ವಿಧಾನಸಭೆ ಚುನಾವಣೆ: ಒಂದು ರೂಪಾಯಿಗೆ ಮನೆ- ಯೋಗಿ ಆಶ್ವಾಸನೆ
ಲಕ್ನೋ ಡಿಸೆಂಬರ್ 1: 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಹಲವಾರು ಆಕರ್ಷಕ ದುಬಾರಿ ಉಡುಗೊರೆಗಳ ಮೂಲಕ ಜನರನ್ನು ಸೆಳೆಯಲಾಗುತ್ತಿದೆ. ಇದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ಹೊರತಾಗಿಲ್ಲ. ಈ ಬಾರಿ ಯೋಗಿ ಸರ್ಕಾರ ರಾಜ್ಯದ ಜನತೆಗೆ ಉಡುಗೊರೆಗಳ ಪಟ್ಟಿಯೇ ತೆರೆದಿಡುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಸರ್ಕಾರಿ ನೌಕರರು ಹಾಗೂ ವಕೀಲರ ಸರದಿ. ಹೊಸ ಯೋಜನೆಯಡಿ, ಯೋಗಿ ಆದಿತ್ಯನಾಥ್ ಸರ್ಕಾರವು ಲಕ್ಷಾಂತರ ಸರ್ಕಾರಿ ನೌಕರರು ಮತ್ತು ವಕೀಲರಿಗೆ ಸಹಾಯಧನದ ಮೇಲೆ ಮನೆಗಳನ್ನು ನೀಡುತ್ತದೆ. ಅದೂ ಕೇವಲ ಒಂದು ರೂಪಾಯಿಯಲ್ಲಿ.
ವಾಸ್ತವವಾಗಿ ಯುಪಿ ಸರ್ಕಾರವು ಲಕ್ಷಗಟ್ಟಲೆ ಉದ್ಯೋಗಿಗಳಿಗೆ ಸಬ್ಸಿಡಿಯಲ್ಲಿ ಮನೆಗಳನ್ನು ನೀಡಲು ಹೊರಟಿದೆ. ಗ್ರೂಪ್ ಸಿ ಮತ್ತು ಡಿ ಯ ವಕೀಲರಿಗೆ ಈ ಮನೆಗಳ ಖರೀದಿಗೆ ಕೇವಲ 1 ರೂಪಾಯಿಯನ್ನು ವಿಧಿಸಲಾಗುತ್ತದೆ. ಝೀ ನ್ಯೂಸ್ ಉಲ್ಲೇಖಿಸಿರುವ ಮೂಲಗಳ ಪ್ರಕಾರ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಯೋಜನೆಗಳ ಕರಡನ್ನು ಸಿದ್ಧಪಡಿಸಲಾಗಿದೆ. ಉನ್ನತ ಮಟ್ಟದ ಅನುಮೋದನೆಯ ನಂತರ, ಈ ಪ್ರಸ್ತಾವನೆಯನ್ನು ಸಂಪುಟವು ಅಂಗೀಕರಿಸುತ್ತದೆ. ಅದರ ನಂತರವೇ ಸಾವಿರಾರು ನೌಕರರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಗಮನಾರ್ಹವಾಗಿ ಖರೀದಿದಾರರು ಮುಂದಿನ 10 ವರ್ಷಗಳವರೆಗೆ ಅದನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಷರತ್ತಿನ ಮೇಲೆ ಮಾತ್ರ ಈ ಮನೆಗಳನ್ನು ಪಡೆಯುತ್ತಾರೆ. ಇಲ್ಲಿಯವರೆಗೆ, ಗ್ರೂಪ್ ಸಿ ಮತ್ತು ಡಿ ಉದ್ಯೋಗಿಗಳಿಗೆ ರಿಯಾಯಿತಿಯಲ್ಲಿ ಮನೆಗಳನ್ನು ಒದಗಿಸಲು ಯಾವುದೇ ನಿಬಂಧನೆ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಹೀಗಿರುವಾಗ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಈ ನಿರ್ಧಾರವನ್ನು ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಮೆಚ್ಚಬಹುದು.
ಈ ಯೋಜನೆಯ ಕರಡು ಸಿದ್ಧಪಡಿಸುವಾಗ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ಮತ್ತು ಹೆಚ್ಚಿನ ಆದಾಯವಿಲ್ಲದ ಅಂತಹ ವಕೀಲರು ಹೊಸ ಮನೆ ಖರೀದಿಗೆ ಅವಕಾಶ ಒದಗಿಸಲಾಗಿದೆ. ಈ ಒಂದು ರೂಪಾಯಿಯ ಮನೆಗಳನ್ನು ನೀಡುವ ಪ್ರಕ್ರಿಯೆಯ ಬಗ್ಗೆ ಆರಂಭಿಕ ಸುತ್ತಿನ ಮಾತುಕತೆಯಲ್ಲಿ ಹೆಚ್ಚಿನ ಸಹಮತ ವ್ಯಕ್ತವಾಗಿದೆ. ಈ ಮನೆಗಳ ಹಂಚಿಕೆಗೆ ಅರ್ಹತೆಯ ಮಾನದಂಡಗಳನ್ನು ನಂತರ ನಿರ್ಧರಿಸಲಾಗುವುದು ಎನ್ನಲಾಗುತ್ತಿದೆ.
ಮುಂದಿನ ವರ್ಷ ಆರಂಭದಲ್ಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ರಾಜಕೀಯವಾಗಿ ಹೆಚ್ಚು ಪ್ರಮುಖವಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ 2022 ರ ಚುನಾವಣಾ ಫಲಿತಾಂಶ ಏನು ಆಗಲಿದೆ ಎಂಬ ಬಗ್ಗೆ ಹಲವಾರು ಮಾಧ್ಯಮಗಳು ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸುತ್ತಿದೆ.
ದೇಶದಲ್ಲಿ ಅತೀ ಹೆಚ್ಚು ವಿಧಾನ ಸಭೆ ಕ್ಷೇತ್ರವನ್ನು ಉತ್ತರ ಪ್ರದೇಶ ಹೊಂದಿದ್ದು, ಉತ್ತರ ಪ್ರದೇಶವು ಒಟ್ಟು 403 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿಯು ಭರ್ಜರಿ ಬಹುಮತದಿಂದ ಜಯ ಸಾಧಿಸಿದೆ. ಈ ಬಾರಿ ಮತ್ತೆ ಅಧಿಕಾರವನ್ನು ಏರುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ನಡುವೆ ಟೈಮ್ಸ್ ನೌ ಉತ್ತರ ಪ್ರದೇಶದಲ್ಲಿ ಚುನಾವಣಾಪೂರ್ವ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಪಡೆಯಲಿದೆ. ಭರ್ಜರಿ ಬಹುಮತವನ್ನು ಬಿಜೆಪಿಯು ಗಳಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ.