ಪೌರತ್ವ ಪ್ರತಿಭಟನೆ ವ್ಯಾಪಕ; ಉತ್ತರಪ್ರದೇಶದಲ್ಲಿ 11 ಜನ ಸಾವು, ಬಿಹಾರ ಬಂದ್
ಲಕ್ನೋ, ಡಿಸೆಂಬರ್ 21: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಇದುವರೆಗೆ 11 ಜನ ಸಾವನ್ನಪ್ಪಿದ್ದಾರೆ. ಬಿಹಾರ್ ರಾಜ್ಯದಲ್ಲಿ ಕಾಯ್ದೆ ವಿರೋಧಿಸಿ ಆರ್ ಜೆ ಡಿ ಕಾರ್ಯಕರ್ತರು ಬಿಹಾರ್ ಬಂದ್ ಗೆ ಕರೆ ನೀಡಿದ್ದು, ಹಿಂಸಾಚಾರ ಉಂಟಾಗಿದೆ.
ಲಕ್ನೋ, ಮಿರತ್, ಕಾನ್ಪುರ್, ಸಂಬಾಲ್, ಫಿರೂಜಾಬಾದ್, ವಾರಣಾಸಿ ಹಾಗೂ ಗೊರಕಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇಂದು ವಾರಣಾಸಿಯಲ್ಲಿ ಪ್ರತಿಭಟನಾಕಾರರ ಕಾಲ್ತುಳಿತಕ್ಕೆ 8 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮಿರತ್ನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡೆದ ಗಲಬೆಯಲ್ಲಿ ಕಾನ್ಪುರದ ಎಂಟು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯ ಜಮಾ ಮಸೀದಿಯಲ್ಲಿ ಪೌರತ್ವ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಭೀಮ ಆರ್ಮಿ ಮುಖಂಡ ಚಂದ್ರಶೇಖರ ಆಝಾದ್ನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
7 ಜಿಲ್ಲೆಗಳಲ್ಲಿ ಹಿಂಸಾಚಾರ
ಉತ್ತರಪ್ರದೇಶದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಶನಿವಾರ ಐವರು ದುರ್ಮರಣಕ್ಕೀಡಾಗಿದ್ದಾರೆ. ಪ್ರತಿಭಟನಗೆಳು ನಡೆಯುವಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಚಕಮಕಿ ನಡೆದು ಈ ದುರ್ಘಟನೆ ಸಂಭವಿಸಿವೆ ಎಂದು ತಿಳಿದು ಬಂದಿದೆ. ಶನಿವಾರ ಮಿರತ್ನಲ್ಲಿ ಒಬ್ಬ ಸಾವನ್ನಪ್ಪಿ, 25 ಜನ ಗಾಯಗೊಂಡಿದ್ದರು. ಲಕ್ನೋ ಹಾಗೂ ಕಾನ್ಪುರದಲ್ಲಿ ತಲಾ ಇಬ್ಬರು ಮೃತಪಟ್ಟು, 25 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ರತಿಭಟನೆಗಳು ಮುಂದುವರೆದಿದ್ದು, ಉತ್ತರಪ್ರದೇಶದ 11 ಜಿಲ್ಲೆಗಳಲ್ಲಿ ಡಿಸೆಂಬರ್ 22 ರವರೆಗೆ ಇಂಟರನೆಟ್ ಸ್ಥಗೀತಗೊಳಿಸಿ, ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಅಲ್ಲಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.
ಬಿಹಾರ್ ಸ್ತಬ್ದ
ಇನ್ನು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ತಿದ್ದುಪಡಿ ವಿರೋಧಿಸಿ ಬಿಹಾರದಲ್ಲಿ ಆರ್ ಜೆ ಡಿ ಕಾರ್ಯಕರ್ತರು ಬಂದ್ಗೆ ಕರೆ ನೀಡಿದ್ದಾರೆ. ಆರ್ ಜೆ ಡಿ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಎಮ್ಮೆ, ದನಗಳನ್ನು ನುಗ್ಗಿಸಿ ಬಹುತೇಕ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೀದಿಗಿಳಿದವರ ಮೇಲೆ ಆರ್ ಜೆ ಡಿ ಕಾರ್ಯಕರ್ತರು ಹಲ್ಲೆ ಮಾಡುತ್ತಿದ್ದ ಹಾಗು ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಇದುವರೆಗೆ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಸುಪ್ರೀಂಕೋಟ್ಗೆ ಅರ್ಜಿ
ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡಲು ಸುಪ್ರೀಂಕೋರ್ಟ ನಿರಾಕರಿಸಿದ್ದು, ಈ ಕುರಿತು ಸಿಂಧುತ್ವ ಪ್ರಶ್ನಿಸಿ, ದೇಶದ ಕೆಲ ರಾಜಕೀಯ ಪಕ್ಷಗಳು ಹಾಗೂ ಕೆಲ ಸಂಘಟನೆಗಳು ಸುಪ್ರೀಂಕೋರ್ಟ ಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಈ ಕುರಿತು ಜನೇವರಿ ಹೆಚ್ಚಿನ ವಿಚಾರಣೆಯನ್ನು ಜನೇವರಿ 22 ಕ್ಕೆ ಮುಂದೂಡಿದೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ದೇಶಾದ್ಯಂತ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು 59 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ.
ಆಝಾದ್ ಅರೆಸ್ಟ್
ದೆಹಲಿಯ ಜಮಾ ಮಸೀದಿಯಲ್ಲಿ ಪೌರತ್ವ ಕಾನೂನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಭೀಮ ಆರ್ಮಿ ಮುಖಂಡ ಚಂದ್ರಶೇಖರ ಆಝಾದ್ನ್ನು ದೆಹಲಿ ಪೊಲೀಸರು ಇಂದು ಮಧ್ಯಾಹ್ನ ಬಂಧಿಸಿದ್ದಾರೆ. ಆಝಾದ್ ಬಂಧನಕ್ಕೆ ನಿನ್ನೆಯಿಂದ ದೆಹಲಿ ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಆಝಾದ್ ಮಸೀದಿ ಒಳಗೆ ಅಡಗಿ ಕುಳಿತು, ಪೊಲೀಸರ ದಾರಿ ತಪ್ಪಿಸಿ, ಕಡೆಗೂ ಬಂಧನಕ್ಕೆ ಒಳಗಾಗಿದ್ದಾರೆ.