ಯುಪಿ ಕದನ: AIMIM 'ಭಾಗಿದರಿ ಪರಿವರ್ತನ್ ಮೋರ್ಚಾ' ಆರಂಭ, 2 ಸಿಎಂಗಳ ಭರವಸೆ
ಲಕ್ನೋ ಜನವರಿ 23: ಅಸಾದುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಗೆ ಮುಸ್ಲಿಮರು, ಹಿಂದುಳಿದ ವರ್ಗಗಳು (ಒಬಿಸಿಗಳು) ಮತ್ತು ದಲಿತರ ಬೆಂಬಲದ 'ಭಾಗಿದರಿ ಪರಿವರ್ತನ್ ಮೋರ್ಚಾ' ಹೊಸ ಫ್ರಂಟ್ ಪ್ರಾರಂಭಿಸಿದ್ದು, ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶಕ್ಕೆ ಇಬ್ಬರು ಮುಖ್ಯಮಂತ್ರಿಗಳ ಆಯ್ಕೆ ಬಗ್ಗೆ ಭರವಸೆ ನೀಡಿದೆ.
ಅಸಾದುದ್ದೀನ್ ಓವೈಸಿ ಅವರು, 'ಭಾಗಿದರಿ ಪರಿವರ್ತನ್ ಮೋರ್ಚಾ' ಚುನಾವಣೆಯಲ್ಲಿ ಗೆದ್ದರೆ, ಇಬ್ಬರು ದಲಿತ ಮತ್ತು ಒಬಿಸಿ ಮುಖ್ಯಮಂತ್ರಿಗಳು, ಜೊತೆಗೆ ಮೂವರು ಉಪ ಮುಖ್ಯಮಂತ್ರಿಗಳು, ಅವರಲ್ಲಿ ಒಬ್ಬರು ಮುಸ್ಲಿಂರಾಗಿರುತ್ತಾರೆಂದು ಹೇಳಿದ್ದಾರೆ.
ಮೋರ್ಚಾ 403 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದರಲ್ಲಿ ಬಾಬು ಸಿಂಗ್ ಕುಶ್ವಾಹ ನೇತೃತ್ವದ ಜನ ಅಧಿಕಾರಿ ಪಕ್ಷ, ವಾಮನ್ ಮೆಶ್ರಾಮ್ ನೇತೃತ್ವದ ಭಾರತ ಮುಕ್ತಿ ಮೋರ್ಚಾ, ಅನಿಲ್ ಸಿಂಗ್ ಚೌಹಾಣ್ ನೇತೃತ್ವದ ಜನತಾ ಕ್ರಾಂತಿ ಪಕ್ಷ ಮತ್ತು ರಾಮ್ ಪ್ರಸಾದ್ ಕಶ್ಯಪ್ ನೇತೃತ್ವದ ಭಾರತೀಯ ವಂಚಿತ್ ಸಮಾಜ ಪಕ್ಷ ಸೇರಿವೆ.

ಫೆಬ್ರವರಿ 10 ರಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 58 ವಿಧಾನಸಭಾ ಸ್ಥಾನಗಳಿಗೆ ಮೋರ್ಚಾದ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಬಹುಜನ ಸಮಾಜ ಪಕ್ಷದ ಸರ್ಕಾರದಲ್ಲಿ (2007-12) ಮಾಜಿ ಸಚಿವರಾದ ಬಾಬು ಸಿಂಗ್ ಕುಶ್ವಾಹ ಅವರು ಒಬಿಸಿಗಳ ಮೇಲೆ ವಿಶೇಷವಾಗಿ ಬುಂದೇಲ್ಖಂಡ್ ಪ್ರದೇಶ ಮತ್ತು ಮಧ್ಯ ಉತ್ತರ ಪ್ರದೇಶದ ಮೌರ್ಯ, ಕುಶ್ವಾಹ, ಶಾಕ್ಯ ಮತ್ತು ಸೈನಿ ಸಮುದಾಯಗಳ ಮೇಲೆ ಪ್ರಭಾವ ಹೊಂದಿದ್ದಾರೆ.
