ನಾಯಕತ್ವ ಬದಲಾವಣೆಯ ವದಂತಿಗಳ ಮಧ್ಯೆ ಕೊರೊನಾ ನಿರ್ವಹಣೆ ವಿಚಾರದಲ್ಲಿ ಆದಿತ್ಯನಾಥ್ಗೆ ಬೇಷ್ ಎಂದ ಬಿಜೆಪಿ
ಲಕ್ನೋ, ಜೂ. 02: ಉತ್ತರಪ್ರದೇಶಕ್ಕೆ ಬಿಜೆಪಿಯ ನಾಯಕರುಗಳು ಭೇಟಿ ನೀಡಿ ಮುಂದಿನ ವಿಧಾನಸಭೆ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದರು. ಹಾಗೆಯೇ ಕೊರೊನಾ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೊರೊನಾ ನಿರ್ವಹಣೆ ವಿಚಾರದಲ್ಲಿ ಉತ್ತರಪ್ರದೇಶದ ನಾಯಕತ್ವ ಬದಲಾವಣೆಯ ಬಗ್ಗೆ ವದಂತಿಗಳು ಹಬ್ಬಿದ್ದವು. ಏತನ್ಮಧ್ಯೆ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಬಿಜೆಪಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ಗೆ ಬೇಷ್ ಎಂದು ಹೇಳಿದೆ.
ಹೌದು, ಕೊರೊನಾವೈರಸ್ ಬಿಕ್ಕಟ್ಟನ್ನು ನಿಭಾಯಿಸಿ ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ಐದು ವಾರಗಳಲ್ಲಿಯೇ ಶೇ. 93 ರಷ್ಟು ಇಳಿಸಿದ ಕಾರಣಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ರನ್ನು ಕೊರೊನಾ ನಿರ್ವಹಣೆ ಪರಿಶೀಲನೆ ನಡೆಸಿದ ಬಿಜೆಪಿ ನಾಯಕರು ಹೊಗಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ''ಐದು ವಾರಗಳಲ್ಲಿ, ಯೋಗಿ ಆದಿತ್ಯನಾಥ್ರ ಉತ್ತರ ಪ್ರದೇಶದಲ್ಲಿ ಹೊಸ ದೈನಂದಿನ ಪ್ರಕರಣಗಳ ಸಂಖ್ಯೆ ಶೇ. 93 ರಷ್ಟು ಕಡಿಮೆಯಾಗಿದೆ'' ಎಂದು ಹೇಳಿದ್ದಾರೆ.

ಹಾಗೆಯೇ ''ನೆನಪಿಡಿ ಇದು 20 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಪುರಸಭೆಯ ಸಿಎಂಗಳು 1.5 ಕೋಟಿ ಜನಸಂಖ್ಯೆಯ ನಗರವನ್ನು ನಿರ್ವಹಿಸಲು ಸಾಧ್ಯವಾಗದಿರುವಾಗ, ಯೋಗಿಜಿ ಸಾಕಷ್ಟು ಪರಿಣಾಮಕಾರಿಯಾಗಿ ಕೊರೊನಾ ನಿರ್ವಹಿಸುತ್ತಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರಿಗೆ ಲಸಿಕೆ ನೀಡಲು ನಿರ್ಧರಿಸಿದೆ. ಮೂರನೇಯ ಅಲೆ ಬಂದರೆ ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಮುಂದಾಲೋಚನೆಯನ್ನು ಪರಿಗಣಿಸುವ ಬುದ್ಧಿವಂತ ಕ್ರಮ ಈ ಸರ್ಕಾರ ಕೈಗೊಂಡಿದೆ. ಮಕ್ಕಳನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳಲು ಪೋಷಕರು ಸುರಕ್ಷಿತವಾಗಿ ಸುತ್ತಲೂ ಇರುತ್ತಾರೆ'' ಎಂದು ಹೇಳಿದ್ದಾರೆ.

ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ನಿರ್ಣಾಯಕ ಚುನಾವಣೆ ಬಳಿಕ ಸಿಎಂ ಬದಲಾವಣೆಯ ವದಂತಿ ಹಬ್ಬಿದ್ದವು. ಆದರೆ ಯೋಗಿ ಕೊರೊನಾ ನಿರ್ವಹಣೆಯನ್ನು ಹೊಗಳುವ ಮೂಲಕ ಸಂತೋಷ್ ವಂದತಿಗೆ ತೆರೆ ಎಳೆದಿದ್ದಾರೆ.
ಕೋವಿಡ್ -19 ಬಿಕ್ಕಟ್ಟನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಟೀಕೆಗಳು ಹೆಚ್ಚಾಗುತ್ತಿದ್ದಂತೆ ಸಂತೋಷ್ ಮತ್ತು ಯುಪಿ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳ ಪರಿಶೀಲನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಹಾಗೂ ಇದರಿಂದಾಗಿ ಮುಂದಿನ ಚುನಾವಣೆಗೆ ಆಗುವ ಪರಿಣಾಮದ ಬಗ್ಗೆ ಚರ್ಚಿಸಿದ್ದಾರೆ.
ಯುಪಿಯ ಅನೇಕ ಜಿಲ್ಲೆಗಳ ಜನರ ಶವಗಳು ಗಂಗಾ ನದಿಯಲ್ಲಿ ತೇಲುತ್ತಿರುವ ಚಿತ್ರಗಳು ಅಂತರರಾಷ್ಟ್ರೀಯ ಪ್ರಕಟಣೆಗಳಿಗೆ ದಾರಿ ಮಾಡಿಕೊಟ್ಟಿದ್ದು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿದೆ.
ಪಕ್ಷದ ಶಾಸಕರು ಮತ್ತು ಸಂಸದರು ತಮ್ಮ ಸರ್ಕಾರದ ವಿರುದ್ದವೇ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಆದಿತ್ಯನಾಥ್ಗೆ ತಲೆ ನೋವಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲದೇ, ಇತ್ತೀಚೆಗೆ ಸೀತಾಪುರ (ಸದರ್) ಬಿಜೆಪಿ ಶಾಸಕ ರಾಕೇಶ್ ರಾಥೋಡ್ ಯೋಗಿ ಸರ್ಕಾರವು ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವುದನ್ನು ಟೀಕಿಸಿದರೆ ತಾನು ದೇಶದ್ರೋಹದ ಆರೋಪ ಎದುರಿಸಬೇಕಾಗುತ್ತದೆ ಎಂದು ಆತಂಕ ಕೂಡಾ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications