ಯುಪಿ ಬಿಜೆಪಿ ತೊರೆದಂತೆ ಅಪಹರಣದ ಆರೋಪ: ವಿನಯ್ ಶಾಕ್ಯಾ ಸ್ಪಷ್ಟನೆ
ಲಕ್ನೋ ಜನವರಿ 13: ದೇಶದಲ್ಲಿ ಮುಂಬರುವ ತಿಂಗಳು ನಡೆಯಲಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಈ ಬಾರಿ ಉತ್ತರಪ್ರದೇಶದತ್ತ ಎಲ್ಲರ ಚಿತ್ತ ನಾಟಿದೆ. ದಿನಕಳೆದಂತೆ ಇಲ್ಲಿನ ರಾಜಕೀಯ ಬೆಳವಣಿಗೆಗಳು ಭಾರೀ ಕುತೂಹಲ ಹುಟ್ಟಿಸಿವೆ. ಕೆಲ ದಿನಗಳಿಂದ ಉತ್ತರ ಪ್ರದೇಶದ ಆಡಳಿತ ಪಕ್ಷದ ಶಾಸಕರು ಪಕ್ಷ ತೊರೆಯುತ್ತಿದ್ದಾರೆ. ದಿನಕ್ಕೆ ಒಬ್ಬರಂತೆ ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಇದು ಬಿಜೆಪಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಈಗಾಗಲೇ ಒಂಬತ್ತು ಜನ ಶಾಸಕರು ಬಿಜೆಪಿಯನ್ನು ತೊರೆದಿದ್ದಾರೆ. ಇವರಲ್ಲಿ ಒಬ್ಬರಾದ ಬಿಧುನಾ ಶಾಸಕ ವಿನಯ್ ಶಾಕ್ಯಾ ಅವರು ಬಿಜೆಪಿ ತೊರೆಯುತ್ತಿದ್ದಂತೆ ಅವರನ್ನು ಅಪಹರಿಸಲಾಗಿದೆ ಎನ್ನುವ ಆರೋಪ ಅವರ ಮಗಳಿಂದ ಕೇಳಿಬಂದಿತ್ತು. ಈ ಆರೋಪವನ್ನು ವಿನಯ್ ಶಾಕ್ಯಾ ಅವರು ತಳ್ಳಿ ಹಾಕಿದ್ದಾರೆ.
ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಂಪುಟ ಮತ್ತು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದರು. ರಾಜ್ಯದ ಏಳಕ್ಕೂ ಶಾಸಕರು ಇದನ್ನೇ ಅನುಸರಿಸಿ ಬಿಜೆಪಿ ತೊರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ತೊರೆದಿದ್ದು ಸತ್ಯ
ಭಾರತೀಯ ಜನತಾ ಪಕ್ಷದ ಬಿಧುನಾ ಶಾಸಕ ವಿನಯ್ ಶಾಕ್ಯಾ ಅವರು ಬುಧವಾರ ತಮ್ಮ ಅಪಹರಣದ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಜೊತೆಗೆ ತಾವು ಸಮಾಜವಾದಿ ಪಕ್ಷಕ್ಕೆ ಸೇರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಕ್ಯ ಅವರು, ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಬಿಜೆಪಿ ತೊರೆಯಲು ಮನಸ್ಸು ಮಾಡಿದ್ದೇನೆ. ಜೊತೆಗೆ ತಾವು ಎಸ್ಪಿಗೆ ಸೇರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಅವರನ್ನು ಅಪಹರಿಸಲಾಗಿದೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಶಕ್ಯಾ 2018 ರಲ್ಲಿ ಬ್ರೈನ್ ಸ್ಟ್ರೋಕ್ಗೆ ಒಳಗಾದರು. ಅದು ಅವರ ಮಾತಿನ ಮೇಲೆ ಪರಿಣಾಮ ಬೀರಿತು. ಈ ವೇಳೆ ಅವರನ್ನು ಅವರ ತಾಯಿ ಮನೆಗೆ ಕರೆದೊಯ್ಯಲಾಗಿದೆ. ವಿನಯ್ ಶಾಕ್ಯಾ ಬಿಜೆಪಿ ಪಕ್ಷ ತೊರೆದಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ಶಾಕ್ಯಾ ಅವರ ಮಗಳು ರಿಯಾ ಶಾಕ್ಯಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ತಮ್ಮ ತಂದೆಯನ್ನು ಅಪಹರಿಸಲಾಗಿದೆ ಎನ್ನುವ ಆರೋಪ ಮಾಡಿದ್ದಾರೆ.