'ಭಾಗಿದರಿ ಪರಿವರ್ತನ್ ಮೋರ್ಚಾ' ಬಗ್ಗೆ ಮಾತನಾಡಿದ ಬಾಬು ಸಿಂಗ್ ಕುಶ್ವಾಹಾ, ಭೀಮರಾವ್ ಅಂಬೇಡ್ಕರ್ ಅವರ ಅನುಯಾಯಿಗಳು ಮತ್ತು ಸಮಾಜವಾದಿ ಸಿದ್ಧಾಂತದ ಅನುಯಾಯಿಗಳು ವಿಧಾನಸಭಾ ಚುನಾವಣೆಯನ್ನು ಎದುರಿಸಲು ಒಂದೇ ವೇದಿಕೆಗೆ ಬಂದಿದ್ದಾರೆ. ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ, ದುರ್ಬಲ ವರ್ಗದವರಿಗೆ ಉಚಿತ ವಿದ್ಯುತ್ ಪೂರೈಕೆ, ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ, ಉಚಿತ ಶಿಕ್ಷಣ, ಅತಿ ಸಣ್ಣ ರೈತರ ಸಾಲ ಮನ್ನಾ, ಯುವಕರಿಗೆ ಉದ್ಯೋಗ ನೀಡುವ ಕುರಿತು ಮೋರ್ಚಾ ಸ್ಪರ್ಧಿಸಲಿದೆ ಎಂದು ಹೇಳಿದರು.
ಇನ್ನೂ ವಾಮನ್ ಮೆಶ್ರಾಮ್ ಅವರು ಪ್ರಭಾವಿ ದಲಿತ ನಾಯಕ, ಅಖಿಲ ಭಾರತ ಹಿಂದುಳಿದ (SC, ST, OBC) ಮತ್ತು ಅಲ್ಪಸಂಖ್ಯಾತರ ಸಮುದಾಯ ನೌಕರರ ಒಕ್ಕೂಟದ (BAMCEF) ಅಧ್ಯಕ್ಷರಾಗಿದ್ದಾರೆ.ವಾಮನ್ ಮೇಶ್ರಮ್ ಅವರನ್ನು ಹೊಸ ಫ್ರಂಟ್ ಅಧ್ಯಕ್ಷರನ್ನಾಗಿ ಮಾಡಿದರೆ, ಬಾಬು ಸಿಂಗ್ ಕುಶ್ವಾಹ ಅದರ ಸಂಚಾಲಕರಾಗಿದ್ದಾರೆ. ಭೀಮ್ ಆರ್ಮಿ, ಪೀಸ್ ಪಾರ್ಟಿ ಮತ್ತು ರಾಷ್ಟ್ರೀಯ ಉಲೇಮಾ ಕೌನ್ಸಿಲ್ ಜೊತೆ ಮೈತ್ರಿಗೆ ಸೇರುವ ಕುರಿತು ಮಾತುಕತೆ ನಡೆಯುತ್ತಿದೆ.
ಕಳೆದ ವರ್ಷ ಒಂಬತ್ತು ಸಣ್ಣ ರಾಜಕೀಯ ಪಕ್ಷಗಳ ಮೈತ್ರಿಕೂಟವಾಗಿ ಭಾಗಿದರಿ ಸಂಕಲ್ಪ ಮೋರ್ಚಾವನ್ನು ಪ್ರಾರಂಭಿಸಲಾಯಿತು. ಇದು ಎಐಎಂಐಎಂ, ಓಂ ಪ್ರಕಾಶ್ ರಾಜ್ಭರ್ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ), ಜನ ಅಧಿಕಾರ ಪಕ್ಷ, ಬಾಬು ರಾಂಪಾಲ್ ಅವರ ರಾಷ್ಟ್ರೀಯ ಉದಯ್ ಪಕ್ಷ, ಪ್ರೇಮಚಂದ ಪ್ರಜಾಪತಿಯ ರಾಷ್ಟ್ರೀಯ ಉಪೇಕ್ಷಿತ ಸಮಾಜ ಪಕ್ಷ ಮತ್ತು ಜನತಾ ಕ್ರಾಂತಿ ಪಕ್ಷವನ್ನು ಒಳಗೊಂಡಿತ್ತು. ನಂತರ ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಸಮಾಜವಾದಿ ಪಕ್ಷದ ಮೈತ್ರಿಗೆ ಸೇರ್ಪಡೆಗೊಂಡರು.
Recommended Video
ಸಂವಿಧಾನದ 153 ಮತ್ತು 164 ನೇ ವಿಧಿಗಳ ನಿಬಂಧನೆಗಳ ಅಡಿಯಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ನೇಮಿಸಲಾಗುತ್ತದೆ , ಎರಡೂ ವಿಧಿಗಳು ಒಬ್ಬ ವ್ಯಕ್ತಿಯನ್ನು ರಾಜ್ಯದ ಸಿಎಂ ಎಂದು ಪರಿಗಣಿಸುತ್ತವೆ. ಸಂವಿಧಾನದ ಯಾವ ನಿಯಮದ ಅಡಿಯಲ್ಲಿ ರಾಜ್ಯಕ್ಕೆ ಇಬ್ಬರು ಸಿಎಂಗಳು ಇರುತ್ತಾರೆ ಎಂಬುದನ್ನು ಓವೈಸಿ ವಿವರಿಸಲಿಲ್ಲ.












Click it and Unblock the Notifications