'ರಾಮಮಂದಿರಕ್ಕಾಗಿ ಆಗ್ರಹ' : ಅಯೋಧ್ಯೆಯ ಧರ್ಮಸಭೆಗೆ 2ಲಕ್ಷಕ್ಕೂ ಅಧಿಕ ಭಕ್ತರು
ಲಕ್ನೋ, ನವೆಂಬರ್ 24: ವಿವಾದಾತ್ಮಕ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಕಾರ್ಯಕರ್ತರು, ಸನ್ಯಾಸಿಗಳು ಅಯೋಧ್ಯಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿದ್ದಾರೆ.
ಭಾನುವಾರದಂದು(ನವೆಂಬರ್ 25) ನಡೆಯಲಿರುವ ಧರ್ಮಸಭೆಯಲ್ಲಿ ಸರಿ ಸುಮಾರು 2 ಲಕ್ಷಕ್ಕೂ ಅಧಿಕ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದೇ ವೇಳೆ ದೇಶದ ವಿವಿಧೆಡೆಗಳಲ್ಲಿ ರಾಮಮಂದಿರಕ್ಕಾಗಿ ಜನಾಗ್ರಹ ಕಾರ್ಯಕ್ರಮ ನಡೆಯಲಿದೆ. ಅಯೋಧೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಗೆ ಸರಿ ಹೊಂದುವಂತೆ ಅನ್ನ, ಆಹಾರ, ವಸತಿ ವ್ಯವಸ್ಥೆ ಕೈಗೊಂಡಿರುವ ಮಾಹಿತಿ ಬಂದಿದೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರವು ರಾಮಮಂದಿರ ನಿರ್ಮಾಣದ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕಾಗ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಅಯೋಧ್ಯೆಯಲ್ಲಿ ಹೆಚ್ಚು ಮುಸ್ಲಿಮ್ ಜನವಸತಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಎಲ್ಲೆಡೆ ಸೆಕ್ಷನ್144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ.
ರಾಮಮಂದಿರಕ್ಕಾಗಿ ಆಗ್ರಹ ಮಾಡಲು ನಡೆಯುವ ಸಭೆಗೆ ಕಿಚ್ಚು ಹಚ್ಚಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡಾ ಉಪಸ್ಥಿತರಿರಲಿದ್ದಾರೆ. ಮೊದಲು ಮಂದಿರ ಆನಂತರ ಸರ್ಕಾರ ಎಂಬ ಘೋಷಣೆ ಹೊರಡಿಸಿರುವ ಶಿವಸೇನೆ, ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಅಯೋಧ್ಯೆಯ ಪರಿಸ್ಥಿತಿ ನಿಭಾಯಿಸಲು ಸೇನಾಪಡೆಯನ್ನು ರವಾನಿಸುವಂತೆ ಈ ನಡುವೆ ಅಖಿಲೇಶ್ ಯಾದವ್ ಅವರು ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.