ಕಾಂಗ್ರೆಸ್ಸಿಗೆ ಅಮೇಥಿ, ರಾಯ್ ಬರೇಲಿಯನ್ನು ಭಿಕ್ಷೆ ಕೊಟ್ಟರೆ ಮಾಯಾವತಿ?
ಲಕ್ನೋ, ಜನವರಿ 12 : ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿ ಮೈತ್ರಿಕೂಟದಿಂದ ಹೊರಗಿಟ್ಟಿರುವ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರ ದೋಸ್ತಿ, ಕಾಂಗ್ರೆಸ್ಸಿನ ಎರಡು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ಸಿಗೆ ಬಳುವಳಿಯಾಗಿ ನೀಡಿರುವ ಆ ಎರಡು ಕ್ಷೇತ್ರಗಳೆಂದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಅಮೇಥಿ ಲೋಕಸಭೆ ಕ್ಷೇತ್ರ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರ.
ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!
ಕಾಂಗ್ರೆಸ್ ಜೊತೆ ಘಟಬಂಧನ ಮಾಡಿಕೊಳ್ಳದೆಯೆ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭೆ ಕ್ಷೇತ್ರಗಳನ್ನು ಆ ಪಕ್ಷಕ್ಕಾಗಿ ಬಿಟ್ಟುಕೊಟ್ಟಿದ್ದೇವೆ. ಏಕೆಂದರೆ, ಬಿಜೆಪಿ ಜನರು ಕಾಂಗ್ರೆಸ್ ಅಧ್ಯಕ್ಷರನ್ನು ಅವರ ಕ್ಷೇತ್ರದಲ್ಲಿಯೇ ತೊಂದರೆ ನೀಡಬಾರದೆಂದು ಅವೆರಡು ಕ್ಷೇತ್ರಗಳನ್ನು ಅವರಿಗೆ ಬಿಟ್ಟಿದ್ದೇವೆ ಎಂದಿದ್ದಾರೆ ಮಾಯಾವತಿ.
ಇಂದು ಮಾಯಾವತಿ-ಅಖಿಲೇಶ್ ಜಂಟಿ ಪತ್ರಿಕಾಗೋಷ್ಠಿ
ಒಟ್ಟು 80 ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳೆರಡು ತಲಾ 38 ಕ್ಷೇತ್ರಗಳಲ್ಲಿ ಸರಿಸಮನಾಗಿ ಸ್ಪರ್ಧಿಸುತ್ತಿವೆ. ಆದರೆ, ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಮಾತ್ರ ಸ್ಪರ್ಧಿಸದಿರಲು ನಿರ್ಧರಿಸಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಧಾರಾಳತನ ತೋರಿದ್ದಾರೆ. ಇದನ್ನು ಮಾಯಾವತಿ ಅವರು ಕಾಂಗ್ರೆಸ್ಸಿಗೆ ಕೊಟ್ಟ ಭಿಕ್ಷೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ರಾಹುಲ್ ಇದನ್ನು ಸವಾಲಾಗಿ ಸ್ವೀಕರಿಸಬೇಕು
ಇದನ್ನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸವಾಲಾಗಿ ಸ್ವೀಕರಿಸಬೇಕು ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ನಮಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಉಪಕಾರ ತೋರಬೇಕಾಗಿಲ್ಲ ಎಂದು ರಾಹುಲ್ ಗಾಂಧಿ ಅವರು ತಿರುಗೇಟು ನೀಡಬೇಕು. ಬೇಕಿದ್ದರೆ ಇವೆರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಂದು ಎರಡೂ ಪಕ್ಷಗಳಿಗೆ ಸವಾಲು ಒಡ್ಡಬೇಕು ಎಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಏಕೆ ಈ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಗೆಲ್ಲುವ ತಾಕತ್ತಿಲ್ಲವೆ?
ಇಂಡಿಯಾ ಟುಡೆ ಸಮೀಕ್ಷೆ: ಕೇರಳದಲ್ಲಿ ಅರಳುತ್ತಿದೆ ಕಮಲ, ಆದರೆ ಪ್ರಧಾನಿ ರೇಸಲ್ಲಿ ಈಗಲೂ ಮುಂದೆ ರಾಹುಲ
2014ರ ಚುನಾವಣೆಯಲ್ಲಿ ಭರ್ಜರಿ ಜಯ
ಅಮೇಥಿಯಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಸ್ಪರ್ಧಿಸಿದರೂ ಅಷ್ಟೇ ಬಿಟ್ಟರೂ ಅಷ್ಟೇ, ಅಲ್ಲಿ ಆ ಪಕ್ಷಕ್ಕೆ ಅಂತಹ ಅಸ್ತಿತ್ವವೇ ಇಲ್ಲ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು 408,651 ಮತಗಳನ್ನು ಪಡೆದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸ್ಮೃತಿ ಜುಬಿನ್ ಇರಾನಿ (300,748 ಮತಗಳು) ಅವರನ್ನು ಹೆಚ್ಚೂಕಡಿಮೆ 1 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಸ್ಮೃತಿ ಅವರು ಸಾಕಷ್ಟು ಹೋರಾಟ ತೋರಿದ್ದರು. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಕೇವಲ 57,716 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದರು.
ಎಸ್ಪಿ-ಬಿಎಸ್ಪಿ ಅಭ್ಯರ್ಥಿ ಅಮೇಥಿ, ರಾಯ್ಬರೇಲಿಯಲ್ಲಿ ಸ್ಪರ್ಧಿಸೋಲ್ಲ!
