ಉತ್ತರ ಪ್ರದೇಶದಲ್ಲಿ ಗೆಲ್ಲುವುದು ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆ
ಲಕ್ನೋ, ಜನವರಿ 13: ಉತ್ತರ ಪ್ರದೇಶದಲ್ಲಿ ಬಿ ಎಸ್ಪಿ ಮತ್ತು ಎಸ್ಪಿ ಪಕ್ಷಗಳು ಕಾಂಗ್ರೆಸ್ ಅನ್ನು ಹೊರಗಿಟ್ಟು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಮೇಲೆ ಉತ್ತರ ಪ್ರದೇಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸವಾಲು ಕಾಂಗ್ರೆಸ್ ಮುಂದಿದೆ.
ಆದ್ದರಿಂದಲೇ ಉತ್ತರ ಪ್ರದೇಶದಲ್ಲಿ 13 rally ಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರವಾದ ಅಮೇಥಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರವಾದ ರಾಯ್ಬರೇಲಿಯೂ ಉತ್ತರ ಪ್ರದೇಶದಲ್ಲಿಯೇ ಇದೆ.
ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಕಾರಣ ಕಾಂಗ್ರೆಸ್ಸಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಉತ್ತಮ ಪ್ರದರ್ಶನ ತೋರುವುದು ಮುಖ್ಯ. ಆದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಕಾಂಗ್ರೆಸ್ಸಿಗೆ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಹೋರಾಡುವುದು ಅನಿವಾರ್ಯವಾಗಿದೆ.

ಕಾಂಗ್ರೆಸ್ ಮೇಲೆ ಬೀರುವ ಪರಿಣಾಮವೇನು?
ಬಿಎಸ್ಪಿ-ಎಸ್ಪಿ ಮೈತ್ರಿ ಕಾಂಗ್ರೆಸ್ ಮೇಲೆ ಖಂಡಿತ ಪರಿಣಾಮ ಬೀರಿಯೇ ಬೀರುತ್ತದೆ. ಏಕೆಂದರೆ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳಿಗೆ ಸಾಕಷ್ಟು ಬೆಂಬಲಿಗರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವವರೇ, ಎಸ್ಪಿ-ಬಿಎಸ್ಪಿಗೂ ಮತದಾರರು. ಈ ಮತ ಇದೀಗ ಒಡೆಯುವುದು ಖಂಡಿತ. ಇದರಿಂದ ವಿರೋಧಿ ಬಿಜೆಪಿಗೆ ಲಾಭವಾಗುತ್ತದೆಯೇ ಹೊರತು, ಕಾಂಗ್ರೆಸ್ಸಿಗೆ ನಷ್ಟವಾಗುವುದು ಖಂಡಿತ.

ಎರಡು ಪ್ರಮುಖ ಕ್ಷೇತ್ರ ಬಿಟ್ಟುಕೊಟ್ಟಿದ್ದೇಕೆ?
ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಬಿಎಸ್ಪಿ ಸ್ಪರ್ಧಿಸುತ್ತಿಲ್ಲ. ಬಹುಶಃ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿ ಎಂಬ ಕಾರಣಕ್ಕೆ ಬೇಕೆಂದೇ ಇಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಎಸ್ಪಿ-ಎಸ್ಪಿ ನಿಲ್ಲಿಸಿಲ್ಲ.ಅದೂ ಅಲ್ಲದೆ ಈ ಎರಡು ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆ ಎಂಬುದು ಮಾಯಾವತಿ-ಅಖಿಲೇಶ್ ಗೆ ಗೊತ್ತಿಲ್ಲದ ವಿಷಯವಲ್ಲ.

ಚಿದಂಬರಂ ಮಾತಿನ ಮರ್ಮವೇನು?
ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಈ ಮೈತ್ರಿ ಬಗ್ಗೆ ಮಾತನಾಡುತ್ತ, 'ಈ ಮೈತ್ರಿ ನಿರ್ಧಾರವೇ ಅಂತಿಮವೆನ್ನುವುದಕ್ಕಾಗುವುದಿಲ್ಲ. ಅವರಲ್ಲಿ ಕೊನೇ ಕ್ಷಣದ ಬದಲಾವಣೆಗಳಾಗಬಹುದು' ಎಂದಿದ್ದಾರೆ. ಅಂದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂಬರ್ಥದಲ್ಲಿ ಅವರು ಮಾತನಾಡಿದಂತಿದೆ.

ಮೈತ್ರಿ ಸ್ವಾಗತಿಸಿದ ರಾಹುಲ್
"ಈ ಮೈತ್ರಿ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಮೈತ್ರಿಯನ್ನು ನಾನು ಸ್ವಾಗತಿಸುತ್ತೇನೆ. ನನಗೆ ಅಖಿಲೇಶ್ ಮತ್ತು ಮಾಯಾವತಿ ಇಬ್ಬರ ಬಗ್ಗೆಯೂ ಗೌರವವಿದೆ. ಉತ್ತರ ಪ್ರದೇಶದಲ್ಲಿ ನಮಗೆ ಸಾಕಷ್ಟು ಆಫರ್ ಗಳಿವೆ. ನಾವು ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಏಕಾಂಗಿಯಾಗಿ ಹೋರಾಡುವ ಸಾಮರ್ಥ್ಯವೂ ನಮಗಿದೆ" ಎಂದು ಗಾಂಧಿ ಹೇಳಿದ್ದಾರೆ.












Click it and Unblock the Notifications