ರ ಮಸೀದಿ ಸುತ್ತಲೂ ಇರುವ ಸ್ಮಶಾನದಲ್ಲಿ ಹೂಳಲಾಗಿತ್ತು. ಅದರ ಬಳಿಕವೂ ಆ ಭೂಮಿಯನ್ನು ಸ್ಮಶಾನವಾಗಿಯೇ ಬಳಸಲಾಗುತ್ತಿತ್ತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ನ ಎಲ್ಲ ಹತ್ತು ಟ್ರಸ್ಟಿಗಳನ್ನು ಉಲ್ಲೇಖಿಸಿರುವ ಪತ್ರದಲ್ಲಿ ಹೇಳಲಾಗಿದೆ.

ಗೋರಿ ಮೇಲೆ ದೇವಸ್ಥಾನ ಸಾಧ್ಯವೇ?
'ಸನಾತನ ಧರ್ಮ'ದ ಧಾರ್ಮಿಕ ಗ್ರಂಥಗಳ ದೃಷ್ಟಿಯಿಂದ ನೋಡುವುದಾದರೆ ಶ್ರೀರಾಮನ ದೇವಸ್ಥಾನದ ಅಡಿಪಾಯವನ್ನು ಮುಸ್ಲಿಮರ ಗೋರಿಗಳ ಮೇಲೆ ಕಟ್ಟಲು ಸಾಧ್ಯವೇ ಎಂಬುದನ್ನು ನೀವು ಪರಿಶೀಲಿಸಬೇಕು. ಟ್ರಸ್ಟ್ನ ಮ್ಯಾನೇಜ್ಮೆಂಟ್ ಈ ಕುರಿತು ನಿರ್ಧಾರ ತೆಗದುಕೊಳ್ಳಬೇಕಿದೆ' ಎಂದು ಅವರು ಹೇಳಿದ್ದಾರೆ.

ಧರ್ಮದ ಉಲ್ಲಂಘನೆ
ಬಾಬ್ರಿ ಮಸೀದಿ ಸುತ್ತಲಿನ ಸ್ಮಶಾನದ ಬಗ್ಗೆ ಫೈಜಾಬಾದ್ ಗೆಜೆಟಿಯರ್ನಲ್ಲಿಯೂ ಉಲ್ಲೇಖಿಸಲಾಗಿದೆ. ರಾಮನ ಭವ್ಯ ದೇವಸ್ಥಾನ ನಿರ್ಮಿಸಲು ಮುಸ್ಲಿಮರ ಸ್ಮಶಾನವನ್ನು ಬಳಸುತ್ತಿರುವ ವಿಚಾರವನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಇದು 'ಧರ್ಮ'ದ ಉಲ್ಲಂಘನೆಯಾಗಿದೆ ಎಂದು ಶಮ್ಷದ್ ಅಭಿಪ್ರಾಯಪಟ್ಟಿದ್ದಾರೆ.

ರಾಮಮಂದಿರಕ್ಕೆ ಬಳಸಿಕೊಳ್ಳಬೇಡಿ
'ಶ್ರೀರಾಮನ ಕುರಿತಾದ ಅಪಾರ ಗೌರವ ಮತ್ತು ಮಾನವೀಯ ಕಾಳಜಿಯೊಂದಿಗೆ, ಧ್ವಂಸಗೊಳಿಸಲಾದ ಮಸೂದಿಯ ಸುತ್ತಲೂ ಇರುವ ಮುಸ್ಲಿಮರ ಗೋರಿಗಳನ್ನು ಒಳಗೊಂಡಿರುವ ಸುಮಾರು ಐದು ಎಕರೆ ಜಾಗವನ್ನು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಬೇಡಿ ಎಂದು ನಿಮಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದು ಕೋರಿದ್ದಾರೆ.

ಯಾವುದೇ ಗೋರಿಗಳಿಲ್ಲ
ಸುಪ್ರೀಂಕೋರ್ಟ್ ವಕೀಲ ಎಂ.ಆರ್. ಶಮ್ಷದ್ ಕಳುಹಿಸಿರುವ ಪತ್ರಕ್ಕೆ ಟ್ರಸ್ಟ್ ಆಡಳಿತ ಪ್ರತಿಕ್ರಿಯೆ ನೀಡಿದೆ. ರಾಮ ಜನ್ಮಭೂಮಿ ಪ್ರದೇಶದಲ್ಲಿನ 67 ಎಕರೆ ಆವರಣದಲ್ಲಿ ಪ್ರಸ್ತುತ ಯಾವುದೇ ಗೋರಿಗಳಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಝಾ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಉಲ್ಲೇಖಿಸಿದೆ
ಅಯೋಧ್ಯಾ ಭೂ ವಿವಾದದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎಲ್ಲ ವಾಸ್ತವಗಳನ್ನೂ ಸ್ಥೂಲವಾಗಿ ಪರಿಶೀಲಿಸಿದೆ. ಇದರಲ್ಲಿ ಶಮ್ಷದ್ ಅವರು ಬರೆದಿರುವ ಪತ್ರದಲ್ಲಿನ ಅಂಶಗಳೂ ಸೇರಿವೆ. ಪ್ರಕರಣದ ವಿಚಾರಣೆ ವೇಳೆಯೂ ಈ ವಿಚಾರ ಚರ್ಚೆಗೆ ಬಂದಿತ್ತು. 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಕೂಡ ಈ ಎಲ್ಲ ಸಂಗತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications