ಯುಪಿಯಲ್ಲಿ ಮಳೆ-ಸಂಬಂಧಿತ ಘಟನೆಗಳಲ್ಲಿ 22 ಸಾವು: ಕೆಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಅಪಾರ ಹಾನಿಯನ್ನುಂಟುಮಾಡಿದೆ. ಶುಕ್ರವಾರ ರಾಜ್ಯದಲ್ಲಿ ಸುರಿದ ಅಧಿಕ ಮಳೆಗೆ 22 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೆ ಭಾರತೀಯ ಹವಾಮಾನ ಇಲಾಖೆ ಶನಿವಾರದಂದು ರಾಜ್ಯದ ಪೂರ್ವ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. "ಸೆ17ರಂದು ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ" ಎಂದು IMD ಹೇಳಿದೆ.
ನಿನ್ನೆ ಲಕ್ನೋದಲ್ಲಿ ನಿರ್ಮಾಣ ಹಂತದ ಗೋಡೆಯೊಂದು ಗುಡಿಸಲುಗಳ ಮೇಲೆ ಕುಸಿದು ಬಿದ್ದ ಪರಿಣಾಮ ಒಂಬತ್ತು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿಯಾದರು. ಮೃತ ಒಂಬತ್ತು ಮಂದಿ ಝಾನ್ಸಿ ಜಿಲ್ಲೆಯವರು. ಗಾಯಾಳುಗಳನ್ನು ಡಾ.ಶ್ಯಾಮ ಪ್ರಸಾದ್ ಮುಖರ್ಜಿ (ಸಿವಿಲ್) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಧನಸಹಾಯವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಇನ್ನೂ ಉನ್ನಾವ್ (ಐದು), ಫತೇಪುರ್ (ಮೂರು), ಪ್ರಯಾಗ್ರಾಜ್ (ಎರಡು), ಸೀತಾಪುರ, ರಾಯ್ಬರೇಲಿ ಮತ್ತು ಝಾನ್ಸಿ (ತಲಾ ಒಬ್ಬರು) 13 ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?
ಗುರುವಾರದಿಂದ ರಾಜ್ಯದಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ರಾಜ್ಯವು ಶುಕ್ರವಾರ 32.2 ಮಿ.ಮಿ ಸರಾಸರಿ ಮಳೆಯನ್ನು ದಾಖಲಿಸಿದೆ. ಇದು LPA (ದೀರ್ಘ ಅವಧಿಯ ಸರಾಸರಿ) 6.1 ಮಿಮಿ ಗಿಂತ 428% ಹೆಚ್ಚಾಗಿದೆ. ಇನ್ನೂ ರಾಜ್ಯದ 75 ಜಿಲ್ಲೆಗಳ ಪೈಕಿ 74 ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ.
ಬಾರಾಬಂಕಿ (192.7 ಮಿಮೀ), ಲಕ್ನೋ (116.9 ಮಿಮೀ), ಮೌ (110 ಮಿಮೀ), ಬಹ್ರೈಚ್ (108 ಮಿಮೀ), ಡಿಯೋರಿಯಾ (78.5 ಮಿಮೀ) ಬಲರಾಮ್ಪುರ (64 ಮಿಮೀ), ಬಲ್ಲಿಯಾ (63.9 ಮಿಮೀ), ಲಖಿಂಪುರ ಖೇರಿ (58.7 ಮಿಮೀ), ಝಾನ್ಸಿ (51), ಉನ್ನಾವ್ (14.7 ಮಿ.ಮೀ) ಮತ್ತು ಪ್ರಯಾಗ್ರಾಜ್ (8.4 ಮಿ.ಮೀ)ನಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲಾಗಿದೆ.

ಎಲ್ಲೆಲ್ಲಿ ಮಳೆ?
ಚಾಂದೌಲಿ, ವಾರಣಾಸಿ, ಘಾಜಿಪುರ, ಬಲ್ಲಿಯಾ, ಲಕ್ನೋ, ಅಮೇಥಿ, ರಾಂಪುರ, ಬರೇಲಿ, ಷಹಜಹಾನ್ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಪ್ರಾದೇಶಿಕ ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಈ ಪ್ರದೇಶಗಳಲ್ಲಿ ಹಳದಿ ಎಚ್ಚರಿಕೆಯನ್ನು ಘೋಷಿಸಲಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳಿಂದ ದೂರವಿರಲು ಜನರಿಗೆ ಸೂಚಿಸಿದೆ.

ಪಾಲ್ಘರ್, ಥಾಣೆಗೆ ಆರೆಂಜ್ ಎಚ್ಚರಿಕೆ
ಶುಕ್ರವಾರ ಬೆಳಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಪ್ರತ್ಯೇಕ ಸ್ಥಳದಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂಬೈನಲ್ಲಿ ರಾತ್ರಿಯಿಡೀ ಅಧಿಕ ಮಳೆ ಸುರಿದಿದೆ. ನೆರೆಯ ಥಾಣೆ ನಗರದಲ್ಲಿ ಬೆಳಗ್ಗೆ 8:30 ರಿಂದ 12 ಗಂಟೆಗಳಲ್ಲಿ 97.77 ಮಿಮೀ ಮಳೆ ದಾಖಲಾಗಿದೆ ಎಂದು ಸ್ಥಳೀಯ ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆರೆಯ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು 'ಆರೆಂಜ್' ಎಚ್ಚರಿಕೆಯನ್ನು ನೀಡಿದೆ. ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಮಳೆಯ ತೀವ್ರತೆಯು ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

10 ವರ್ಷಗಳಲ್ಲಿ ಹೆಚ್ಚು ತಂಪಾದ ದೆಹಲಿ
ದೆಹಲಿಯು ಕಳೆದ 10 ವರ್ಷಗಳಲ್ಲಿ ಸೆಪ್ಟೆಂಬರ್ನಲ್ಲಿ ಅತ್ಯಂತ ತಂಪಾದ ದಿನವನ್ನು ಶುಕ್ರವಾರ ದಾಖಲಿಸಿದೆ. IMD ಯ ಪ್ರಕಾರ, ಗಾಳಿಯೊಂದಿಗೆ ಮಳೆಯು ರಾಷ್ಟ್ರ ರಾಜಧಾನಿಯಲ್ಲಿ ಪಾದರಸವನ್ನು ಕಡಿಮೆಗೊಳಿಸಿದೆ. ಇದರ ಪರಿಣಾಮವಾಗಿ ಜನರಿಗೆ ಬಿಸಿಲಿನ ಶಾಖದಿಂದ ರಿಲೀಫ್ ಸಿಕ್ಕಂತಾಗಿದೆ.
ಶನಿವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್17 ರಂದು ಉತ್ತರಾಖಂಡ ಮತ್ತು ಉತ್ತರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದರ ಪ್ರಭಾವದಲ್ಲಿರುವ ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿಯೂ ಸಹ ಲಘು ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications