ಮತ್ತೆ ವಿವಾದದ ಕಿಡಿಯೆಬ್ಬಿಸಿರುವ 'ಖಾಮೋಶ್' ಶತ್ರುಘ್ನ ಸಿನ್ಹಾ
ನವದೆಹಲಿ, ಏಪ್ರಿಲ್ 25 : ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದ ಮಾಜಿ ನಟ ಶತ್ರುಘ್ನ ಸಿನ್ಹಾರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಎಂಥ ಪ್ರಮಾದ ಎಸಗಿದ್ದೇವೆ ಎಂದು ರಾಹುಲ್ ಗಾಂಧಿ ಅವರಿಗೆ ಈಗ ಅರಿವಾಗುತ್ತಿರಬಹುದು.
ಸೆರಗಿನ ಕೆಂಡದಂಥಿರುವ ನಟ ಕಾಂಗ್ರೆಸ್ ಸೇರಿಕೊಂಡಿದ್ದರೂ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದಲ್ಲದೆ, ಇದೀಗ ಕಾಂಗ್ರೆಸ್ಸಿಗೇ ಮುಜುಗರವಾಗುವಂಥ ಡೈಲಾಗನ್ನು ಭರ್ಜರಿಯಾಗಿ ಹೊಡೆದು ಸಮಾಜವಾದಿ ಪಕ್ಷದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅದರ ಮೈತ್ರಿಪಕ್ಷವಾಗಿರುವ ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಅವರು ಅರ್ಹ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷದ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ಉತ್ತರ ಪ್ರದೇಶವನ್ನು ಯಶಸ್ವಿಯಾಗಿ ಯಾರೇ ಆಳಿದ್ದರೂ ಅವರು ಪ್ರಧಾನಿ ಪಟ್ಟಕ್ಕೆ ಅರ್ಹರಾಗಿರುತ್ತಾರೆ ಎಂಬುದು ಅವರ ವಾದ. ಇದೇ ಮಾತು ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ಸಿನ ಸ್ಥಳೀಯ ನಾಯಕರು ಇದರಿಂದ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಇವರು ಕಾಂಗ್ರೆಸ್ ನಾಯಕರನ್ನು ಸಮರ್ಥಿಸುತ್ತಿಲ್ಲ, ಅಲ್ಲದೆ ವಿರೋಧಿಗಳ ನಾಯಕರನ್ನು ಅಟ್ಟಕ್ಕೇರಿಸುತ್ತಿದ್ದಾರೆ ಎಂದು ಅವರ ಆರೋಪ. ಬಿಜೆಪಿಯಲ್ಲಿ ನಡೆಸಿದ್ದ ಚಾಳಿಯನ್ನು ಶತ್ರುಘ್ನ ಸಿನ್ಹಾ ಕಾಂಗ್ರೆಸ್ಸಿನಲ್ಲಿಯೂ ಮುಂದುವರಿಸಿದ್ದಾರೆ. ಇದನ್ನು ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿರುವ ಪ್ರಿಯಾಂಕಾ ವಾದ್ರಾ ಹೇಗೆ ನಿಭಾಯಿಸುತ್ತಾರೋ?

ಅಖಿಲೇಶ್, ಮಾಯಾ ಪ್ರಧಾನಿಗೆ ಅರ್ಹ
ಬಿಹಾರದಲ್ಲಿ ಜೆಡಿಯು ನಾಯಕ ನಿತಿಶ್ ಕುಮಾರ್ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಹೀಗಾಗಿ ಅವರು ಪ್ರಧಾನಿ ಪಟ್ಟಕ್ಕೆ ಅರ್ಹ ಅಭ್ಯರ್ಥಿ. ಹಾಗೆಯೇ, ಉತ್ತರ ಪ್ರದೇಶದಲ್ಲಿ ಕೂಡ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಕೂಡ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರೂ ಪ್ರಧಾನಿ ಪಟ್ಟಕ್ಕೆ ಅರ್ಹ ಅಭ್ಯರ್ಥಿಗಳಾಗಿದ್ದಾರೆ ಎಂಬುದು ಸಿನ್ಹಾ ತರ್ಕ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರೂ ಏನು ಕೆಲಸ ಮಾಡಿದ್ದಾರೆ? ಎಂದು ಶತ್ರುಘ್ನ ಸಿನ್ಹಾ ಪ್ರಶ್ನಿಸಿರುವುದು ಯಾವುದೇ ತರ್ಕಕ್ಕೆ ಸಿಗಲಾರದ ಮಾತು! ಪುಣ್ಯಕ್ಕೆ ರಾಹುಲ್ ಗಾಂಧಿ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆಯನ್ನು ಅವರು ಬಿಸಾಕಿಲ್ಲ.

ಅಕ್ಕಿ, ಮೋದಿ ಸಂದರ್ಶನ ಸ್ಕ್ರಿಪ್ಟೆಡ್
ಮೋದಿಯವರ ಜೊತೆ ಚಿತ್ರನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದ ಬಗ್ಗೆ ವಾಗ್ದಾಳಿ ಮಾಡಿರುವ ಶತ್ರುಘ್ನ ಸಿನ್ಹಾ ಅವರು, ಎಲ್ಲ ರಿಹರ್ಸಲ್ ಗಳನ್ನು ಮಾಡಿ, ಸ್ಕ್ರಿಪ್ಟ್ ಬಳಸಿ ಸಂದರ್ಶನ ಮಾಡಲಾಗಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ನನ್ನಂಥಹ ಸಾಮಾನ್ಯ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ, ಮೋದಿ ಎಂಬ ಅಲೆಯೇಳುವಂತೆ ಮಾಡಿದ್ದು. ನಾನಿದೆಲ್ಲವನ್ನೂ ನೋಡಿದ್ದೇನೆ. ಈ ಆಟಗಳೆಲ್ಲವೂ ನನಗೆ ಚೆನ್ನಾಗಿ ಗೊತ್ತು ಎಂದು 'ಕಾಳಿ ಚರಣ್' ಖ್ಯಾತಿಯ ಮಾಜಿ ನಟ ಅಬ್ಬರಿಸಿದ್ದಾರೆ. ಮತ್ತೊಂದೆಡೆ ಸಂದರ್ಶನದ ಸರಳತೆಯ ಬಗ್ಗೆ ಮತ್ತು ಮೋದಿ ಅವರ ಉತ್ತರಗಳ ಬಗ್ಗೆ ಪ್ರಶಂಸೆಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ವಿರುದ್ಧ, ಪತ್ನಿ ಪರ ಪ್ರಚಾರ
ಇಷ್ಟು ಸಾಲದೆಂಬಂತೆ, ಶತ್ರುಘ್ನ ಸಿನ್ಹಾ ಅವರ ಹೆಂಡತಿ ಪೂನಂ ಸಿನ್ಹಾ ಅವರು ಇತ್ತೀಚೆಗೆ ಸಮಾಜವಾದಿ ಪಕ್ಷ ಸೇರಿದ್ದು, ಅವರು ಲಕ್ನೋದಿಂದ ಕಾಂಗ್ರೆಸ್ ಅಭ್ಯರ್ಥಿ ಆಚಾರ್ಯ ಪ್ರಮೋದ್ ಕೃಷ್ಣಂ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಇಲ್ಲಿ ಕೂಡ ಕಾಂಗ್ರೆಸ್ ವಿರುದ್ಧ, ಪತ್ನಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಪ್ರಶ್ನಿಸಿದಾಗ, ನನಗೆ ಕಾಂಗ್ರೆಸ್ ಮೇಲೆ ಪ್ರೀತಿ ಇದ್ದರೂ, ನನಗೆ ಕುಟುಂಬವೇ ಮೊದಲು, ಪಕ್ಷ ನಂತರ, ಖಾಮೋಶ್ ಎಂದು ಮತ್ತೊಂದು ಮಾತಿನಗುಂಡು ಸಿಡಿಸಿದ್ದಾರೆ.

ಮೈತ್ರಿಯಿಂದ ಹೊರಗಿಟ್ಟು ಕಾಂಗ್ರೆಸ್ಸಿಗೆ ಅವಮಾನ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಲು ಕಾರಣವೂ ಇಲ್ಲದಿಲ್ಲ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಮೈತ್ರಿ ಮಾಡಿಕೊಂಡಾಗ, ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟು ಕಾಂಗ್ರೆಸ್ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ. ಈ ಕಾರಣದಿಂದಾಗಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸುವಂತಾಗಿದೆ. ಅಖಿಲೇಶ್ ಅವರು ರಾಹುಲ್ ಗಾಂಧಿ ಪರವಾಗಿಯೇ ಮಾತನಾಡುತ್ತಿದ್ದರೂ, ಮಾಯಾವತಿ ಅವರು ರಾಹುಲ್ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಒಳಜಗಳಗಳ ಲಾಭ ಪಡೆಯಲು ಬಿಜೆಪಿಗೆ ಸುವರ್ಣಾವಕಾಶ ಲಭಿಸಿದಂತಾಗಿದೆ.

ಮಾಯಾವತಿಗೆ ಸಿಕ್ಕಿದ್ದು ಸೊನ್ನೆ
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಇರುವ 80 ಸೀಟುಗಳಲ್ಲಿ ಬಿಜೆಪಿ 71 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಭಾರೀ ಮುಖಭಂಗ ಅನುಭವಿಸಿದ್ದವು. ಸಮಾಜವಾದಿ ಪಕ್ಷ ಕೇವಲ 5 ಸೀಟು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈಗ ಭಾರೀ ಅಟ್ಟಹಾಸದಿಂದ ಮೆರೆದಾಡುತ್ತಿರುವ ಮಾಯಾವತಿ ಅವರು ಗೆದ್ದಿದ್ದು ಆನೆ ಲದ್ದಿ ಮಾತ್ರ. ಆದರೆ, ಈ ಬಾರಿ ಬಿಜೆಪಿ ವಿರುದ್ಧ ವಿರೋಧಿಗಳೆಲ್ಲ ಒಗ್ಗಟ್ಟಿನಿಂದ ಸ್ಪರ್ಧಿಸಿದರೆ ಉತ್ತಮ ಸಾಧನೆ ತೋರಬಹುದು ಎಂದು ಸಮೀಕ್ಷೆಗಳು ಹೇಳಿವೆ. ಆದರೂ, ಬಾಲಕೋಟ್ ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜನಪ್ರಿಯತೆ ಮತ್ತೆ ಉತ್ತುಂಗಕ್ಕೇರಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications