ಪ್ರಿಯಾಂಕಾ ವಾದ್ರಾ ಮೇಲೆ ಅಖಿಲೇಶ್ ಯಾದವ್ ಕೆಂಡಾಮಂಡಲ
Recommended Video
ಲಕ್ನೋ, ಮೇ 02 : ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಮತಗಳನ್ನು ಕೀಳುವ ಉದ್ದೇಶದಿಂದಲೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂಬ ಪ್ರಿಯಾಂಕಾ ವಾದ್ರಾ ಅವರ ಮಾತನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ತೀವ್ರವಾಗಿ ಟೀಕಿಸಿದ್ದಾರೆ.
"ನನಗೆ ಅವರ ಈ ಮಾತುಗಳಲ್ಲಿ ಯಾವುದೇ ನಂಬಿಕೆಯಿಲ್ಲ. ಉತ್ತರ ಪ್ರದೇಶದಲ್ಲಿ ಎಲ್ಲೇ ಆಗಲಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಇಂಥ ಕೆಲಸ ಯಾವುದೇ ಪಕ್ಷವೂ ಮಾಡುವುದಿಲ್ಲ. ಆದರೆ, ಇಡೀ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ಹೀಗಾಗಿ ಏನೇನೋ ಸಬೂಬು ಹೇಳುತ್ತಿದ್ದಾರೆ" ಎಂದು ಅಖಿಲೇಶ್ ಯಾದವ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಾಕ್ ಪ್ರಹಾರ ಮಾಡಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಪ್ರಿಯಾಂಕಾ ವಾದ್ರಾ ಅವರು ರಾಯ್ ಬರೇಲಿಯಲ್ಲಿ ಬುಧವಾರ ಪ್ರಚಾರ ಮಾಡುತ್ತ, "ಎಲ್ಲೆಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಿದೆಯೋ ಅಲ್ಲೆಲ್ಲ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಎಲ್ಲೆಲ್ಲಿ ಗೆಲ್ಲಲು ಸಾಧ್ಯವಿಲ್ಲವೋ, ಅಲ್ಲೆಲ್ಲ ಬಿಜೆಪಿಯ ಮತಗಳನ್ನು ನುಂಗಿ ಹಾಕಲೆಂದು ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ" ಎಂದು ಹೇಳಿದ್ದರು.
ಯೋಗಿ ಆದಿತ್ಯನಾಥ್ ಬಳಿ ದೂರು ಹೇಳಲು ಬಂದ ಗೂಳಿ!
ಇದಕ್ಕೆ ಸಮಾಜವಾದಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಕೂಟವನ್ನು ಗೆಲ್ಲಿಸುವ ಉದ್ದೇಶದಿಂದ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂಬರ್ಥದಲ್ಲಿ ಪ್ರಿಯಾಂಕಾ ವಾದ್ರಾ ಅವರು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗುವುದಕ್ಕೆ ಮುನ್ನವೇ ಕಾಂಗ್ರೆಸ್ಸನ್ನು ಮೈತ್ರಿಕೂಟ ಮೂಲೆಗುಂಪು ಮಾಡಿತ್ತು.
ಕಾಂಗ್ರೆಸ್ಸಿಗೂ ಬಿಜೆಪಿಗೂ ವ್ಯತ್ಯಾಸವೇ ಇಲ್ಲ
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಮೈತ್ರಿಕೂಟ ಕಾಂಗ್ರೆಸ್ಸಿನ 'ಬಿ ಟೀಮ್' ಎಂದು ಚುನಾವಣಾ ಪಂಡಿತರು ವಿಶ್ಲೇಷಿಸಿದ್ದಕ್ಕೂ ಅಖಿಲೇಶ್ ಅವರು ಕೆಂಡ ಕಾರಿದ್ದಾರೆ. "ಉತ್ತರ ಪ್ರದೇಶದಲ್ಲಿ ಭಾರತದ ಅತ್ಯಂತ ಪುರಾತನ ಪಕ್ಷವಾದ ಕಾಂಗ್ರೆಸ್ಸಿಗೂ ಬಿಜೆಪಿಗೂ ವ್ಯತ್ಯಾಸವೇ ಇಲ್ಲ. ಬಿಜೆಪಿಗೆ ಲಾಭ ತಂದುಕೊಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ" ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ. ನೇತಾಜಿ (ಮುಲಾಯಂ ಸಿಂಗ್ ಯಾದವ್) ಮತ್ತು ನನ್ನ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವ್ಯಕ್ತಿ ಲಕ್ನೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದಾಗ ಹಾಜರಿದ್ದ ಎಂದು ಅಖಿಲೇಶ್ ಯಾದವ್ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಮ್ಮನ್ನು ವಂಚಿಸಿದೆ: ಅಖಿಲೇಶ್ ಯಾದವ್ ಆರೋಪ
ಬಿಜೆಪಿ ಕೆಟ್ಟ ನೀತಿಗಳಿಗೆ ಮೈತ್ರಿ ಮಂಗಳ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವನ್ನು ಆಡಳಿದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಹಿಡಿತದಲ್ಲಿ ಇರಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೂ ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಯಾರೂ ನಿಯಂತ್ರಿಸುವುದಿಲ್ಲ. ನಾವೊಂದು ರಾಜಕೀಯ ಪಕ್ಷ. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳಗಳ ಮೈತ್ರಿಕೂಡ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬಾರೀ ಹೊಡೆತ ನೀಡಲಿದೆ ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ. ಬಿಜೆಪಿಯ ಎಲ್ಲ ಕೆಟ್ಟ ನೀತಿಗಳಿಗೆ ಮೈತ್ರಿಕೂಡ ಮಂಗಳ ಹಾಡಲಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
80 ಸೀಟುಗಳಲ್ಲಿ ಅತ್ಯಧಿಕ ಸೀಟುಗಳನ್ನು ಮೈತ್ರಿಕೂಟ ಕಬಳಿಸಲಿದೆ. ಇದು ಅರಿವಿಗೆ ಬರುತ್ತಿದ್ದಂತೆಯೇ ಚುನಾವಣಾ ಸಮಾವೇಶಗಳಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಬಿಜೆಪಿ ನಾಯಕರು ಮಾತಾಡುವುದನ್ನು ನಿಲ್ಲಿಸಿದ್ದಾರೆ. ಬದಲಿಗೆ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ತಿ ವಿವರ
ಬಿಜೆಪಿ ಸೋತರೆ ಯಾರು ಪ್ರಧಾನಿ?
ಹಲವಾರು ರಾಜ್ಯಗಳಲ್ಲಿ ಮಾಡಿಕೊಳ್ಳಲಾಗಿರುವ ಮೈತ್ರಿಕೂಟಗಳಲ್ಲಿ (ಮಹಾಘಟಬಂಧನ್ ದಲ್ಲಿ) ಹಲವಾರು ನಾಯಕರು ಇದ್ದಾರೆ. ಆದರೆ, ಬಿಜೆಪಿಯಲ್ಲಿ ಯಾರಿದ್ದಾರೆ? ನಮ್ಮ ಮಹಾಘಟಬಂಧನ್ ದಿಂದಲೇ ಹೊಸ ಪ್ರಧಾನಿ ಹೊರಹೊಮ್ಮಲಿದ್ದಾರೆ. ಅಂತಿಮ ಫಲಿತಾಂಶ ಹೊರಬಿದ್ದ ನಂತರ ಮಹಾಘಟಬಂಧನದ ಪರವಾಗಿ ಯಾರು ಪ್ರಧಾನಿ ಆಗಲಿದ್ದಾರೆ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಮಹಾಘಟಬಂಧನದ ಪರವಾಗಿ ಯಾರು ಪ್ರಧಾನಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ಮೇಲಿನಂತೆ ಅಖಿಲೇಶ್ ಉತ್ತರಿಸಿದರು. ಈ ಮೊದಲು ಹೇಳಿದಂತೆ ಮಾಯಾವತಿ ಅವರು ಪ್ರಧಾನಿ ಆಗಲಿದ್ದಾರೆ ಎಂಬ ಮಾತನ್ನು ಅವರು ಪುನರುಚ್ಚರಿಸಲಿಲ್ಲ.
ನಮ್ಮ ಲಕ್ಷ್ಯ 2022ರ ಚುನಾವಣೆಯ ಮೇಲೆ
ರಾಷ್ಟ್ರ ರಾಜಕಾರಣದಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆ ಬಂದಾಗ, ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರದಲ್ಲಿ ಪಕ್ಷದ ಪರ ಹೆಚ್ಚು ಕೊಡುಗೆ ನೀಡಲು ಪಕ್ಷ ನಿರ್ಧರಿಸಿದೆ. ನಮ್ಮ ಮುಂದಿನ ಲಕ್ಷ್ಯವೇನಿದ್ದರೂ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲಿದೆ. ಸದ್ಯಕ್ಕೆ ಲೋಕಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ನೀಡುವುದರ ಮೇಲಿದೆ. ಹೊಸ ಸರಕಾರ ರಚನೆಯಲ್ಲಿ ಸಮಾಜವಾದಿ ಪಕ್ಷದ ಕೈವಾಡವಿರಬೇಕು, ಹೊಸ ಪ್ರಧಾನಿ ಆಯ್ಕೆಯಲ್ಲಿ ನಾನೂ ಭಾಗವಹಿಸುವಂತಾಗಬೇಕು ಎಂದು ಅಖಿಲೇಶ್ ಅವರು ಮುಗುಮ್ಮಾಗಿ ಹೇಳಿದರು.
ನೇತಾಜಿ ಹಿಂದಿನ ಕಾಲದ ನಾಯಕರು
ಒಂದೆಡೆ ತಾವು ಪ್ರಧಾನಿ ನರೇಂದ್ರ ಮೋದಿಯವರ ತೀವ್ರ ಟೀಕಾಕಾರರಾಗಿದ್ದರೆ, ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಮೋದಿಯವರನ್ನು ವಾಚಾಮಗೋಚರವಾಗಿ ಹೊಗಳುತ್ತಿರುವ ಬಗ್ಗೆ ಕೇಳಿದಾಗ, ನೇತಾಜಿಯವರು ಹಿಂದಿನ ಕಾಲದ ನಾಯಕರು. ಅವರು ಎಲ್ಲ ಪಕ್ಷಗಳ ಎಲ್ಲ ಹಿರಿಯ ನಾಯಕರಿಗೆ ಗೌರವ ನೀಡುತ್ತಾರೆ. ಆದರೆ, ಬಿಜೆಪಿ ನಾಯಕರಲ್ಲಿ ಇತರ ಪಕ್ಷಗಳ ನಾಯಕರ ಬಗ್ಗೆ ಈರೀತಿ ವರ್ತನೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಲೋಕಸಭೆಯ ಕಡೆಯ ಕಲಾಪದಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ನರೇಂದ್ರ ಮೋದಿ ನಾಯಕತ್ವವನ್ನು, ಅವರ ಪಕ್ಷದವರಿಗೇ ಮುಜುಗರವಾಗುವಂತೆ ಹೊಗಳಿದ್ದರು ಮತ್ತು ಮೋದಿಯವರೇ ಇನ್ನೊಂದು ಬಾರಿ ಪ್ರಧಾನಿಯಾಗಲಿ ಎಂದು ಆಶಿಸಿದ್ದರು.
ತೇಜ್ ನಾಮಪತ್ರ ತಿರಸ್ಕೃತವಾಗಿದ್ದರ ಬಗ್ಗೆ
ತಮ್ಮ ಪಕ್ಷದ ಅಭ್ಯರ್ಥಿ ಮತ್ತು ನರೇಂದ್ರ ಮೋದಿಯವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್ ಬಹಾದೂರ್ ಅವರ ನಾಮನಿರ್ದೇಶನ ತಿರಸ್ಕೃತವಾಗಿರುವ ಬಗ್ಗೆ ಕೇಳಿದಾಗ, ಸೂಕ್ತ ದಾಖಲೆಗಳನ್ನು ಪೂರೈಸಲು ರಿಟರ್ನಿಂಗ್ ಆಫೀಸರ್ ಅವರು ಸಾಕಷ್ಟು ಸಮಯಾವಕಾಶ ನೀಡಲಿಲ್ಲ ಎಂದು ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಸೇನೆಯಿಂದ ವಜಾ ಆಗಿರುವ ತೇಜ್ ಬಹಾದೂರ್ ಅವರಿಗೆ, ಕೇಂದ್ರ ಚುನಾವಣಾ ಆಯೋಗದಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್' ಸಲ್ಲಿಸಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ತೇಜ್ ಬಹಾದೂರ್ ಅವರು ಪ್ರಮಾಣಪತ್ರ ಸಲ್ಲಿಸಲು ವಿಫಲವಾಗಿದ್ದರಿಂದ ಅವರ ನಾಮಪತ್ರ ವಜಾಗೊಂಡಿದೆ.