ತಂದೆಯನ್ನು ಕಿಡ್ನಾಪ್ ನಿಜ ಎಂದ ರಿಯಾ ಕಾಶ್ಯಾ
ವಿನಯ್ ಮಗಳು ರಿಯಾ ಶಕ್ಯಾ ತನ್ನ ತಂದೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ತನ್ನ ಚಿಕ್ಕಪ್ಪ ದೇವೇಶ್ ಶಾಕ್ಯಾ ತನ್ನೊಂದಿಗೆ ಸಚಿವರನ್ನು ಲಕ್ನೋಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದರು. ವೀಡಿಯೊವೊಂದರಲ್ಲಿ ಅವರು, "ನಾನು ಎಲ್ಲರಿಗೂ ತಿಳಿಸಲು ಬಯಸುವುದೇನೆಂದರೆ, ನಾನು ಬಿಧುನಾ ಶಾಸಕ ವಿನಯ್ ಶಾಕ್ಯಾ ಅವರ ಮಗಳು ರಿಯಾ ಶಕ್ಯಾ. ನನ್ನ ತಂದೆ ಮೇ 1, 2018 ರಂದು ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ನಂತರ ಅವರನ್ನು ಲಕ್ನೋದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಯಿತು. ನನ್ನ ತಂದೆಯ ಚಿಕಿತ್ಸೆಗಾಗಿ ಉನ್ನತ ಮಟ್ಟದ ವೈದ್ಯರ ತಂಡವನ್ನು ಸಿದ್ಧಪಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದಗಳು. ಒಂದು ದಿನ ಅವರೇ ಆಸ್ಪತ್ರೆಯಲ್ಲಿ ನನ್ನ ತಂದೆಯನ್ನು ನೋಡಲು ಬಂದರು. ನಾವು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಪಕ್ಷದೊಂದಿಗೆ ಯಾವಾಗಲೂ ದೃಢವಾಗಿ ನಿಲ್ಲುತ್ತೇವೆ. ಆದರೆ ನನ್ನ ಚಿಕ್ಕಪ್ಪ ದೇವೇಶ್ ಮತ್ತು ನನ್ನ ಅಜ್ಜಿ ನನ್ನ ತಂದೆಯನ್ನು ಬಲವಂತವಾಗಿ ಲಕ್ನೋಗೆ ಕರೆದೊಯ್ದಿದ್ದಾರೆ. ಅವರು ಎಲ್ಲಿದ್ದಾರೆ ಮತ್ತು ಯಾವ ಸ್ಥಿತಿಯಲ್ಲಿದ್ದಾರೆ ಎಂದು ನನಗೆ ತಿಳಿದಿಲ್ಲ. ನನ್ನ ತಂದೆಯನ್ನು ಹುಡುಕಲು ಸರ್ಕಾರ ಸಹಾಯ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಅಪಹರವಾಗಿಲ್ಲ ಎಂದ ಭದ್ರತಾ ಸಿಬ್ಬಂದಿ
ಶಾಸಕರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇಟಾವಾದಲ್ಲಿ ತಮ್ಮ ಸಹೋದರ ಮತ್ತು ಅವರ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ತಾಯಿ ಮತ್ತು ಸಹೋದರ ಕೂಡ ಅಪಹರಣದ ವದಂತಿಯನ್ನು ನಿರಾಕರಿಸಿದರು ಮತ್ತು ರಿಯಾ ಅವರ ವೀಡಿಯೊವನ್ನು ಪಿತೂರಿ ಎಂದು ಕರೆದಿದ್ದಾರೆ. ಮಾತ್ರವಲ್ಲದೇ ಶಾಸಕರ ತಾಯಿ, ಅವರ ಕಿರಿಯ ಸಹೋದರನ ಪತ್ನಿ ಮತ್ತು ಅವರ ಭದ್ರತಾ ಸಿಬ್ಬಂದಿ ಶಾಕ್ಯಾ ಅವರ ಅಪಹರಣ ಆರೋಪವನ್ನು ತಳ್ಳಿಹಾಕಿದ್ದಾರೆ.

ರಿಯಾ ಹೇಳಿದ್ದು ಸುಳ್ಳು ಎಂದ ದ್ರೌಪತಿ ದೇವಿ
ಯಾರದೋ ಒತ್ತಡಕ್ಕೆ ಮಣಿದು ಮೊಮ್ಮಗಳು ರಿಯಾ ಈ ರೀತಿ ಹೇಳಿಕೆ ನೀಡುತ್ತಿದ್ದಾಳೆ. ತನ್ನ ಮಗ ಯಾವುದೇ ಅಪರಾಧ ಮಾಡಿಲ್ಲ. ಅವರನ್ನು ಅಪಹರಣ ಮಾಡಲಾಗಿಲ್ಲ ಎಂದು ಶಾಸಕರ ತಾಯಿ ದ್ರೌಪತಿ ದೇವಿ ಹೇಳಿದ್ದಾರೆ. ಆದರೆ, ಶಾಸಕರು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಶಾಸಕರ ಕಿರಿಯ ಸಹೋದರನ ಪತ್ನಿ ಸಪ್ನಾ ತಿಳಿಸಿದ್ದಾರೆ. ನಾಯಕನಿಗೆ ಯಾವುದೇ ರೀತಿಯ ಅಪಾಯವಿಲ್ಲ ಮತ್ತು ಆತನನ್ನು ಅಪಹರಿಸಿಲ್ಲ ಅಥವಾ ಒತ್ತೆಯಾಳಾಗಿ ಇರಿಸಲಾಗಿಲ್ಲ ಎಂದು ಅವರು ಹೇಳಿದರು.
ಶಾಸಕರ ಭದ್ರತಾ ಸಿಬ್ಬಂದಿ ಜೋಗಿಂದರ್ ಸಿಂಗ್, ಶಾಸಕರ ಪುತ್ರಿಯ ಆರೋಪಗಳು ಸಂಪೂರ್ಣವಾಗಿ ಹುಸಿ ಮತ್ತು ಆಧಾರರಹಿತವಾಗಿವೆ. "ಶಾಸಕರ ವಿರುದ್ಧ ಯಾರೂ ಯಾವುದೇ ಅಪರಾಧ ಮಾಡಿಲ್ಲ, ಅಥವಾ ಅವರನ್ನು ಒತ್ತೆಯಾಳಾಗಿ ಇರಿಸಲಾಗಿಲ್ಲ, ಶಾಸಕರು ತಮ್ಮ ಸ್ವಂತ ಇಚ್ಛೆಯಿಂದ ತನ್ನ ಸಹೋದರ ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ" ಎಂದಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಸತ್ಯ ಬಯಲು
ಉತ್ತರ ಪ್ರದೇಶ ಪೊಲೀಸರು ಮಂಗಳವಾರ ರಿಯಾ ಅವರ ಹೇಳಿಕೆಗಳನ್ನು ನಿರಾಧಾರ ಎಂದು ತಳ್ಳಿಹಾಕಿದ್ದಾರೆ. ಔರೈಯಾ ಅವರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಭಿಷೇಕ್ ವರ್ಮಾ ತಮ್ಮ ಹೇಳಿಕೆಯಲ್ಲಿ, "ನಾನು ಶಾಸಕ ವಿನಯ್ ಶಾಕ್ಯಾ ಅವರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿದ್ದೇನೆ ಮತ್ತು ಅವರು ಪ್ರಸ್ತುತ ಅವರ ಇಟಾವಾ ಅವರ ನಿವಾಸದಲ್ಲಿ ತಂಗಿದ್ದಾರೆಂದು ಕಂಡುಕೊಂಡಿದ್ದೇನೆ. ಪೊಲೀಸ್ ಭದ್ರತಾ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ. ವೈರಲ್ ವಿಡಿಯೋ ಶಾಸಕ ವಿನಯ್ ಶಾಕ್ಯಾ ಅವರ ಪುತ್ರಿ ರಿಯಾ ಶಾಕ್ಯಾ ಆರೋಪ ಆಧಾರ ರಹಿತವಾಗಿದೆ ಎಂದು ವರ್ಮಾ ಹೇಳಿದ್ದಾರೆ.
|
ದಿನಕ್ಕೊಬ್ಬರು ರಾಜೀನಾಮೆ
ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿ ತೊರೆದ ಕೆಲವೇ ಗಂಟೆಗಳ ನಂತರ, ಅವರಿಗೆ ನಿಕಟವಾಗಿರುವ ಇನ್ನೂ ನಾಲ್ವರು ಶಾಸಕರಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ರಾಜೀನಾಮೆಯನ್ನು ಘೋಷಿಸಿದರು. ಮೌರ್ಯ ಅವರು ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಜನವರಿ 14 ಅಥವಾ 15ರ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಸುತ್ತಿನ ಮತದಾನವನ್ನು ಫೆಬ್ರವರಿ 10 ರಂದು ನಿಗದಿಪಡಿಸಲಾಗಿದೆ. ಕೊನೆಯ ಹಂತದ ಮತದಾನ ಮಾರ್ಚ್ ರಂದು ನಡೆಯಲಿದ್ದು, ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.












Click it and Unblock the Notifications