ಅಮೇಥಿಯಲ್ಲಿ ಸ್ಮೃತಿ ಇರಾನಿ ಮಿಂಚಿನ ಸಂಚಾರ
ಆದರೆ ಅಮೇಥಿಯಲ್ಲಿ ಈ ಬಾರಿ ಸನ್ನಿವೇಶ ವಿಭಿನ್ನವಾಗುವ ಸಾಧ್ಯತೆಯಿದೆ. ಏಕೆಂದರೆ, ಹಿಂದಿನ ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಸ್ಮೃತಿ ಇರಾನಿ ಅವರು ಈಗಾಗಲೆ ಅಮೇಥಿ ಕ್ಷೇತ್ರದಲ್ಲಿ ಮಿಂಚಿನಂತೆ ಸಂಚಾರ ಮಾಡುತ್ತಿದ್ದು, ರಾಹುಲ್ ಕ್ಷೇತ್ರದಲ್ಲಿ ನಡೆಯದ ಅಭಿವೃದ್ಧಿಯನ್ನು ಎತ್ತೆತ್ತಿ ತೋರಿಸುತ್ತಿದ್ದಾರೆ ಮತ್ತು ಕೆಲ ಅಭಿವೃದ್ಧಿ ಕಾರ್ಯಗಳಿಗೂ ಮುಂದಾಗಿದ್ದಾರೆ. ಅಲ್ಲದೆ, ಬಿಜೆಪಿ ಇಲ್ಲಿ ಸೋಲಲೇಬೇಕಿರುವುದು ಮಾಯಾವತಿಗೂ ಬೇಕಿರುವುದರಿಂದ, ತಮ್ಮ ಪಕ್ಷ ಸ್ಪರ್ಧಿಸಿದರೆ ಮತಗಳು ಒಡೆದು ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆ ಇರುವುದರಿಂದ, ಅಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಇದು ಒಂದು ರೀತಿ ರಾಹುಲ್ ಗಾಂಧಿ ಅವರಿಗೆ ಅನುಕೂಲವಾಗುವ ಸಾಧ್ಯತೆ ಇದ್ದರೂ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಅವಮಾನ ಮಾಡಿದ್ದಾರೆ ಮಾಯಾವತಿ ಮತ್ತು ಅಖಿಲೇಶ್.
ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ
ರಾಹುಲ್ ಬೇರೆ ಕ್ಷೇತ್ರ ಆರಿಸಿಕೊಳ್ಳುವರೆ?
ಈ ಕಾರಣದಿಂದಾಗಿಯೇ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಈ ಬಾರಿ ಸ್ಪರ್ಧಿಸದೆ, ಮಹಾರಾಷ್ಟ್ರದ ಕ್ಷೇತ್ರವೊಂದರಿಂದ ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿವೆ. ಇದನ್ನು ಪಲಾಯನವಾದ ಎಂದು ಕೂಡ ಜರಿಯಲಾಗುತ್ತಿದೆ. ಆದರೆ, ಅಮೇಥಿಯಲ್ಲಿ ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಸೋತ ಇತಿಹಾಸವಿಲ್ಲ. ಆದರೂ ಪಲಾಯನ ಏಕೆ ಎಂಬ ಮಾತಿಗೆ ಉತ್ತರವಿಲ್ಲ. ಕೆಲ ತಿಂಗಳ ಹಿಂದೆ ಇಲ್ಲೇಕೆ ಅಷ್ಟು ಅಭಿವೃದ್ಧಿಯಾಗಿಲ್ಲ ಎಂದು ಜನರು ಕೇಳಿದ ಪ್ರಶ್ನೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೇಳಿ ಎಂದು ಉತ್ತರ ಕೊಟ್ಟಿದ್ದರು. ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಆಯಾ ಸಂಸದನ ಜವಾಬ್ದಾರಿಯಲ್ಲವೆ?
ಸೋನಿಯಾ ಈ ಬಾರಿ ಬರೇಲಿಯಲ್ಲಿ ಸ್ಪರ್ಧಿಸುವರೆ?
ಇನ್ನು ರಾಯ್ ಬರೇಲಿಯಲ್ಲಂತೂ ಕಾಂಗ್ರೆಸ್ಸಿಗೆ ಸ್ಪರ್ಧೆಯೇ ಇಲ್ಲ. ಸೋನಿಯಾ ಗಾಂಧಿ (526,434 ಮತಗಳು) ಅವರು ಕಳೆದ ಚುನಾವಣೆಯಲ್ಲಿ ಸಮೀಪದ ಸ್ಪರ್ಧಿ ಬಿಜೆಪಿಯ ಅಜಯ್ ಅಗರವಾಲ್ (173,721 ಮತಗಳು) ಅವರನ್ನು ಮೂರುವರೆ ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಸೋಲಿಸಿ ಭರ್ಜರಿ ಜಯ ಗಳಿಸಿದ್ದರು. ಇನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಪ್ರವೇಶ್ ಸಿಂಗ್ ಪಡೆದಿದ್ದು 63,633 ಮತಗಳು. ಇವೆರಡು ಕ್ಷೇತ್ರಗಳಲ್ಲಿ ಮತ್ತೆ ಸ್ಪರ್ಧಿಸಿ ಹೀನಾಯವಾಗಿ ಸೋಲುವುದಕ್ಕಿಂತ ಅಭ್ಯರ್ಥಿ ನಿಲ್ಲಿಸದೆ ರಾಹುಲ್ ಅವರ ಪ್ರೀತಿ ಗೆಲ್ಲಬೇಕೆಂಬುದು ಮಾಯಾವತಿ ಅವರ ಜಾಣ ತರ್ಕ. ಆದರೆ, ರಾಯ್ ಬರೇಲಿ ಕ್ಷೇತ್ರದಲ್ಲಿ 73 ವರ್ಷಗಳ ಹಿರಿಯ ನಾಯಕಿ, ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಾರಾ ಇಲ್ಲವಾ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.