'ಯುಪಿ ಸ್ಥಳೀಯ ಚುನಾವಣೆಯಲ್ಲಿ ಮತದಾರರನ್ನು ಅಪಹರಿಸಿದ ಬಿಜೆಪಿ': ಅಖಿಲೇಶ್ ಆರೋಪ
ಲಕ್ನೋ, ಜು.04: ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಹುದ್ದೆಗಳಿಗೆ ನಡೆಯುವ ಚುನಾವಣೆಯನ್ನು ಬಿಜೆಪಿಯವರು ಅಪಹಾಸ್ಯ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದು ಮಾತ್ರವಲ್ಲದೇ, ಬಿಜೆಪಿಯವರು ಮತದಾರರನ್ನು ಅಪಹರಿಸಿದ್ದಾರೆ ಹಾಗೂ ಮತ ಚಲಾಯಿಸುವುದನ್ನು ತಡೆಯಲು ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ನಡೆದ ಚುನಾವಣೆಗಳಲ್ಲಿ 75 ಸ್ಥಾನಗಳಲ್ಲಿ 67 ಸ್ಥಾನಗಳಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಹೇಳಿಕೊಂಡಿದೆ.
"ತನ್ನ ಸೋಲನ್ನು ವಿಜಯವಾಗಿ ಪರಿವರ್ತಿಸಲು, ಬಿಜೆಪಿ ಮತದಾರರನ್ನು ಅಪಹರಿಸಿದೆ. ಪೊಲೀಸ್ ಮತ್ತು ಆಡಳಿತದ ಸಹಾಯದಿಂದ ಬಲವಂತವಾಗಿ ಮತ ಚಲಾಯಿಸುವುದನ್ನು ತಡೆದಿದೆ," ಎಂದು ಎಸ್ಪಿ ಮುಖ್ಯಸ್ಥರು ಪಕ್ಷದ ಪ್ರಕಟಣೆಯಲ್ಲಿ ಹೇಳಿದ್ದಾರೆ.

"ಬಿಜೆಪಿ ಎಲ್ಲಾ ಪ್ರಜಾಪ್ರಭುತ್ವದ ಮೌಲ್ಯಗಳ ಅಪಹಾಸ್ಯ ಮಾಡಿದೆ. ಈ ಹಿಂದೆ ಎಂದೂ ಇಂತಹ ಕೃತ್ಯವನ್ನು ನಾವು ನೋಡಿಲ್ಲ,"ಎಂದು ಅಖಿಲೇಶ್ ಯಾದವ್ ದೂರಿದ್ದಾರೆ.
"ಜಿಲ್ಲಾ ಪಂಚಾಯತ್ ಸದಸ್ಯರ ಚುನಾವಣೆಯಲ್ಲಿ ಹೆಚ್ಚಿನ ಫಲಿತಾಂಶಗಳು ಎಸ್ಪಿ ಪರವಾಗಿದ್ದರೆ, ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದು ವಿಚಿತ್ರ," ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.
"ರಾಜ್ಯ ಚುನಾವಣಾ ಆಯುಕ್ತರಿಗೆ ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷದ 'ಸರ್ವಾಧಿಕಾರ' ಸ್ಪಷ್ಟವಾಗಿ ಗೋಚರಿಸುತ್ತಿದೆ," ಎಂದು ಎಸ್ಪಿ ಮುಖ್ಯಸ್ಥರು ಕಿಡಕಾರಿದ್ದಾರೆ.
ಪ್ರಕರಣವೊಂದನ್ನು ಉಲ್ಲೇಖಿಸಿದ ಅಖಿಲೇಶ್, "ಸಮಾಜವಾದಿ ಪಕ್ಷದ ಪರ ಸದಸ್ಯ ಅರುಣ್ ರಾವತ್ರನ್ನು ಲಕ್ನೋದಲ್ಲಿ ಅಪಹರಿಸಲಾಗಿದೆ. ಎಸ್ಪಿ ಅಭ್ಯರ್ಥಿ ವಿಜಯ್ ಲಕ್ಷ್ಮಿಯನ್ನು ಡಿಎಂ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದ್ದು, ಪತಿ ಶಾಸಕ ಅಂಬರೀಶ್ ಪುಷ್ಕರ್ರನ್ನು ಭೇಟಿಯಾಗದಂತೆ ತಡೆಯಲಾಗಿದೆ. ಎಸ್ಪಿ ಕಾರ್ಯಕರ್ತರು ಮತ್ತು ಮಹಿಳೆಯರು ಪ್ರತಿಭಟಿಸಿದಾಗ ಅಸಭ್ಯ ವರ್ತನೆ ಮಾಡಲಾಗಿದೆ," ಎಂಬ ಗಂಭೀರ ಆರೋಪಗೈದರು.
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಿಜೆಪಿ ತಕ್ಕ ಉತ್ತರ ನೀಡಲು ಸಾರ್ವಜನಿಕರು ಸಿದ್ಧರಾಗಿದ್ದಾರೆ. ಎಸ್ಪಿ ಸರ್ಕಾರ ರಚನೆಯಾದ ನಂತರವೇ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ನ್ಯಾಯ ದೊರೆಯುತ್ತದೆ," ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications